ಶಿವಕುಮಾರ ಸ್ವಾಮೀಜಿ ಆರೋಗ್ಯಕ್ಕಾಗಿ ಲಂಡನ್ ಕನ್ನಡಿಗರ ಪ್ರಾರ್ಥನೆ
ಲಂಡನ್, ಜನವರಿ 21 : ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳಾದ ಶತಾಯುಶಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಶೀಘ್ರ ಗುಣಮುಖರಾಗಲೆಂದು ಯುನೈಟೆಡ್ ಕಿಂಗಡಂನ ಅನಿವಾಸಿ ಭಾರತೀಯರು, ಅಲ್ಲಿನ ಬಸವೇಶ್ವರ ಪುತ್ಥಳಿಯ ಮುಂದೆ ಪ್ರಾರ್ಥನೆ ಮಾಡಿದ್ದಾರೆ.
111 ವರ್ಷ ವಯಸ್ಸಿನ, ನಡೆದಾಡುವ ದೇವರೆಂದೇ ಭಕ್ತರಿಂದ ಕರೆಯಿಸಿಕೊಳ್ಳುವ ಶಿವಕುಮಾರ ಸ್ವಾಮೀಜಿಗಳು, ಚೆನ್ನೈನಲ್ಲಿ ಶಸ್ತ್ರಚಿಕಿತ್ಸೆ ಪಡೆದುಬಂದ ನಂತರ ತುಮಕೂರಿನ ಮಠದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀಗಳ ಆರೋಗ್ಯ ಸ್ಥಿರವಾಗಿರಲೆಂದು ಮತ್ತು ಅವರು ಚೇತರಿಸಿಕೊಳ್ಳಲೆಂದು ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ನಿಂದ, ಲಂಡನ್ ಸಂಸತ್ತಿನ ಮುಂದಿರುವ ಬಸವೇಶ್ವರ ಪುತ್ಥಳಿಯ ಮುಂದೆ ವಿಶೇಷ ಪ್ರಾರ್ಥನೆಯನ್ನು ಜನವರಿ 20ರಂದು ಆಯೋಜಿಸಲಾಗಿತ್ತು.

ಬಸವೇಶ್ವರ ಪುತ್ಥಳಿಯ ಪ್ರತಿಷ್ಠಾಪನೆಗೂ ಮೊದಲು 2013ರ ಫೆಬ್ರವರಿ 17ರಂದು ಶ್ರೀ ಶಿವಕುಮಾರ ಸ್ವಾಮೀಜಿಗಳು, ಲಂಡನ್ನಿನ ಬಸವೇಶ್ವರ ಪುತ್ಥಳಿ ಅಡಿಪಾಯಕ್ಕೆಂದು ಶಿಲೆಯನ್ನು ಕಾಣಿಕೆಯಾಗಿ ನೀಡಿದ್ದರು. ಶ್ರೀಗಳು ಕಾಣಿಕೆಯಾಗಿ ನೀಡಿರುವ ಶಿಲೆ ಪಂಚ ಲೋಹಗಳಿಂದ ತಯಾರಿಸಲಾಗಿದೆ.

ಲಂಡನ್ ಬರೋ ಆಫ್ ಲ್ಯಾಂಬೆತ್ ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ, ಬ್ರಿಟನ್ ನಾಗರಿಕರು, ಕನ್ನಡ ಸಂಘಟನೆಯ ಸದಸ್ಯರು, ಶ್ರೀಗಳ ಆರೋಗ್ಯಕ್ಕಾಗಿ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಪ್ರಾರ್ಥನೆ ಸಲ್ಲಿಸಿದರು. ಶ್ರೀಗಳ ಸಮಾಜಕ್ಕೆ ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡಬೇಕೆಂದು ಭಾರತ ಸರಕಾರವನ್ನು ಆಗ್ರಹಿಸಿದರು.












Click it and Unblock the Notifications