ಯೋಗಿ ಕ್ಷೇತ್ರದಲ್ಲಿ ಕೃಷಿ ಸಾಲ ಮನ್ನಾದ ಭರವಸೆ ನೀಡಿದ ಪ್ರಿಯಾಂಕಾ
ಗೋರಾಕ್ಪುರ, ಅಕ್ಟೋಬರ್ 31: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲಿಯೇ ಯೋಗಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯೋಗಿ ಕ್ಷೇತ್ರವಾದ ಗೋರಾಕ್ಪುರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೃಷಿ ಸಾಲ ಮನ್ನಾ, ಗೋಧಿ ಮತ್ತು ಭತ್ತವನ್ನು ಕ್ವಿಂಟಲ್ಗೆ 2500 ಕ್ಕೆ ಖರೀದಿ ಮಾಡುವ ಭರವಸೆ ಸೇರಿದಂತೆ ಚುನಾವಣಾ ಭರವಸೆಗಳ ಮಹಾಪೂರವನ್ನೇ ಮಾಡಿದ್ದಾರೆ.
"ಗುರು ಗೋರಾಕ್ನಾಥ್ ವಾಣಿಗೆ ವಿರುದ್ಧವಾಗಿ ಇಲ್ಲಿ ಕೆಲಸಗಳು ನಡೆಯುತ್ತಿದೆ. ಬುಲ್ಡೋಜರ್ಗಳನ್ನು ಬಳಸಲಾಗುತ್ತಿದೆ. ಜನರನ್ನು ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಲಾಗುತ್ತಿದೆ," ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರ್ಯಾಲಿಯಲ್ಲಿ ಆರೋಪ ಮಾಡಿದರು. ಹಾಗೆಯೇ ಸಂತ ಗೋರಖನಾಥರ ಹೆಸರಿನಲ್ಲಿ ಇರುವ ಪ್ರಮುಖ ಮಠದ ಮುಖ್ಯಸ್ಥರೂ ಆಗಿರುವ ಆದಿತ್ಯನಾಥರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೈತರು ಹಾಗೂ ಮೀನುಗಾರ ಸಮುದಾಯವನ್ನು ಭೇಟಿಯಾದರು. "ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಪಡೆದರೆ ಕೃಷಿಗೆ ನೀಡುವ ಮಾನ್ಯತೆಯನ್ನೇ ಮೀನುಗಾರಿಕೆಗೂ ನೀಡಲಾಗುತ್ತದೆ. ಕೃಷಿಯಂತೆಯೇ ಎಲ್ಲಾ ಸವಲತ್ತುಗಳನ್ನು ನೀಡಲಾಗುತ್ತದೆ. ಮರಳು ಗಣಿಗಾರಿಕೆ ಹಾಗೂ ಮೀನುಗಾರಿಕೆ ವಿಚಾರದಲ್ಲಿ ನಿಶಾದ್ ಸಮುದಾಯದ ಜನರ ಹಕ್ಕುಗಳನ್ನು ಮರು ಸ್ಥಾಪನೆ ಮಾಡಲಾಗುವುದು. ಇದಲ್ಲದೇ ಗುರು ಮಚೇಂದ್ರನಾಥರ ಹೆಸರಿನ ವಿಶ್ವವಿದ್ಯಾಲಯವನ್ನೂ ಸ್ಥಾಪಿಸಲಾಗುವುದು," ಎಂದು ಆಶ್ವಾಸನೆಯನ್ನು ಮೀನುಗಾರರ ಸಮುದಾಯಕ್ಕೆ ನೀಡಿದರು.

"ರೈತರ ಎಲ್ಲಾ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ಗೋಧಿ ಮತ್ತು ಭತ್ತವನ್ನು ಪ್ರತಿ ಕ್ವಿಂಟಲ್ಗೆ 2,500 ರೂಪಾಯಿಗೆ ಖರೀದಿ ಮಾಡಲಾಗುವುದು. ಕಬ್ಬನ್ನು ಪ್ರತಿ ಕ್ವಿಂಟಲ್ಗೆ 400 ರೂಪಾಯಿಗೆ ಖರೀದಿಸಲಾಗುತ್ತದೆ. ಬಿಡಾಡಿ ದನಗಳ ಸಮಸ್ಯೆಯನ್ನು ಛತ್ತೀಸ್ಗಢದ ಮಾದರಿಯಲ್ಲಿ ಪರಿಹರಿಸಲಾಗುವುದು ಮತ್ತು ಮತ್ತು ಸಂಪೂರ್ಣ ಪರಿಹಾರವನ್ನು ರೂಪಿಸಲಾಗುವುದು," ಎಂದು ತಿಳಿಸಿದರು.
ಇಪ್ಪತ್ತು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗದ ಭರವಸೆ
ಇನ್ನು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಪ್ಪತ್ತು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗವನ್ನು ನೀಡುವ ಭರವಸೆಯನ್ನು ಕೂಡಾ ನೀಡಿದರು. ಗುತ್ತಿಗೆ ಕಾರ್ಮಿಕರನ್ನು ಕಾರ್ಯ ಮಾಡಲಾಗುವುದು. ಇದು ಮಾತ್ರವಲ್ಲದೇ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ 10 ಲಕ್ಷದವರೆಗೆ ಯಾವುದೇ ಕಾಯಿಲೆಯ ಚಿಕಿತ್ಸೆಯ ವೆಚ್ಚವನ್ನು ನಮ್ಮ ಸರ್ಕಾರ ಭರಿಸಲಿದೆ. ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 25,000 ನೀಡಲಾಗುವುದು ಎಂದೂ ಹೇಳಿದರು.
ಇನ್ನು ಗೋರಖ್ಪುರದಿಂದ ಐದು ಬಾರಿ ಸಂಸದರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಈ ಜಿಲ್ಲೆಯಲ್ಲಿ ಆರೋಗ್ಯ ಸ್ಥಿತಿ ಹೀನಾಯವಾಗಿದೆ ಎಂದರು. "ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಈ ನಿಟ್ಟಿನಲ್ಲಿ ಈಗ ಈ ಜಿಲ್ಲೆಯಲ್ಲಿ ಏಮ್ಸ್ ನಿರ್ಮಾಣ ಮಾಡುತ್ತೇವೆ ಎಂದು ಸರ್ಕಾರ ಹೇಳಿಕೊಳ್ಳುವುದನ್ನು ನಾವು ಕೇಳಿದ್ದೇವೆ. ಚುನಾವಣೆ ಬರುತ್ತಿರುವ ಹಿನ್ನೆಲೆ ಈ ರೀತಿಯಾಗಿ ಸರ್ಕಾರ ಘೋಷಣೆ ಮಾಡುತ್ತಿದೆ. ಆದರೆ ಈ ಐದು ವರ್ಷದಲ್ಲಿ ಆ ಕಾರ್ಯವನ್ನು ಮಾಡಿಲ್ಲ. ಹಾಗಾದರೆ ಈಗ ಹೇಗೆ ಆ ಕಾರ್ಯವನ್ನು ಸರ್ಕಾರ ಮಾಡುತ್ತದೆ ಎಂದು ನಾವು ನಿರೀಕ್ಷಿಸುವುದು," ಎಂದು ಪ್ರಶ್ನಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ಕೇವಲ ಏಳು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ರಾಜಕೀಯವಾಗಿ ಉತ್ತರ ಪ್ರದೇಶದಲ್ಲಿ ಮತ್ತೆ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಘಟನೆ ನಡೆದರೂ ಅದಕ್ಕೆ ಕಾಂಗ್ರೆಸ್ ಮಧ್ಯ ಪ್ರವೇಶ ಮಾಡುತ್ತಿದೆ. ಇನ್ನು ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಕ್ಷೇತ್ರವಾದ ವಾರಣಾಸಿಯಲ್ಲಿ ರ್ಯಾಲಿಯನ್ನು ನಡೆಸಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications