ಕಮಲೇಶ್ ತಿವಾರಿ ಹತ್ಯೆ, ಖಾಲಿಯಿದ್ದ ಪಕ್ಷಾಧ್ಯಕ್ಷ ಸ್ಥಾನ ಪತ್ನಿಗೆ
ಉತ್ತರ ಪ್ರದೇಶದಲ್ಲಿ ಹಿಂದು ಸಮಾಜ ಪಕ್ಷದ ನಾಯಕ ಕಮಲೇಶ್ ತಿವಾರಿ ಹತ್ಯೆಯ ವಿಚಾರಣೆ ಪ್ರಗತಿಯಲ್ಲಿದೆ. ಈ ನಡುವೆ ಖಾಲಿಯಿದ್ದ ಪಕ್ಷಾಧ್ಯಕ್ಷ ಸ್ಥಾನಕ್ಕೆ ತಿವಾರಿ ಅವರ ಪತ್ನಿ ಕಿರಣ್ ತಿವಾರಿ ಅವರನ್ನೇ ಕೂರಿಸುವ ಮೂಲಕ ಹಿಂದು ಸಮಾಜ ಪಕ್ಷ ತಮ್ಮ ನಾಯಕನ ಕುಟುಂಬಕ್ಕೇ ಮಣೆ ಹಾಕಿದೆ.
ಪಕ್ಷದ ಸಂಸ್ಥಾಪಕರೂ ಆಗಿದ್ದ, 43 ವರ್ಷ ವಯಸ್ಸಿನ ಕಮಲೇಶ್ ತಿವಾರಿ ಅವರನ್ನು ಅಕ್ಟೋಬರ್ 18 ರಂದು ಉತ್ತರ ಪ್ರದೇಶದ ನಾಕಾ ಎಂಬಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ದೇಶದಾದ್ಯಂತ ತಲ್ಲಣ ಸೃಷ್ಟಿಟಿಸಿತ್ತು.
ಕಮಲೇಶ್ ತಿವಾರಿ ಕೊಲೆ ಪ್ರಮುಖ ಆರೋಪಿ 2 ತಿಂಗಳ ಹಿಂದಷ್ಟೇ ದುಬೈನಿಂದ ಬಂದಿದ್ದ
ಕಮಲೇಶ್ ಅವರ ಮನೆಯ ಹೊರಗೇ ಅವರನ್ನು ಕೊಲೆ ಮಾಡಲಾಗಿದ್ದು, ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಕ್ಯಾಮರಾ ಫೂಟೇಜ್ ಅನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ಪರಿಶೀಲಿಸಿದಾಗ ಕೊಲೆ ನಡೆಯುವ ಮುನ್ನ ಕಮಲೇಶ್ ಮನೆಯ ಬಳಿ ಮೂವರು ಆಗಮಿಸಿದ್ದು ಸರೆಯಾಗಿದೆ. ಅದರಲ್ಲಿ ಇಬ್ಬರು ಪುರುಷರಿದ್ದರೆ, ಓರ್ವ ಮಹಿಳೆ ಇದ್ದರು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಪೊಲೀಸರು ಬಂಧಿಸಿದ್ದಾರೆ.
2015 ರಲ್ಲಿ ತಿವಾರಿ ಪ್ರವಾದಿ ಮೊಹಮ್ಮದ್ ಬಗ್ಗೆ ಆಡಿದ್ದ ವಿವಾದಾತ್ಮಕ ಮಾತುಗಳೇ ಅವರ ಕೊಲೆಗೆ ಕಾರಣವಿರಬಹುದು ಎಂದು ಅಂದಾಜಿಸಿದ್ದಾರೆ. ಎಫ್ ಐಆರ್ ನಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ ಮುಸ್ಲಿಂ ಧಾರ್ಮಿಕ ಮುಖಂಡರು 2016 ರಲ್ಲೇ ಕಮಲೇಶ್ ತಿವಾರಿ ಅವರನ್ನು ಕೊಂದರೆ 51 ಲಕ್ಷ ರೂ. ಬಹುಮಾನ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು. ಅದೇ ಈ ಕೊಲೆಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಮಲೇಶ್ ತಿವಾರಿ ಮರಣೋತ್ತರ ವರದಿ: 15 ಬಾರಿ ಇರಿತ, ಒಮ್ಮೆ ಗುಂಡೇಟು!
ಕಮಲೇಶ್ ಅವರ ಹತ್ಯೆಯ ನಂತರ ತನಿಖೆ ಸರಿಯಾಗಿ ಸಾಗುತ್ತಿಲ್ಲ, ಆರೋಪಿಗಳನ್ನು ಬಂಧಿಸುವ ಯತ್ನ ನಡೆಯುತ್ತಿಲ್ಲ ಎಂದು ದೂರಿದ್ದ ಕಮಲೇಶ್ ಪತ್ನಿ ಕಿರಣ್, ಈ ಕುರಿತು ತಕ್ಷಣವೇ ತನಿಖೆ ನಡೆಯಬೇಕು. ಇಲ್ಲವೆಂದರೆ ನಾನು ನನ್ನ ಮಕ್ಕಳೊಂದಿಗೆ ಆತ್ಮಾಹುತಿಗೊಳಗಾಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆ ನಂತರ ಹತ್ಯೆ ನಡೆದ ಮೂರ್ನಾಲ್ಕು ದಿನಗಳಲ್ಲೇ ಕೆಲವು ಆರೋಪಿಗಳನ್ನು ಬಂಧಿಸಿದ್ದರಿಂದ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದರು.