ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ: ರಾಜಕೀಯ ಗಣ್ಯರು ಸೇರಿ ಸಾವಿರಾರು ಭಕ್ತರು ಭಾಗಿ
ಕೊಪ್ಪಳ, ಡಿಸೆಂಬರ್ 6: ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಸೋಮವಾರ ಹನುಮ ವ್ರತ ಅದ್ಧೂರಿಯಾಗಿ ಜರುಗಿತು. ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಭಕ್ತರ ದಂಡು ಹರಿದು ಬಂದಿದ್ದು, ಹನುಮ ಮಾಲೆ ವಿಸರ್ಜನೆ ಮಾಡಿದರು.
ಸಾವಿರಾರು ಭಕ್ತರು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಹನುಮಾ ಚಾಲೀಸಾ ಜಪಿಸುತ್ತಾ ಅಂಜನಾದ್ರಿ ಬೆಟ್ಟ ಏರಿ, ಹನುಮ ಮಾಲೆ ವಿಸರ್ಜಿಸಿ, ಪೂಜೆ ಸಲ್ಲಿಸಿದ್ದಾರೆ.
ಅಂಜನಾದ್ರಿ ಬೆಟ್ಟಕ್ಕೆ ಪುನೀತ್ ಫೋಟೋ ಜೊತೆ ಭಕ್ತರ ಪಾದಯಾತ್ರೆ!
ಬೆಳಗಾವಿ, ಹುಬ್ಬಳ್ಳಿ, ಗದಗ, ಹಾವೇರಿ ಬಾಗಲಕೋಟ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಯಿಂದ ಸಾವಿರಾರು ಹನುಮ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಹರಿದು ಬಂದರು. ಸೋಮವಾರ ಮಧ್ಯರಾತ್ರಿ 1 ಗಂಟೆಯಿಂದಲೇ ಮಾಲಾಧಾರಿಗಳು ಬೆಟ್ಟದ ಕಡೆ ಹೆಜ್ಜೆ ಹಾಕಿದರು. ಮಾಲಾಧಾರಿಗಳು ಪಾದಯಾತ್ರೆ ಮೂಲಕ ಅಂಜನಾದ್ರಿಗೆ ಬಂದು ಪುನೀತರಾದರು.
ಮಾಲೆ ವಿಸರ್ಜನೆ ಕಾರ್ಯಕ್ರಮದ ಭಾಗವಾಗಿ ಅಂಜನಾದ್ರಿ ಬೆಟ್ಟದ ಮೇಲೆ ಬೆಳಗ್ಗೆಯಿಂದಲೇ ಹೋಮ- ಹವನ ನಡೆದವು. ಬೆಟ್ಟದ ಮುಂದಿನ 575 ಮೆಟ್ಟಲು ಏರಿ ಬಂದ ಭಕ್ತರು ಹನುಮಂತನ ದರ್ಶನ ಪಡೆದು, ಮಾಲೆ ವಿಸರ್ಜಿಸಿದರು. ಇನ್ನು ಇದೇ ವೇಳೆ ಹನುಮ ಮಾಲಾಧಾರಿಗಳ ಜೊತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಆಗಮಿಸಿದ್ದರು.
ಕೊಪ್ಪಳ ಮಾರ್ಗವಾಗಿ ಅಂಜನಾದ್ರಿಗೆ ಬಂದ ಮಾಲಾಧಾರಿಗಳು ನೇರವಾಗಿ ಬೆಟ್ಟ ಏರಿದರು. ಆದರೆ ಗಂಗಾವತಿ ಭಾಗದಿಂದ ಅಂಜನಾದ್ರಿಗೆ ಬರುವ ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರಗಿ ಸೇರಿ ವಿವಿಧ ಜಿಲ್ಲೆಯ ಭಕ್ತರು ಗಂಗಾವತಿ ನಗರದಲ್ಲಿ ಸಂಕೀರ್ತನೆ ಯಾತ್ರೆ ಮೂಲಕ ನಗರ ದಾಟಿ, ನಂತರ ವಾಹನಗಳ ಮೂಲಕ ಬೆಟ್ಟಕ್ಕೆ ಆಗಮಿಸಿದರು.
ಗಂಗಾವತಿ ನಗರದಲ್ಲಿ ನಡೆದ ಹನುಮ ಮೂಲಾಧಾರಿಗಳ ಸಂಕೀರ್ತನಾ ಯಾತ್ರೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ್ ದಡೆಸೂಗೂರು, ಸಂಸದ ಸಂಗಣ್ಣ ಕರಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ್, ಸೇರಿ ವಿವಿಧ ಗಣ್ಯರು ಭಾಗಿ ಆಗಿದ್ದರು.
ಇನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಬೆಳಗ್ಗೆ ಪಂಪಾ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹನುಮ ಮಾಲೆ ಧರಿಸಿ, ಸಂಕೀರ್ತನಾ ಯಾತ್ರೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಧಿಡೀರ್ ಪ್ರವೇಶ ಗಂಗಾವತಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.