ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ಹಿಂದೂ ಧರ್ಮಕ್ಕೆ ಮತಾಂತರ
ಲಕ್ನೋ, ಡಿ 7 (ಪಿಟಿಐ): ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ, ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಸೋಮವಾರ (ಡಿ 6) ಮತಾಂತರಗೊಂಡಿದ್ದಾರೆ.
ಘಾಜಿಯಾಬಾದ್ ನಲ್ಲಿರುವ ದಾಸನ ಮಂದಿರದ ಮಹಾಂತ ನರಸಿಂಹ ಆನಂದ ಸರಸ್ವತಿಯವರ ಸಮ್ಮುಖದಲ್ಲಿ ವಾಸಿಂ ರಿಜ್ವಿ, ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ರಿಜ್ವಿಯವರಿಗೆ ಹಬೀರ್ ನಾರಾಯಣ ಸಿಂಗ್ ತ್ಯಾಗಿ ಎಂದು ಮರುನಾಮಕರಣ ಮಾಡಲಾಗಿದೆ.
"ಇಸ್ಲಾಂ ಧರ್ಮದಿಂದ ನನ್ನನ್ನು ಉಚ್ಚಾಟನೆ ಮಾಡಲಾಗಿತ್ತು. ಹಾಗಾಗಿ, ಯಾವ ಧರ್ಮಕ್ಕೆ ನಾನು ಸೇರಬೇಕು ಎನ್ನುವುದು ಸಂಪೂರ್ಣವಾಗಿ ನನ್ನ ಆಯ್ಕೆ'ಎಂದು ವಾಸಿಂ ರಿಜ್ವಿ ಆಲಿಯಾಸ್ ಹಬೀರ್ ನಾರಾಯಣ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

"ಇಂದು ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ, ವಿಶ್ವದ ಪ್ರಥಮ ಧರ್ಮವೇ ಸನಾತನ ಧರ್ಮ, ಈ ಧರ್ಮವನ್ನು ನಾನು ಗೌರವಿಸುತ್ತೇನೆ ಮತ್ತು ಇದು ಮಾನವೀಯತೆಗೆ ಬೆಲೆಕೊಡುವ ಧರ್ಮವಾಗಿದೆ, ನನ್ನ ಹತ್ಯೆಗೆ ಬಹುಮಾನ ಘೋಷಿಸಲಾಗಿತ್ತು" ಎಂದು ಹಬೀರ್ ಸಿಂಗ್ ಹೇಳಿದ್ದಾರೆ.
"ರಿಜ್ವಿಯವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ, ಈಗ ಇವರ ವಿರುದ್ದ ಯಾವುದೇ ಮತಾಂಧರು ಫತ್ವಾ ಹೊರಡಿಸುವಂತಿಲ್ಲ" ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ.
ವಾಸಿಂ ರಿಜ್ವಿಯವರು ವಿವಾದಿತ ವ್ಯಕ್ತಿಯಾಗಿದ್ದರು, ಕುರಾನ್ ನಲ್ಲಿರುವ ಹಲವು ಸಾಲುಗಳನ್ನು ತೆಗೆದು ಹಾಕಬೇಕು ಎಂದು ರಿಜ್ವಿ ಸರ್ವೊಚ್ಚ ನ್ಯಾಯಾಲಯದಲ್ಲಿ ಪಿಐಎಲ್ ಹಾಕಿದ್ದರು. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಇವರಿಗೆ ಸಾಕಷ್ಟು ಜೀವ ಬೆದರಿಕೆ ಕರೆಗಳು ಬರುತ್ತಿದ್ದವು. ಪ್ರವಾದಿ ಮೊಹಮ್ಮದ್ ಬಗ್ಗೆ ಪುಸ್ತಕವೊಂದರಲ್ಲಿ ಅವಮಾನ ಮಾಡಿದ್ದಾರೆ ಎನ್ನುವ ಆರೋಪವೂ ಇವರ ಮೇಲಿದೆ.












Click it and Unblock the Notifications