ಯುಪಿಯಲ್ಲಿ ಸತ್ಯಪಾಲ್ ಸಿಂಗ್ ಬಾಘೇಲ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ
ಲಕ್ನೋ, ಫೆಬ್ರವರಿ 15: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡುವೆ ಮಂಗಳವಾರ ಮೈನ್ಪುರಿ ಜಿಲ್ಲೆಯ ಕರ್ಹಾಲ್ನಲ್ಲಿ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಬಾಘೇಲ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ.
ಕರ್ಹಾಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಸತ್ಯಪಾಲ್ ಸಿಂಗ್ ಬಾಘೇಲ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ವರದಿಗಳ ಪ್ರಕಾರ, ದಾಳಿಯ ವೇಳೆ ಬಿಜೆಪಿ ನಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಲ್ಲು ತೂರಾಟದಿಂದ ಬಾಘೇಲ್ ಬೆಂಗಾವಲು ಪಡೆಯ ವಾಹನವೊಂದರ ಗಾಜುಗಳು ಒಡೆದು ಪುಡಿಪುಡಿಯಾಗಿದೆ.

ಸತ್ಯಪಾಲ್ ಸಿಂಗ್ ಬಾಘೇಲ್ ಮೇಲಿನ ದಾಳಿಯನ್ನು ಭಾರತೀಯ ಜನತಾ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯ ಹಿಂದೆ ಸಮಾಜವಾದಿ ಪಕ್ಷದ "ಗೂಂಡಾಗಳು" ಇದ್ದಾರೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಆರೋಪಿಸಿದ್ದಾರೆ.
ಅಖಿಲೇಶ್ ಯಾದವ್ ವಿರುದ್ಧ ಟ್ವೀಟ್:
ಅಖಿಲೇಶ್ ಯಾದವ್ ಜೀ, ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಅಭ್ಯರ್ಥಿ ಆಗಿರುವ ಕೇಂದ್ರ ಸಚಿವ ಎಸ್ ಪಿ ಸಿಂಗ್ ಬಾಘೇಲ್ ಹಾಗೂ ಬಿಜೆಪಿ ನಾಯಕರ ಮೇಲೆ ನಿಮ್ಮ ಮುದ್ದಿನ ಗೂಂಡಾಗಳ ಮೂಲಕ ಹಲ್ಲೆ ನಡೆಸಿದ್ದೀರಿ. ನಿನ್ನೆ ಬಿಜೆಪಿ ಸಂಸದೆ ಗೀತಾ ಶಾಕ್ಯಾ ಮೇಲೂ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಟ್ವೀಟ್ ಮಾಡಿದ್ದಾರೆ.
ಎಲ್ಲಿ ನಡೆದಿದೆ ಕಲ್ಲುತೂರಾಟದ ಘಟನೆ:
ಉತ್ತರ ಪ್ರದೇಶ ಮೈನ್ಪುರಿ ಜಿಲ್ಲೆ ಠಾಣಾ ಕರ್ಹಾಲ್ನ ರಹಮತುಲ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುಪಿ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುಂಚಿತವಾಗಿ ಬಾಘೇಲ್ ಈ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದರು. ಇತರ ಪಕ್ಷದ ನಾಯಕರೊಂದಿಗೆ ಅತಿಕುಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈಗಾಗಲೇ ಗ್ರಾಮದ ಹೊರಭಾಗದಲ್ಲಿದ್ದ ಕೆಲವರು ಬಾಘೆಲ್ನ ಬೆಂಗಾವಲು ಪಡೆ ಮೇಲೆ ಕಲ್ಲೆಸೆಯಲು ಪ್ರಾರಂಭಿಸಿದರು. ಈ ದಾಳಿಯಲ್ಲಿ ವಾಹನವೊಂದು ಜಖಂಗೊಂಡಿದ್ದು, ಘಟನೆಯಲ್ಲಿ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.












Click it and Unblock the Notifications