ಯುಕೆಯಲ್ಲಿ ಭಾರತೀಯ ಮೂಲದ ವೈದ್ಯನಿಂದ 48 ರೋಗಿಗಳ ಮೇಲೆ ಲೈಂಗಿಕ ಅಪರಾಧ ಸಾಬೀತು
ಲಂಡನ್, ಏಪ್ರಿಲ್ 15: ಸ್ಕಾಟ್ಲೆಂಡ್ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ 72 ವರ್ಷದ ಭಾರತೀಯ ಮೂಲದ ವೈದ್ಯರೊಬ್ಬರು 35 ವರ್ಷ ಮೇಲ್ಪಟ್ಟ 48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದು, ಆ ಆರೋಪ ಸಾಬೀತಾಗಿದೆ. ಗುರುವಾರ ಭಾರತೀಯ ಮೂಲದ ವೈದ್ಯರು ತಪ್ಪಿತಸ್ಥರೆಂದು ಸಾಬೀತಾಗಿದೆ.
ಜನರಲ್ ಪ್ರ್ಯಾಕ್ಟೀಷನರ್ ಕೃಷ್ಣ ಸಿಂಗ್ ತನ್ನ ರೋಗಿಗಳಿಗೆ ಮುತ್ತು ನೀಡುತ್ತಿದ್ದರು, ತಬ್ಬಿಕೊಳ್ಳುತ್ತಿದ್ದರು, ಅಸಂಬಂಧ ಪರೀಕ್ಷೆಯನ್ನು ನಡೆಸುತ್ತಿದ್ದರು, ಅಶ್ಲೀಲವಾಗಿ ಮಾತನಾಡುತ್ತಿದ್ದರು ಎಂಬ ಆರೋಪವನ್ನು ಎದುರಿಸುತ್ತಿದ್ದರು. ಆದರೆ ಗ್ಲಾಸ್ಗೋದಲ್ಲಿನ ಹೈಕೋರ್ಟ್ನಲ್ಲಿ ವಿಚಾರಣೆಯ ಸಂದರ್ಭದಲ್ಲಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದರು.
ತನ್ನ ರೋಗಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಕೃಷ್ಣ ಸಿಂಗ್ ಆರೋಪ ಮಾಡಿದ್ದರು. ಭಾರತದಲ್ಲಿ ವೈದ್ಯಕೀಯ ತರಬೇತಿ ಪಡೆಯುವ ಸಂದರ್ಭದಲ್ಲಿ ನಾನು ಈ ಚಿಕಿತ್ಸಾ ಕ್ರಮವನ್ನು ಕಲಿತ್ತಿದ್ದೇನೆ. ಇದು ಸಾಮಾನ್ಯ, ರೋಗಿಗಳು ತಪ್ಪಾಗಿ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದರು.

1983-2018 ರ ನಡುವಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ
ಸ್ಕಾಟ್ಲ್ಯಾಂಡ್ನ ಸುದ್ದಿ ವರದಿಗಳ ಪ್ರಕಾರ, ಆರೋಪಗಳು ಫೆಬ್ರವರಿ 1983 ಮತ್ತು ಮೇ 2018 ರ ನಡುವೆ ನಡೆದಿರುವ ಘಟನೆಗಳನ್ನು ಆಧರಿಸಿ ಮಾಡಲಾಗಿದೆ. ಉತ್ತರ ಲನಾರ್ಕ್ಷೈರ್ನಲ್ಲಿ ವೈದ್ಯಕೀಯ ಅಭ್ಯಾಸದ ಸಂದರ್ಭದಲ್ಲಿ ಹೆಚ್ಚಾಗಿ 72 ವರ್ಷದ ಭಾರತೀಯ ಮೂಲದ ವೈದ್ಯ ಕೃಷ್ಣ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದಿದೆ.
ಇನ್ನು ಇಷ್ಟು ಮಾತ್ರವಲ್ಲದೇ ಆಸ್ಪತ್ರೆಯ ಅಪಘಾತ ಮತ್ತು ತುರ್ತು ವಿಭಾಗ, ಪೊಲೀಸ್ ಠಾಣೆ ಮತ್ತು ರೋಗಿಗಳ ಮನೆಗಳಿಗೆ ಭೇಟಿ ನೀಡಿದಾಗಲೂ ಈ ಲೈಂಗಿಕ ಅಪರಾಧ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

"ಡಾ ಕೃಷ್ಣ ಸಿಂಗ್ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡುವುದನ್ನು ರೂಢಿ ಎಂಬಂತೆ ಮಾಡಿಕೊಂಡಿದ್ದರು," ಎಂದು ತೀರ್ಪಿನ ವೇಳೆ ಪ್ರಾಸಿಕ್ಯೂಟರ್ ಏಂಜೆಲಾ ಗ್ರೇ ನ್ಯಾಯಾಲಯಕ್ಕೆ ತಿಳಿಸಿದರು. "ಕೆಲವೊಮ್ಮೆ ಸೂಕ್ಷ್ಮವಾಗಿ, ಕೆಲವೊಮ್ಮೆ ಬಹಳ ಸ್ಪಷ್ಟವಾಗಿ ತಿಳಿಯುವಂತೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದರು. ಲೈಂಗಿಕ ಅಪರಾಧವು ಅವರ ವೃತ್ತಿ ಜೀವನದ ಒಂದು ಭಾಗ ಎಂಬಂತೆ ಆಗಿತ್ತು," ಎಂದು ಪ್ರಾಸಿಕ್ಯೂಟರ್ ಏಂಜೆಲಾ ಗ್ರೇ ನ್ಯಾಯಾಲಯಕ್ಕೆ ಹೇಳಿದ್ದಾರೆ.
ರಾಯಲ್ ಮೆಂಬರ್ ಆಫ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಗೌರವ ಪಡೆದಿರುವ ಕೃಷ್ಣ ಸಿಂಗ್
ಕೃಷ್ಣ ಸಿಂಗ್ ಅವರನ್ನು ಸಮುದಾಯದ ಗೌರವಾನ್ವಿತ ಸದಸ್ಯರಾಗಿ ನೋಡಲಾಯಿತು, ವೈದ್ಯಕೀಯ ಸೇವೆಗಳಿಗೆ ಅವರ ಕೊಡುಗೆಗಾಗಿ ರಾಯಲ್ ಮೆಂಬರ್ ಆಫ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಗೌರವವನ್ನು ಸಹ ನೀಡಲಾಗಿದೆ. 2018 ರಲ್ಲಿ ಮಹಿಳೆಯೊಬ್ಬರು ದೂರು ನೀಡಿದ ಬಳಿಕ ಕೃಷ್ಣ ಸಿಂಗ್ ನಡವಳಿಕೆಯ ಬಗ್ಗೆ ತನಿಖೆಯನ್ನು ಪ್ರಾರಂಭ ಮಾಡಲಾಗಿದೆ. ಸದ್ಯ ಕೃಷ್ಣ ರೆಡ್ಡಿ ವಿರುದ್ಧ 54 ಆರೋಪಗಳು ಇದೆ. ಮುಖ್ಯವಾಗಿ ಬಹು ಲೈಂಗಿಕ ಮತ್ತು ಅಸಭ್ಯ ವರ್ತನೆಯ ಆರೋಪವಿದೆ. ಒಂಬತ್ತು ಇತರ ಆರೋಪಗಳು ಸಾಬೀತಾಗಿಲ್ಲ ಮತ್ತು ಇನ್ನೆರಡು ಆರೋಪಗಳಲ್ಲಿ ತಪ್ಪಿತಸ್ಥರಲ್ಲ ಎಂದು ಸಾಬೀತಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆ ಘೋಷಣೆಯನ್ನು ಮುಂದಿನ ತಿಂಗಳವರೆಗೆ ಮುಂದೂಡಿದರು. ಕೃಷ್ಣ ಸಿಂಗ್ ಪಾಸ್ಪೋರ್ಟ್ ಒಪ್ಪಿಸುವ ಷರತ್ತಿನ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶ ನೀಡಿದರು.












Click it and Unblock the Notifications