ಜೆಡಿಎಸ್ ತೊರೆದು ಬಿಎಸ್ಪಿ ಸೇರಿದ್ದ ಡ್ಯಾನಿಶ್ ಅಲಿ ಚುನಾವಣೆಯಲ್ಲಿ ಗೆದ್ರು!
ಲಕ್ನೋ, ಮೇ 25: ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುವ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸಿದ್ದ ಡ್ಯಾನಿಶ್ ಅಲಿ, ಸಾರ್ವತ್ರಿಕ ಚುನಾವಣೆಗೆ ಒಂದೆರಡು ತಿಂಗಳ ಮುನ್ನ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಮಾಯಾವತಿ ಜೊತೆ ಈ ಹಿಂದಿನ ಮಾತುಕತೆಯಂತೆ, ಡ್ಯಾನಿಶ್ ಆಲಿಗೆ ಬಿಎಸ್ಪಿ ಅಮ್ರೋಹ್ ಕ್ಷೇತ್ರದ ಟಿಕೆಟ್ ಅನ್ನು ನೀಡಿತ್ತು. ಮುಸ್ಲಿಂ ಪ್ರಾಬಲ್ಯದ ಈ ಕ್ಷೇತ್ರವೇ ನೀಡುವಂತೆ ಕುನ್ವರ್ ಡ್ಯಾನಿಶ್ ಅಲಿ ಮನವಿ ಮಾಡಿದ್ದರು.

ಅಮ್ರೋಹ್ ಕ್ಷೇತ್ರದಲ್ಲಿ ಡ್ಯಾನಿಶ್ ಅಲಿ ತಮ್ಮ ಸಮೀಪದ ಬಿಜೆಪಿ ಅಭ್ಯರ್ಥಿಯ ವಿರುದ್ದ ಜಯಗಳಿಸಿದ್ದಾರೆ. ಬಿಜೆಪಿಯ ಕನ್ವರ್ ಸಿಂಗ್ ತನ್ವರ್ ಅವರನ್ನು ಡ್ಯಾನಿಶ್ 63,248 ಮತಗಳ ಅಂತರದಿಂದ ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಡ್ಯಾನಿಶ್ ಅಲಿಗೆ 601,082 ಮತಗಳು, ಕನ್ವರ್ ಸಿಂಗ್ ಅವರಿಗೆ 537,834 ಮತಗಳು ಬಿದ್ದಿದ್ದವು. ಸಮ್ಮಿಶ್ರ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಆಲಿ, ಸಮನ್ವಯ ಸಮಿತಿಯ ಸದಸ್ಯರೂ ಆಗಿದ್ದರು.
ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರಿಗೂ ಸಮಿತಿಯಲ್ಲಿ ಸ್ಥಾನ ಸಿಗದೇ ಇದ್ದರೂ ಡ್ಯಾನಿಶ್ ಅಲಿ ಸಮಿತಿಯ ಸದಸ್ಯರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಎಸ್ಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿತ್ತು.
ದೇವೇಗೌಡರು ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ನಡುವೆ ದೆಹಲಿಯಲ್ಲಿ ಆ ವೇಳೆ ಸೀಟು ಹೊಂದಾಣಿಕೆ ಸಂಬಂಧ ನಡೆದಿದ್ದ ಮಾತುಕತೆಯ ಆಧಾರದ ಮೇಲೆಯೇ ಡ್ಯಾನಿಶ್ ಅಲಿ ಜೆಡಿಎಸ್ ಗೆ ರಾಜೀನಾಮೆ ನೀಡಿದ್ದರು.












Click it and Unblock the Notifications