ಬಿಜೆಪಿಗೆ ಲಾಭ ಮಾಡುವ ಬದಲು ಸಾಯುವುದು ಒಳಿತು: ಪ್ರಿಯಾಂಕಾ ಗಾಂಧಿ
ನವದೆಹಲಿ, ಏಪ್ರಿಲ್ 2: ಬಿಜೆಪಿಗೆ ನೆರವಾಗುವ ಬದಲು ಸಾಯುವುದೇ ಲೇಸು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದ ಎಸ್ಪಿ-ಬಿಎಸ್ಪಿ ಮೈತ್ರಿಕೂಟಕ್ಕೆ ಹೇಳಿದ್ದಾರೆ.
'ಈ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ವಂತ ಬಲದಿಂದಲೇ ಸ್ಪರ್ಧಿಸುತ್ತಿದೆ ಎಂಬುದನ್ನು ತುಂಬಾ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಹೆಚ್ಚಿನ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಪ್ರಬಲವಾಗಿ ಹೋರಾಡುತ್ತಿದ್ದಾರೆ. ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತ ಬೇಕಾದರೆ ನಾನು ಸಾಯುತ್ತೇನೆ ಎನ್ನುತ್ತೇನೆ. ಕಠಿಣ ಸ್ಪರ್ಧೆ ನೀಡುವ ಹಾಗೂ ಬಿಜೆಪಿ ಮತಗಳನ್ನು ಕಸಿದುಕೊಳ್ಳುವ ಅಭ್ಯರ್ಥಿಗಳ ಆಯ್ಕೆಗೆ ನನ್ನ ಎಲ್ಲ ಸಂಶೋಧನೆಗಳಲ್ಲಿ ಮತ್ತು ನನ್ನ ಎಲ್ಲ ಕೆಲಸಗಳಲ್ಲಿ ತುಂಬಾ ಸ್ಪಷ್ಟವಾಗಿದ್ದೆ' ಎಂದು ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಹೇಳಿದ್ದಾರೆ.
ಬಿಜೆಪಿ ತನ್ನ ವಿರುದ್ಧ ನಡೆಸಿರುವ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಅವರು, 'ನನ್ನ ಆದ್ಯತೆ ದೇಶ. ಈ ದೇಶವನ್ನು ನಾಶಪಡಿಸುವ, ಸಂಸ್ಥೆಗಳನ್ನು ನಾಶಪಡಿಸುವ ಮತ್ತು ಭಾರತವನ್ನು ಪ್ರಜಾಪ್ರಭುತ್ವವನ್ನಾಗಿ ಮಾಡಿರುವ ಪ್ರತಿಯೊಂದನ್ನೂ ನಾಶಪಡಿಸುವ ಸಿದ್ಧಾಂತವನ್ನು ಸೋಲಿಸುವುದು ಮೊದಲ ಆದ್ಯತೆ' ಎಂದರು.

'ಬಿಜೆಪಿಯ ಮತಗಳನ್ನು ಕಸಿದುಕೊಳ್ಳುವ ಅಥವಾ ಕಾಂಗ್ರೆಸ್ ಗೆಲ್ಲುವಂತಹ ಅಭ್ಯರ್ಥಿಗಳನ್ನು ನಾವು ಎಚ್ಚರಿಕೆಯಿಂದ ಆಯ್ಕೆ ಮಾಡಿದ್ದೇವೆ. ಯುಪಿ ಮೈತ್ರಿಕೂಟದ ಮತಗಳನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿಲ್ಲ' ಎಂದು ಅವರು ಬುಧವಾರ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ನಾಯಕ ಅಖಿಲೇಶ್ ಯಾದವ್, 'ನಾನು ಈ ರೀತಿಯ ಹೇಳಿಕೆಗಳನ್ನು ನಂಬುವುದಿಲ್ಲ. ಎಲ್ಲ ಕಡೆಯೂ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸಿದೆ ಎನ್ನುವುದನ್ನು ನಾನು ನಂಬಲಾರೆ. ಯಾವ ಪಕ್ಷವೂ ಅದನ್ನು ಮಾಡುವುದಿಲ್ಲ. ಜನರು ಅವರೊಂದಿಗೆ ಇಲ್ಲ. ಆ ಕಾರಣಕ್ಕಾಗಿ ಅವರು ಜಾರಿಕೊಳ್ಳುವ ಹೇಳಿಕೆ ನೀಡುತ್ತಿದ್ದಾರೆ' ಎಂದಿದ್ದರು.












Click it and Unblock the Notifications