ಉ.ಪ್ರದೇಶ ಬಿಸಿಲಿನ ಝಳಕ್ಕೆ ನಾಲ್ವರು ರೈಲು ಪ್ರಯಾಣಿಕರು ಸಾವು
ಲಖನೌ, ಜೂನ್ 11: ಕೇರಳ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ಉತ್ತರ ಪ್ರದೇಶದ ಬಿಸಿಲಿನ ಝಳಕ್ಕೆ ಸಾವನ್ನಪ್ಪಿರುವ ವಿಚಿತ್ರ ಘಟನೆ ನಡೆದಿದೆ.
ಕೇರಳ ಎಕ್ಸ್ಪ್ರೆಸ್ ನಲ್ಲಿ ಆಗ್ರಾದಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಹೀಗೆ ಬಿಸಿಲಿನ ಝಳಕ್ಕೆ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ನಾಲ್ಕೂ ಜನ ಹಿರಿಯ ನಾಗರೀಕರಾಗಿದ್ದಾರೆ.
ವಾರಣಾಸಿ, ಆಗ್ರಾ ಪ್ರವಾಸ ಮುಗಿಸಿ ಕೊಯಮತ್ತೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ಸೋಮವಾರ ಸಂಜೆಯೇ ಕೆಲವರು ಉಸಿರಾಟದ ತೊಂದರೆ ಉಂಟಾಗುತ್ತಿರುವ ಬಗ್ಗೆ ದೂರು ನೀಡಿದ್ದರು. ಆದರೆ ಜಾನ್ಸಿಗೆ ಬರುವ ವೇಳೆಗೆ ಮೂವರು ರೈಲಿನ ಬೋಗಿಯಲ್ಲಿಯೇ ತೀರಿಕೊಂಡಿದ್ದಾರೆ, ಒಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಆದರೆ ಅವರು ಅಲ್ಲಿ ಮೃತಪಟ್ಟಿದ್ದಾರೆ.

ಸಾವನ್ನಪ್ಪಿರುವ ಪ್ರಯಾಣಿಕರು ಇತರ ಪ್ರಯಾಣಿಕರ ಜೊತೆ ಕೇರಳ ಎಕ್ಸ್ಪ್ರೆಸ್ನ ಎಸ್-8 ಮತ್ತು ಎಸ್-9 ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು, ಇದು ನಾನ್-ಎಸಿ ಬೋಗಿಯಾಗಿತ್ತು. ಒಟ್ಟು 68 ಮಂದಿ ಕೇರಳದ ವಿವಿಧ ಭಾಗದಿಂದ ಉತ್ತರ ಭಾರತದ ಪ್ರವಾಸಕ್ಕೆ ಆಗಮಿಸಿದ್ದರು.
ಜಾನ್ಸಿ ಮೆಡಿಕಲ್ ಕಾಲೇಜಿನಲ್ಲಿ ನಾಲ್ವರು ಮೃತರ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕೊಯಮತ್ತೂರಿಗೆ ಕಳುಹಿಸಿಕೊಡಲಾಗಿದೆ ಎಂದು ರೈಲ್ವೆ ಅಧಿಕಾರಿ ಹೇಳಿದ್ದಾರೆ. ಮೃತರನ್ನು ಬುಂಧೂರು ಪಳನಿಸ್ವಾಮಿ (80), ಬಾಲಕೃಷ್ಣ ರಾಮಸ್ವಾಮಿ (69), ಚಿನ್ನಾರೆ (71), ದಿವಾ ನೈ (71) ಎಂದು ಹೇಳಲಾಗಿದೆ.












Click it and Unblock the Notifications