ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಭೀತಿ; ವಲಸೆ ಕಾರ್ಮಿಕರ ಗುಳೆ
ಲಕ್ನೋ, ಏಪ್ರಿಲ್ 13; ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ ರಾಜ್ಯದಲ್ಲಿ 51,751 ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗುವ ಸಾಧ್ಯತೆ ಇದೆ.
ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ನಗರದಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರು ಲಾಕ್ ಡೌನ್ ಘೋಷಣೆ ಬಗ್ಗೆ ಆತಂಕಗೊಂಡಿದ್ದಾರೆ. ಉತ್ತರ ಪ್ರದೇಶಕ್ಕೆ ರೈಲುಗಳಲ್ಲಿ ವಾಪಸ್ ಆಗುತ್ತಿದ್ದಾರೆ.
ಗೋರಖ್ಪುರ, ವಾರಣಾಸಿ, ಪ್ರಯಾಗ್ ರಾಜ್, ಲಕ್ನೋ ಮುಂತಾದ ನಿಲ್ದಾಣಗಳಿಗೆ ಮಹಾರಾಷ್ಟ್ರದಿಂದ ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ವಾಪಸ್ ಆಗುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ರೈಲು ನಿಲ್ದಾಣಕ್ಕೆ ಬಂದ ಹಲವಾರು ವಲಸೆ ಕಾರ್ಮಿಕರು ಮಹಾರಾಷ್ಟ್ರದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಳವಾಗಿದ್ದರಿಂದ ಆತಂಕವಾಗಿದೆ. ಪುನಃ ಲಾಕ್ ಡೌನ್ ಆಗುವ ಸಾಧ್ಯತೆ ಇದೆ ಎಂದು ವಾಪಸ್ ಆಗಿದ್ದೇವೆ ಎಂದು ಹೇಳಿದ್ದಾರೆ.
ಮುಂಬೈ-ಸುಲ್ತಾನ್ಪುರ್ ರೈಲಿನಲ್ಲಿ ಕಾರ್ಮಿಕರು ಹೆಚ್ಚಾಗಿ ವಾಪಸ್ ಆಗುತ್ತಿದ್ದಾರೆ. 45 ವಿಶೇಷ ರೈಲುಗಳಲ್ಲಿ ಶೇ 80ರಷ್ಟು ಸೀಟುಗಳು ಭರ್ತಿಯಾಗಿದ್ದವು ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಮುಂಬೈನಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಅಲ್ಲಿ ಕೆಲಸವೂ ಸಿಗುತ್ತಿಲ್ಲ. ನಮ್ಮ ಬಳಿ ಉಳಿದಿರುವ ಸ್ವಲ್ಪ ಹಣದಲ್ಲಿ ನಾವು ಊರಿಗೆ ವಾಪಸ್ ಆಗಿದ್ದೇವೆ ಎಂದು ಕಾರ್ಮಿಕರು ಹೇಳಿದ್ದಾರೆ. ಮುಂಬೈನಲ್ಲಿ ಸರಿಯಾಗಿ ಆರೋಗ್ಯ ಸೇವೆಯೂ ಸಿಕ್ಕಿಲ್ಲ, ಲಸಿಕೆ ಕೂಡಾ ಸಿಗುತ್ತಿಲ್ಲ. ಆದ್ದರಿಂದ, ಸುಲ್ತಾನ್ಪುರ್ಗೆ ವಾಪಸ್ ಆಗಿದ್ದೇವೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಅಂದಹಾಗೆ ಮುಂಬೈ ನಗರದಲ್ಲಿ ಸೋಮವಾರ 6,905 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು 43 ಜನರು ಮೃತಪಟ್ಟಿದ್ದಾರೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5,27,119ಕ್ಕೆ ಏರಿಕೆಯಾಗಿದೆ. ಏಪ್ರಿಲ್ 1ರಂದು 8,646 ಮತ್ತು ಏಪ್ರಿಲ್ 4ರಂದು 11,163 ಹೊಸ ಪ್ರಕರಣ ನಗರದಲ್ಲಿ ದಾಖಲಾಗಿತ್ತು.












Click it and Unblock the Notifications