ಯುಪಿ ಬಸ್ ರಾಜಕಾರಣ: ನಿರ್ಮಲಾ ಸೀತಾರಾಮನ್ ಎಂಟ್ರಿ!
ಲಕ್ನೋ, ಮೇ 20: ಉತ್ತರ ಪ್ರದೇಶದ ಬಸ್ ರಾಜಕಾರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಭಾಗವಹಿಸಿದ್ದಾರೆ. ''ವಲಸೆ ಕಾರ್ಮಿಕರನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಛತ್ತಿಸ್ ಗಢ ದ ಕಾರ್ಮಿಕರು ಕಾಣಿಸುವುದಿಲ್ಲವಾ''? ಎಂದು ನಿರ್ಮಲಾ ಸೀತಾರಾಮನ್, ಪ್ರಿಯಾಂಕಾ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಬುಧವಾರ ಎಎನ್ಐ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ''ವಲಸೆ ಕಾರ್ಮಿಕರ ವಿಚಾರದಲ್ಲಿ ಕೇವಲ ಉತ್ತರ ಪ್ರದೇಶದತ್ತ ಗಮನ ಹರಿಸುವ ಅವಳು, (ಪ್ರಿಯಾಂಕಾ ಗಾಂಧಿ) ಕಾಂಗ್ರೆಸ್ ಅಡಳಿತವಿರುವ ಛತ್ತಿಸ್ಗಢದ ಕಡೆಗೂ ಗಮನ ಹರಿಸಲಿ ನೋಡೋಣ'' ಎಂದು ಹೇಳಿದ್ದಾರೆ.
ಕಾರ್ಮಿಕರಿಗೆ ಸಹಾಯ ಮಾಡಲು ಅನುಮತಿ ಕೊಡಿ: ಪ್ರಿಯಾಂಕಾ ಗಾಂಧಿ ಮನವಿ
''ಉತ್ತರ ಪ್ರದೇಶದ ನಿಜವಾದ ಕೆಲಸವನ್ನು ಅವಳು ನೋಡಬೇಕಾದರೆ, 300 ಶ್ರಮಿಕ್ ರೈಲುಗಳು ಉತ್ತರ ಪ್ರದೇಶದಲ್ಲಿ ಓಡಿವೆ. ಛತ್ತಿಸ್ಗಢದಲ್ಲಿ ಯಾಕೆ 7 ಶ್ರಮಿಕ್ ರೈಲುಗಳು ಮಾತ್ರ ಓಡಿದವು ಎಂಬುದಕ್ಕೆ ಉತ್ತರಿಸಬೇಕು. ವಲಸೆ ಕಾರ್ಮಿಕರನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಸರಿ ಅಲ್ಲ'' ಎಂದು ನಿರ್ಮಲಾ ಅವರು ಹೇಳಿದ್ದಾರೆ.
ಬೇರೆ ರಾಜ್ಯಗಳಿಂದ ಉತ್ತರ ಪ್ರದೇಶಕ್ಕೆ ಆಗಮಿಸಿರುವ ಸಾವಿರಾರು ವಲಸೆ ಕಾರ್ಮಿಕರು ರಾಜ್ಯದ ವಿವಿಧ ಗಡಿಭಾಗಗಳಲ್ಲಿ ಒಳಗೆ ಬರಲು ಕಾಯುತ್ತಿದ್ದಾರೆ. ಕೊವಿಡ್ ಹಿನ್ನೆಲೆಯಲ್ಲಿ ಅವರನ್ನೆಲ್ಲ ಯುಪಿ ಸರ್ಕಾರ ತಡೆ ಹಿಡಿದಿದೆ. ಇದಕ್ಕೆ ಗರಂ ಆಗಿರುವ ಪ್ರಿಯಾಂಕಾ ಗಾಂಧಿ, ಕಾರ್ಮಿಕರನ್ನು ಕಳುಹಿಸಲು ನಾವು ಬಸ್ಗಳ ವ್ಯವಸ್ಥೆ ಮಾಡಿದ್ದೇವೆ. ಈ ಬಸ್ಗಳ ಮೇಲೆ ಬಿಜೆಪಿ ಭಾವುಟ ಹಾರಿಸಿಯಾದರೂ ಕಾರ್ಮಿಕರನ್ನು ಅವರ ಮನೆಗೆ ಕಳುಹಿಸಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.