ಬಿಸಿ ಬಿಸಿ ಬೋಂಡಾ, ಸಮೋಸಾವನ್ನು ಇನ್ಮುಂದೆ ನ್ಯೂಸ್ ಪೇಪರ್ನಲ್ಲಿ ಸುತ್ತಿ ಕೊಡುವಂತಿಲ್ಲ: FSSAI ಕಟ್ಟುನಿಟ್ಟಿನ ಆದೇಶ
ಬಾಲ್ಯದಿಂದಲೂ ನಾವು ನ್ಯೂಸ್ ಪೇಪರ್ಗಳೊಂದಿಗೆ ಒಂದು ವಿಶಿಷ್ಟ ಹಾಗೂ ಹತ್ತಿರದ ನಂಟು ಹೊಂದಿದ್ದೇವೆ. ಸುದ್ದಿ ಓದುವುದರಿಂದ ಹಿಡಿದು, ಬೀದಿ ಬದಿಯಲ್ಲಿ ಸಿಗುವ ಬಿಸಿ ಬಿಸಿ ಬೋಂಡಾ, ಸಮೋಸಾ, ಪಕೋಡ ಅಥವಾ ಕಡ್ಲೆಕಾಯಿಯಂತಹ ತಿಂಡಿಗಳನ್ನು ಪೇಪರ್ನಲ್ಲಿಯೇ ಸುತ್ತಿಕೊಂಡು ತಿಂದ ನೆನಪುಗಳು ನಮ್ಮಲ್ಲಿ ಅಚ್ಚಳಿಯದೆ ಉಳಿದಿವೆ. ಆದರೆ, ದಶಕಗಳಿಂದ ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಈ ಸಾಮಾನ್ಯ ಅಭ್ಯಾಸ ವಾಸ್ತವದಲ್ಲಿ ನಮ್ಮ ಆರೋಗ್ಯಕ್ಕೆ ಅತ್ಯಂತ ಮಾರಕ ಎಂಬ ಆಘಾತಕಾರಿ ಸತ್ಯವನ್ನು ತಜ್ಞರು ಹಾಗೂ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ.
ಹೌದು, ಇನ್ಮುಂದೆ ನಾವು ಬಹಳ ಇಷ್ಟಪಟ್ಟು ತಿನ್ನುವ ಆಹಾರವನ್ನು ಯಾವುದೇ ಕಾರಣಕ್ಕೂ ವೃತ್ತಪತ್ರಿಕೆಗಳಲ್ಲಿ ಸುತ್ತಬಾರದು ಎಂಬುದು ಈಗ ಅಧಿಕೃತವಾಗಿ ಸಾಬೀತಾಗಿದೆ.

ಎಫ್ಎಸ್ಎಸ್ಎಐ ಕಟ್ಟುನಿಟ್ಟಿನ ಆದೇಶ
ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಇದೀಗ ದೇಶಾದ್ಯಂತ ಎಲ್ಲಾ ಆಹಾರ ಮಾರಾಟಗಾರರಿಗೆ, ಹೋಟೆಲ್ ಮಾಲೀಕರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯೊಂದನ್ನು ನೀಡಿದೆ. ಇನ್ನು ಮುಂದೆ ಯಾವುದೇ ರೀತಿಯ ಆಹಾರವನ್ನು ಗ್ರಾಹಕರಿಗೆ ಬಡಿಸಲು ಅಥವಾ ಪಾರ್ಸೆಲ್ ಕಟ್ಟಲು ವೃತ್ತಪತ್ರಿಕೆಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಪೇಪರ್ ಬಳಕೆ ನಿಷೇಧವು ಕೇವಲ ಆಹಾರದ ಅಂದವನ್ನು ಕಾಪಾಡುವ ವಿಚಾರವಲ್ಲ. ಬದಲಾಗಿ, ನಮಗೆ ಅರಿವಿಲ್ಲದೆಯೇ ನಮ್ಮ ದೇಹವನ್ನು ಪ್ರವೇಶಿಸುವ ಮಾರಕ ಹಾಗೂ ವಿಷಕಾರಿ ಅಂಶಗಳನ್ನು ತಡೆಯುವ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
ನ್ಯೂಸ್ ಪೇಪರ್ ಶಾಯಿ ಮತ್ತು ರಾಸಾಯನಿಕಗಳ ಅಪಾಯ
ಸಾಮಾನ್ಯವಾಗಿ ನ್ಯೂಸ್ ಪೇಪರ್ಗಳನ್ನು ಮುದ್ರಿಸಲು ಬಳಸುವ ಶಾಯಿಯಲ್ಲಿ ಹಲವಾರು ರೀತಿಯ ಅಪಾಯಕಾರಿ ರಾಸಾಯನಿಕಗಳು, ಸೀಸ, ಮತ್ತು ಹೆವಿ ಮೆಟಲ್ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಬಿಸಿ ಬಿಸಿಯಾದ ಅಥವಾ ಎಣ್ಣೆ ಅಂಶವಿರುವ ಆಹಾರವನ್ನು ಈ ಪೇಪರ್ನಲ್ಲಿ ಸುತ್ತಿದಾಗ, ತಾಪಮಾನ ಮತ್ತು ಎಣ್ಣೆಯ ಪ್ರಭಾವದಿಂದ ಅದರಲ್ಲಿರುವ ಶಾಯಿ ಕರಗಿ ಬಹಳ ಸುಲಭವಾಗಿ ನಮ್ಮ ಆಹಾರವನ್ನು ಸೇರಿಕೊಳ್ಳುತ್ತದೆ. ಈ ರೀತಿ ಕಲುಷಿತಗೊಂಡ ಆಹಾರವನ್ನು ನಾವು ನಿತ್ಯ ಸೇವಿಸುವುದರಿಂದ ಆ ಅಪಾಯಕಾರಿ ರಾಸಾಯನಿಕಗಳು ನೇರವಾಗಿ ನಮ್ಮ ದೇಹದ ಪ್ರವೇಶಿಸುತ್ತವೆ.
ದೀರ್ಘಕಾಲದವರೆಗೆ ಈ ರೀತಿ ಪೇಪರ್ನಲ್ಲಿ ಕಟ್ಟಿದ ಆಹಾರ ಸೇವನೆ ಮಾಡುವುದರಿಂದ ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳು, ನರಮಂಡಲದ ನ್ಯೂನತೆಗಳು, ಜೀರ್ಣಕ್ರಿಯೆ ಸಮಸ್ಯೆಗಳು ಹಾಗೂ ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ಕುಂದುವ ಅಪಾಯವಿದೆ ಎಂದು ಎಫ್ಎಸ್ಎಸ್ಎಐ ವೈದ್ಯಕೀಯ ವರದಿಗಳ ಆಧಾರದ ಮೇಲೆ ಸ್ಪಷ್ಟಪಡಿಸಿದೆ.
ನಮ್ಮ ಸಮಾಜದಲ್ಲಿ ಕೆಲವು ಅಭ್ಯಾಸಗಳು ಹಲವು ವರ್ಷಗಳಿಂದ ನಡೆದುಕೊಂಡು ಬಂದಿವೆ ಎಂಬ ಒಂದೇ ಕಾರಣಕ್ಕೆ ಅವು ಸಂಪೂರ್ಣ ಸುರಕ್ಷಿತ ಎಂದು ಭಾವಿಸುವುದು ದೊಡ್ಡ ತಪ್ಪು. ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸಣ್ಣ ಹೋಟೆಲ್ಗಳಿಗೆ ಪೇಪರ್ ಬಳಕೆ ಅತ್ಯಂತ ಅಗ್ಗ ಮತ್ತು ಸುಲಭವಾಗಿ ದೊರೆಯುವ ಸಾಧನ ಎನಿಸಬಹುದು. ಆದರೆ, ಸ್ವಲ್ಪ ಹಣ ಉಳಿಸುವ ಭರದಲ್ಲಿ ಇದು ಲಕ್ಷಾಂತರ ಸಾರ್ವಜನಿಕರ ಅಮೂಲ್ಯ ಆರೋಗ್ಯದ ಜೊತೆ ಚೆಲ್ಲಾಟವಾಡಿದಂತಾಗುತ್ತದೆ.
ಪರ್ಯಾಯ ಮಾರ್ಗಗಳು
ಈ ಕಾರಣಕ್ಕಾಗಿ ಎಫ್ಎಸ್ಎಸ್ಎಐ ಈ ಕಠಿಣ ನಿರ್ಧಾರ ಕೈಗೊಂಡಿದೆ. ಪೇಪರ್ ಬದಲಿಗೆ ಆಹಾರವನ್ನು ಕಟ್ಟಲು ಸುರಕ್ಷಿತವಾದ ಫುಡ್-ಗ್ರೇಡ್ ಪ್ಯಾಕೇಜಿಂಗ್ ವಸ್ತುಗಳನ್ನು, ನೈಸರ್ಗಿಕವಾದ ಬಾಳೆ ಎಲೆ, ಅಥವಾ ಸ್ವಚ್ಛವಾದ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸುವಂತೆ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸಲಹೆ ನೀಡಿದೆ.
ವ್ಯಾಪಾರಿಗಳು ಮಾತ್ರವಲ್ಲದೆ, ಗ್ರಾಹಕರು ಕೂಡ ಈ ವಿಚಾರದಲ್ಲಿ ಹೆಚ್ಚು ಜಾಗೃತರಾಗಬೇಕಾದ ಅಗತ್ಯವಿದೆ. ತಾವು ಹಣ ಕೊಟ್ಟು ಖರೀದಿಸುವ ಆಹಾರವನ್ನು ಪೇಪರ್ನಲ್ಲಿ ಕಟ್ಟಿಕೊಟ್ಟರೆ, ಅದನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದು ನೋಡಲು ನಮ್ಮ ದೈನಂದಿನ ಜೀವನದಲ್ಲಿ ಒಂದು ಸಣ್ಣ ಬದಲಾವಣೆಯಂತೆ ಕಂಡರೂ, ಮುಂದಿನ ಪೀಳಿಗೆಯ ಆರೋಗ್ಯಕರ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಹಾಗೂ ಸ್ವಾಗತಾರ್ಹ ನಿರ್ಧಾರವಾಗಿದೆ.














Click it and Unblock the Notifications