ಕೊನೆಯ ಪ್ರಚಾರ ಕಾರ್ಯಕ್ರಮದಲ್ಲಿ ರಿಷಿ ಸುನಕ್ 'ಕುಟುಂಬ' ಶ್ಲಾಘನೆ
ಲಂಡನ್, ಸೆ. 01: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಮುಂಚಿನ ಪ್ರಚಾರ ಕಾರ್ಯಕ್ರಮಗಳಿಗೆ ತೆರೆಬಿದ್ದಿದೆ. ಪ್ರಧಾನಿ ಅಭ್ಯರ್ಥಿಯಾಗಿರುವ ಭಾರತೀಯ ಮೂಲದ ರಿಷಿ ಸುನಕ್ ತಮ್ಮ ಕೊನೆಯ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಲಂಡನ್ನ ವೆಂಬ್ಲೆಯಲ್ಲಿ ನಿನ್ನೆ ಬುಧವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ರಿಷಿ ಸುನಕ್ಗೆ ಭರ್ಜರಿ ಸ್ವಾಗತ ಸಿಕ್ಕಿತು. ಅಮೆರಿಕದ ಟೈಮ್ಸ್ ಸ್ಕ್ವಯರ್ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕ ರೀತಿಯಲ್ಲೇ ವೆಂಬ್ಲೆಯಲ್ಲಿ ರಿಷಿ ಸುನಕ್ಗೆ ರಾಕ್ಸ್ಟಾರ್ ರೀತಿಯ ಕರತಾಡನ ದೊರಕಿತು. ವೆಂಬ್ಲೆ ಅಂಗಳದಲ್ಲಿ 'ರಿಷಿ, ರಿಷಿ' ಸದ್ದು ಮಾರ್ದನಿಸಿತು.
ಎತ್ತ ಸಾಗುತ್ತಿದೆ ಬ್ರಿಟನ್-ಚೀನಾ ಸಂಬಂಧ? ರಿಷಿ, ಲಿಜ್ ವಾಗ್ಬಾಣದ ಇಂಗಿತ ಏನು?
ಸೆಪ್ಟೆಂಬರ್ 5ರಂದು ಬ್ರಿಟನ್ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ಚುನಾವಣೆ ನಡೆಯುತ್ತಿದೆ. ಪಕ್ಷದ ಸರ್ವಸದಸ್ಯರೂ ಅಂದು ಮತ ಚಲಾಯಿಸಿ ನಾಯಕನನ್ನು ಆರಿಸಲಿದ್ದಾರೆ. ಅಲ್ಲಿ ಗೆದ್ದವರು ಬ್ರಿಟನ್ನ ಪ್ರಧಾನಿಯಾಗಲಿದ್ದಾರೆ. ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಅವರಿಬ್ಬರ ಮಧ್ಯೆ ಹಣಾಹಣಿ ನಡೆಯುತ್ತಿದೆ.
ಈಗಿರುವ ಟ್ರೆಂಡ್ಗಳ ಪ್ರಕಾರ ಮತ್ತು ಬೆಟಿಂಗ್ ಪ್ರಕಾರ ಲಿಜ್ ಟ್ರುಸ್ ಗೆಲುವಿನ ಸಾಧ್ಯತೆ ದಟ್ಟವಾಗಿದೆ. ಚುನಾವಣೆಯ ಮೊದಲ ಹಂತದಲ್ಲಿ ಎಲ್ಲಾ ಸುತ್ತುಗಳಲ್ಲೂ ಮೊದಲ ಸ್ಥಾನ ಪಡೆದಿದ್ದ ರಿಷಿ ಸುನಕ್ ಎರಡನೇ ಹಂತದಲ್ಲಿ ಗೆಲ್ಲುವುದು ಕಷ್ಟ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ ನಿನ್ನೆ ವೆಂಬ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಪಾಲಿಗೆ ರಿಷಿ ಸುನಕ್ ಫೇವರಿಟ್ ಎಂಬಂತಹ ಸ್ಥಿತಿ ಇತ್ತು.
ಇಂಗ್ಲೆಂಡ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಗೆಲುವಿಗಾಗಿ ಹೋಮ-ಹವನ
ಅಪ್ಪ, ಅಮ್ಮನ ನೆನೆದ ರಿಷಿ
"ಈ ನನ್ನ ಕೊನೆಯ ಪ್ರಚಾರ ಕಾರ್ಯಕ್ರಮ ಬಹಳ ವಿಶೇಷವಾದುದು. ನಾನು ಸಾರ್ವಜನಿಕ ಜೀವನಕ್ಕೆ ಬರಲು ಪ್ರೇರೇಪಿಸಿದ ಇಬ್ಬರು ವ್ಯಕ್ತಿಗಳಾದ ನನ್ನ ಅಪ್ಪ ಮತ್ತು ಅಮ್ಮ ಇವತ್ತು ಇಲ್ಲಿದ್ದಾರೆ" ಎಂದು ಹೇಳುವ ಮೂಲಕ ರಿಷಿ ಸುನಕ್ ಕಾರ್ಯಕ್ರಮಕ್ಕೆ ಭಾವನಾತ್ಮಕ ಆರಂಭ ಕೊಟ್ಟರು.
ರಿಷಿ ಸುನಕ್ ಭಾರತೀಯ ಮೂಲದವರಾಗಿದ್ದು, ಅವರ ತಂದೆ ಯಶವೀರ್ ವೃತ್ತಿಯಲ್ಲಿ ವೈದ್ಯರು. ಅವರ ತಾಯಿ ಉಷಾ ಫಾರ್ಮಾಸಿಸ್ಟ್ ಆಗಿದ್ದಾರೆ.
"ನನ್ನ ತಂದೆ ತಾಯಿ ಮಾಡುತ್ತಿದ್ದ ಸೇವೆ, ಜನರಿಗೆ ಅವರು ಮಾಡುತ್ತಿದ್ದ ಸಹಾಯ ನನ್ನನ್ನು ರಾಜಕೀಯಕ್ಕೆ ಬರಲು ಪ್ರೇರೇಪಿಸಿತು. ಅಮ್ಮ, ಅಪ್ಪ ನಿಮಗೆ ನನ್ನ ಥ್ಯಾಂಕ್ಸ್. ನಿಮ್ಮ ಜೀವನಕ್ಕಿಂತ ಹೆಚ್ಚಾಗಿ ಮಕ್ಕಳ ಜೀವನವನ್ನು ಉತ್ತಮಪಡಿಸಲು ಬಹಳಷ್ಟು ತ್ಯಾಗ ಮಾಡಿದ್ದೀರಿ. ಪರಿಶ್ರಮ ಮತ್ತು ನಂಬಿಕೆ, ಕುಟುಂಬದ ಮೇಲಿನ ಪ್ರೀತಿ, ಇವು ಇದ್ದರೆ ನಮ್ಮ ಸಾಧನೆಗೆ ಮಿತಿಯೆ ಇರುವುದಿಲ್ಲ ಎಂಬುದನ್ನು ನನಗೆ ಕಲಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು" ಎಂದು ರಿಷಿ ಸುನಕ್ ಹೇಳಿದಾಗ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದರು.
ಪತ್ನಿಗೆ ಹೊಗಳಿಕೆ
ಇನ್ಫೋಸಿಸ್ ಸಂಸ್ಥಾಪಕ ಎನ್ ನಾರಾಯಣಮೂರ್ತಿಯವರ ಮಗಳು ಅಕ್ಷತಾ ರಿಷಿ ಸುನಕ್ ಪತ್ನಿ. ಅವರೂ ಕೂಡ ಕಾರ್ಯಕ್ರಮದಲ್ಲಿದ್ದರು. ಪತ್ನಿಯ ತ್ಯಾಗವನ್ನೂ ರಿಷಿ ಈ ಸಂದರ್ಭದಲ್ಲಿ ಸ್ಮರಿಸಿದರು.
"ಈಕೆ ಬಹಳ ಪ್ರೀತಿಯ ಹಾಗು ಕರುಣೆಯ ಪತ್ನಿ. ನೀವು ನನ್ನ ಪಾಲಿಗೆ ವಿಶೇಷ ವ್ಯಕ್ತಿ. ೧೮ ವರ್ಷಗಳ ಹಿಂದೆ ದೊಡ್ಡ ಕೆಲಸವನ್ನು ಬಿಟ್ಟು ಚಿಕ್ಕ ಹುಡುಗನ ನಂಬಿಕೊಂಡು ಬಂದಿರಿ" ಎಂದು ಅಕ್ಷತಾ ಮೂರ್ತಿಯ ತ್ಯಾಗವನ್ನು ರಿಷಿ ಸುನಕ್ ನೆನದರು.
2006ರಲ್ಲಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಬೆಂಗಳೂರಿನಲ್ಲಿ ವಿವಾಹವಾಗಿದ್ದರು.
ಅತಿದೊಡ್ಡ ತ್ಯಾಗ ಯಾವುದು?
ಬುಧವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಕನ್ಸರ್ವೇಟಿವ್ ಪಕ್ಷದ ಆರು ಸಾವಿರ ಸದಸ್ಯರು ಮೊದಲಾದವರು ಪಾಲ್ಗೊಂಡಿದ್ದರು..ಕೊನೆಯಲ್ಲಿ ಪ್ರಶ್ನೋತ್ತರ ಸುತ್ತೂ ಇತ್ತು. ಈ ವೇಳೆ, ಸಭಿಕರೊಬ್ಬರಿಂದ ಬಂದ ಪ್ರಶ್ನೆ ಹೀಗಿತ್ತು, "ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವಾಗ ನೀವು ಮಾಡಿರುವ ಅತಿದೊಡ್ಡ ತ್ಯಾಗ ಏನು?".
"ಅತಿ ದೊಡ್ಡ ತ್ಯಾಗ ಎಂದರೆ ನಾನು ಕಳೆದ ಎರಡು ವರ್ಷಗಳಲ್ಲಿ ಅಪ್ಪನ ಸ್ಥಾನ ಮತ್ತು ಪತಿಯ ಸ್ಥಾವನ್ನು ಸರಿಯಾಗಿ ನಿರ್ವಹಿಸಲು ಆಗಲಿಲ್ಲ ಎಂಬುದು. ನನಗೆ ಇದು ನಿಜಕ್ಕೂ ಬೇಸರದ ಸಂಗತಿ. ಯಾಕೆಂದರೆ ನನಗೆ ಮಕ್ಕಳೆಂದರೆ ಬಹಳ ಪ್ರೀತಿ, ಪತ್ನಿಯನ್ನೂ ಬಹಳವಾಗಿ ಪ್ರೀತಿಸುತ್ತೇನೆ. ದುರದೃಷ್ಟವಶಾತ್ ಕಳೆದ ಕೆಲ ವರ್ಷಗಳಿಂದ ಅವರ ಜೀವನದಲ್ಲಿ ನಿರೀಕ್ಷಿತ ರೀತಿಯಲ್ಲಿ ನಾನು ಪಾಲ್ಗೊಳ್ಳಲು ಸಾಧ್ಯವಾಗಿಲ್ಲ" ಎಂದು ರಿಷಿ ಸುನಕ್ ಹೇಳಿದರು.
ತಾನು ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗದೇ ಮಾಡಿರುವ ತ್ಯಾಗಕ್ಕೆ ವಿಶೇಷ ಬೆಲೆ ಉಂಟು ಎಂಬುದನ್ನು ರಿಷಿ ಸುನಕ್ ಉಲ್ಲೇಖಿಸುತ್ತಾರೆ.
"ನನಗೆ ಈ ಕೆಲಸಗಳು ಮಾಡಲು ಸಿಕ್ಕಿರುವುದು ನಿಜಕ್ಕೂ ಪುಣ್ಯ. ನನ್ನ ದೇಶದ ಬಗ್ಗೆ ಬಹಳ ಕಾಳಜಿ ವಹಿಸುತ್ತೇನೆ. ಕೋಟ್ಯಂತರ ಜನರಿಗೆ ಉಪಯೋಗವಾಗುವಂಥದ್ದು ಏನಾದರೂ ನಾನು ಮಾಡಬಲ್ಲೆ ಎನಿಸುತ್ತದೆ. ಈ ಕೆಲಸ ಮಾಡಲು ನನಗೆ ಬೆಂಬಲಿಸುತ್ತಿರುವ ನನ್ನ ಕುಟುಂಬವನ್ನು ಪಡೆದಿರುವುದು ನನ್ನ ಅದೃಷ್ಟ" ಎಂದು ರಿಷಿ ಸುನಕ್ ತಿಳಿಸಿದರು.
ರಿಷಿ ಸುನಕ್ ನೇರ ಮಾತು
ರಿಷಿ ಸುನಕ್ ಅವರು ತೆರಿಗೆ ಕಡಿತವನ್ನು ಮೊದಲಿಂದಲೂ ವಿರೋಧಿಸುತ್ತಾ ಬಂದವರು. ಬ್ರಿಟನ್ ದೇಶ ಸದ್ಯಕ್ಕೆ ಆರ್ಥಿಕ ಸಂಕಷ್ಟದಲ್ಲಿದ್ದು, ಇಂಥ ಹೊತ್ತಿನಲ್ಲಿ ತೆರಿಗೆ ಕಡಿತದಂತಹ ಕ್ರಮಗಳನ್ನು ಕೈಗೊಂಡರೆ ತೊಂದರೆಯಾಗುತ್ತದೆ ಎಂಬುದು ರಿಷಿ ಸುನಕ್ ವಾದ. ಅವರ ಈ ವಿಚಾರವೇ ಗೆಲುವಿನ ದಾರಿಗೆ ಅಡ್ಡಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಇನ್ನೊಂದೆಡೆ ಮತ್ತೊಬ್ಬ ಪ್ರಧಾನಿ ಅಭ್ಯರ್ಥಿ ಲಿಜ್ ಟ್ರುಸ್, ತೆರಿಗೆ ಕಡಿತವನ್ನು ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಹೀಗಾಗಿ, ಗೆಲುವಿನ ಟ್ರೆಂಡ್ ಅವರ ಪರವಾಗಿರುವಂತೆ ಮೇಲ್ನೋಟಕ್ಕೆ ತೋರುತ್ತಿದೆ.
"ಜನರು ಬಯಸುವ ರೀತಿಯಲ್ಲಿ ನಾನು ಹೇಳುವುದಿಲ್ಲ. ನಮ್ಮ ದೇಶಕ್ಕೆ ಏನು ಬೇಕು ಅಂತ ನನಗೆ ಅನಿಸುತ್ತದ ಅದನ್ನು ನಾನು ಹೇಳುತ್ತೇನೆ... ಇದರಿಂದ ನನಗೆ ಕಷ್ಟವಾದರೂ ಕೂಡ ಪ್ರಾಮಾನಿಕತೆಗೆ ಬದ್ಧವಾಗಿರುತ್ತೇನೆ. ನಾಯಕತ್ವ ಎಂದರೆ ಇದೇ" ಎಂದು ರಿಷಿ ಸುನಕ್ ತಮ್ಮ ಕಠಿಣ ಕ್ರಮಗಳ ಬಗ್ಗೆ ಕೊನೆಯದಾಗಿ ಸ್ಪಷ್ಟಪಡಿಸಿದರು.
ನಿನ್ನೆ ಬುಧವಾರ ನಡೆದ ಪ್ರಚಾರ ಕಾರ್ಯಕ್ರಮ ಕೊನೆಯ ಹಾಗು 12ನೇಯದ್ದು. ನಾಳೆ ಶುಕ್ರವಾರ (ಸೆ. 2) ಕನ್ಸರ್ವೇಟಿವ್ ಪಕ್ಷದ ಸದಸ್ಯರು ಮತದಾನ ಮಾಡಲಿದ್ದಾರೆ. ಸೆ. 5ರಂದು ಫಲಿತಾಂಶ ಪ್ರಕಟವಾಗಲಿದೆ.
(ಒನ್ಇಂಡಿಯಾ ಸುದ್ದಿ)