ಉತ್ತರ ಪ್ರದೇಶ ರಾಜಕೀಯದಲ್ಲಿ ಪ್ರಿಯಾಂಕಾ ಪ್ರಭಾವ, ಯೋಗಿ ಏನಂತಾರೆ?
ಲಕ್ನೋ, ಮಾರ್ಚ್ 16: ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು, ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ ನಂತರ ಉತ್ತರ ಪ್ರದೇಶ ರಾಜಕೀಯದಲ್ಲಿ ಏನಾದರೂ ಬದಲಾವಣೆಯಾಗಿದೆಯಾ?
'ಇಲ್ಲವೇ ಇಲ್ಲ' ಎನ್ನುತ್ತಾರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸಿದ್ದಕ್ಕಾಗಿ ಬಿಜೆಪಿ ತನ್ನ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ. ಪ್ರಿಯಾಂಕಾ ಪ್ರವೇಶದಿಂದ ಯಾವುದೇ ಬದಲಾವಣೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಹೊರತಾಗಿಯೂ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿದ್ದಾರೆ.

ಯಾವ ಬದಲಾವಣೆಯೂ ಆಗೋಲ್ಲ!
"ಕಾಂಗ್ರೆಸ್ ಈ ಬಾರಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೂರ್ವ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಆಕೆ ಪಕ್ಷಕ್ಕಾಗಿ ಪ್ರಚಾರ ನಡೆಸುತ್ತಾರೆ, ಅದು ಸಹಜ. ಈ ಹಿಂದೆಯೂ ಅವರು ಪಕ್ಷಕ್ಕಾಗಿ ಪ್ರಚಾರ ನಡೆಸಿದ್ದರು. ಆಗಲೂ ಯಾವುದೇ ಬದಲಾವಣೆ ಆಗಿರಲಿಲ್ಲ, ಈಗಲೂ ಆಗೋಲ್ಲ" ಎಂದು ಯೋಗಿ ಹೇಳಿದರು.

ಮೋದಿ ಕ್ಷೇತ್ರದಲ್ಲಿ ಪ್ರಚಾರ
ಪ್ರಿಯಾಂಕಾ ಗಾಂಧಿ ಅವರು ಮಾರ್ಚ್ 18-20 ರ ವರೆಗೆ ಉತ್ತರ ಪ್ರದೇಶದಲ್ಲೇ ವಾಸ್ತವ್ಯ ಹೂಡಲಿದ್ದು, ಈ ಮೂರು ದಿನ ಮೋದಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಆದರೆ ಪ್ರಿಯಾಂಕಾ ಗಾಂಧಿ ಅವರು ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದ್ದು, ಅಚ್ಚರಿ ಮೂಡಿಸಿಸದೆ. ಅವರು ಚುನಾವಣಾ ಪ್ರಚಾರದಲ್ಲೇ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.

ಬೋಟ್ ನಲ್ಲಿ ಪ್ರಿಯಾಂಕಾ!
47 ವರ್ಷ ವಯಸ್ಸಿನ ಪ್ರಿಯಾಂಕಾ ಗಾಂಧಿ ಬೋಟ್ ರೈಡ್ ಮೂಲಕ ಪ್ರಚಾರ ಆರಂಭಿಸಲಿದ್ದಾರೆ. ಮುಳುಗುತ್ತಿರುವ ಕಾಂಗ್ರೆಸ್ ಹಡಗಿಗೆ ಅಂಬಿಗರಾಗಿ ಬಂದಿದ್ದಾರೆ ಪ್ರಿಯಾಂಕಾ ಗಾಂಧಿ ಎಂಬುದರ ಸೂಚನೆಯೇ ಇದು?

ಈ ಬಾರಿ ಜಾದೂ ಮಾಡುತ್ತಾ ಕಾಂಗ್ರೆಸ್?
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 70 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ದಾಖಲೆ ಬರೆದಿತ್ತು. ಕಾಂಗ್ರೆಸ್ ಅಮೇಥಿ(ರಾಹುಲ್ ಗಾಂಧಿ) ಮತ್ತು ರಾಯ್ ಬರೇಲಿ(ಸೋನಿಯಾ ಗಾಂಧಿ)ಯಲ್ಲಿ ಮಾತ್ರವೇ ಜಯ ಸಾಧಿಸಿತ್ತು. ಈ ಬಾರಿ ಏನಾದರೂ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಜಾದೂ ಮಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications