ಎಸ್ಪಿ-ಆರ್ಎಲ್ಡಿ ಮೈತ್ರಿಯಿಂದ ತತ್ತರಿಸಿದ ಆದಿತ್ಯನಾಥ್, ಪಕ್ಷದಲ್ಲಿಯೇ ಪ್ರತ್ಯೇಕ: ಅಖಿಲೇಶ್
ಲಕ್ನೋ ಫೆಬ್ರವರಿ 3: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲೇವಡಿ ಮಾಡಿದ್ದಾರೆ. ಯೋಗಿ ಆಡಳಿತ ವೈಖರಿಯಿಂದ ಬೇಸತ್ತಿರುವ ಅವರ ಸ್ವಂತ ಪಕ್ಷವು ಅವರನ್ನು ಒಂಟಿಯಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಶಾಮ್ಲಿಯ ಕೈರಾನಾದಲ್ಲಿ ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಸಿಎಂ ಅವರ ಭಾಷೆಯ ಬಗ್ಗೆ ವಾಗ್ದಾಳಿ ನಡೆಸಿದರು. ಬಿಸಿ ರಕ್ತದ ಆರ್ಎಲ್ಡಿ ಮಗು ಇದ್ದಂತೆ. ಅದು ಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಆದಿತ್ಯನಾಥ್ರ ಟೀಕೆಗಳನ್ನು ಅಖಿಲೇಶ್ ಈ ವೇಳೆ ಉಲ್ಲೇಖಿಸಿದರು. ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ನಂತರ ಅವರ ಬಿಸಿ ರಕ್ತ ತಣ್ಣಗಾಗುತ್ತದೆ ಎಂದು ಸಿಎಂ ಯೋಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಖಿಲೇಶ್ ಯಾದವ್, ಜಯಂತ್ ಚೌಧರಿ ಬಹಳ ಹಿಂದಿನಿಂದಲೂ ಎಸ್ಪಿಯ ಪಾಲುದಾರರಾಗಿದ್ದಾರೆ. ಅವರಿಗೆ ತಮ್ಮ ಪಕ್ಷದಿಂದ ಸಿಗಬೇಕಾದ ಗೌರವ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ಎಸ್ಪಿ-ಆರ್ಎಲ್ ಮೈತ್ರಿಕೂಟಕ್ಕೆ ರೈತರಿಂದ ಸಿಗುತ್ತಿರುವ ಬೆಂಬಲದ ಬಗ್ಗೆ ಬಿಜೆಪಿ ಚಿಂತಿಸುತ್ತಿದೆ. ಈ ಚುನಾವಣೆಯಲ್ಲಿ ತಮ್ಮ ಆತ್ಮಗೌರವ ಮತ್ತು ಘನತೆಯನ್ನು ರೈತರು ಉಳಿಸಿಕೊಳ್ಳುತ್ತಾರೆ. ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆಯ ವೇಳೆ ಕೆಲವು ರೈತರು ಜೀಪಿನಡಿ ಸಿಲುಕಿ ಪ್ರಾಣ ಕಳೆದುಕೊಂಡಿರುವುದನ್ನು ಅವರು ಮರೆಯುವುದಿಲ್ಲ ಎಂದು ಕಳೆದ ಅಕ್ಟೋಬರ್ನಲ್ಲಿ ನಡೆದ ಲಕ್ಷ್ಮೀಪುರ ಖೇರಿ ಹಿಂಸಾಚಾರವನ್ನು ಉಲ್ಲೇಖಿಸಿ ಅಖಿಲೇಶ್ ಮಾತನಾಡಿದರು.

ಈ ಮುಖ್ಯಮಂತ್ರಿಯಿಂದ ನಾವು ಇನ್ನೇನು ನಿರೀಕ್ಷಿಸಬಹುದು? ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗುವುದೇ ಎಂಬುದನ್ನು ಅವರೇ ಹೇಳಬೇಕು. ಅವನು ಇಂಥಹ ಭರವಸೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ವಾಸ್ತವವಾಗಿ ಒಬ್ಬ ಸಿಎಂ ಇಂತಹ ಮಾತುಗಳನ್ನು ಹೇಗೆ ಹೇಳುತ್ತಿದ್ದಾರೆ ಎಂಬುದನ್ನು ಚುನಾವಣಾ ಆಯೋಗವು ಗಮನಿಸಬೇಕು ಎಂದು ಅಖಿಲೇಶ್ ಹರಿಹಾಯ್ದರು.
ಆದಿತ್ಯನಾಥ್ ಅವರು ಬಿಜೆಪಿಯೊಳಗೆ ಒಂಟಿಯಾಗಿರುವುದರಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ಯಾದವ್ ಹೇಳಿದ್ದಾರೆ. "ಮುಖ್ಯಮಂತ್ರಿಗಳಿಗೆ ಸಂಬಂಧಿಸಿದಂತೆ, ಅವರ ಅಫಿಡವಿಟ್ ಮತ್ತು ಅವರು ಹೊಂದಿರುವ ಪ್ರಕರಣಗಳ ಸಂಖ್ಯೆಯನ್ನು ನೋಡಿ. ಅವರನ್ನು ಸಿಎಂ ಮಾಡಿ ತಪ್ಪು ಮಾಡಿದೆಯೇ ಎಂದು ಬಿಜೆಪಿ ಚಿಂತಿಸುತ್ತಿದೆ. ಮುಖ್ಯಮಂತ್ರಿ ಅವರು ಇತರ ಸ್ಥಾನಗಳಿಂದ ಚುನಾವಣಾ ಟಿಕೆಟ್ ಬಯಸಿದ್ದರು ಆದರೆ ನಿರಾಕರಿಸಲಾಗಿದೆ ಮತ್ತು ಮನೆಗೆ ಕಳುಹಿಸಲಾಗಿದೆ" ಎಂದು ಯಾದವ್ ಹೇಳಿದರು.
ಪಕ್ಷವು ಅವರ ತವರು ಗೋರಖ್ಪುರದಿಂದ ಅವರನ್ನು ನಾಮನಿರ್ದೇಶನ ಮಾಡುವ ಮೊದಲು, ಸಿಎಂ ಅವರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಬಹುದು ಎಂಬ ಊಹಾಪೋಹವಿತ್ತು. ಪೂರ್ವಾಂಚಲ್ ಎಕ್ಸ್ಪ್ರೆಸ್ವೇ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರಿನಲ್ಲಿದ್ದಾಗ ಆದಿತ್ಯನಾಥ್ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಿಡಿಯೊ ಕ್ಲಿಪ್ ಅನ್ನು ಮಾಜಿ ಮುಖ್ಯಮಂತ್ರಿ ಉಲ್ಲೇಖಿಸಿ, ಪಕ್ಷವು ಅವರನ್ನು ನಡೆಸಿಕೊಂಡ ರೀತಿಯಿಂದ ಸಿಎಂ ಹತಾಶರಾಗಿದ್ದಾರೆ ಎಂದರು.
ಅವರು ಬಿಜೆಪಿಯಿಂದ ಭವಿಷ್ಯದಲ್ಲಿ ಏನನ್ನೂ ಪಡೆಯುವುದಿಲ್ಲ ಮತ್ತು ಅದಕ್ಕಾಗಿಯೇ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಸ್ಪಿ ಮೈತ್ರಿಕೂಟಕ್ಕೆ ಸಿಕ್ಕಿರುವ ಬೆಂಬಲದಿಂದ ಅವರು ಬೆಚ್ಚಿಬಿದ್ದಿದ್ದಾರೆ. ಕೇಂದ್ರದ ಬಜೆಟ್ ಅನ್ನು "ಅಮೃತ ಕಾಲ" ಎಂದು ಕರೆದಿದ್ದಕ್ಕಾಗಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಅಖಿಲೇಶ್ ಬಜೆಟ್ ಜನಸಾಮಾನ್ಯರಿಗೆ ವಿಷಕಾಋಇಯಾಗಿದೆ ಎಂದು ಕೇಳಿದರು.
"ಬಜೆಟ್ನಲ್ಲಿ ವಜ್ರಗಳು, ಚಪ್ಪಲಿಗಳು ಮತ್ತು ಬೂಟುಗಳನ್ನು ಅಗ್ಗಗೊಳಿಸಲಾಗಿದೆ. ಅಗ್ಗದ ವಜ್ರಗಳು ಬಡವರಿಗೆ ಹೇಗೆ ಸಹಾಯ ಮಾಡುತ್ತವೆ? ಬಡವರ, ಯುವಕರ ಚಪ್ಪಲಿ, ಶೂ ಸವೆದು ಹೋಗಿದೆ. ಆದರೆ ಅವರ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಯುಪಿಯಲ್ಲಿ ಬಿಜೆಪಿಯ ಕಾಲ ಮುಗಿಯಲಿದೆ ಎಂದರು. ಶಾಮ್ಲಿ ಜಿಲ್ಲೆಯ ಕೈರಾನಾ, ಶಾಮ್ಲಿ ಮತ್ತು ಠಾಣಾ ಭವನದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.












Click it and Unblock the Notifications