ಕೊಪ್ಪಳದ ಕೆಲ ಗ್ರಾಮಗಳಲ್ಲಿ ಅಸ್ಪೃಶ್ಯತೆ ಇನ್ನು ಜೀವಂತ!
ಕೊಪ್ಪಳ, ಮಾರ್ಚ್ 11: ಕೊಪ್ಪಳದ ಕೆಲ ಗ್ರಾಮಗಳಲ್ಲಿ ಅಸ್ಪೃಶ್ಯತೆ ಇನ್ನು ಜೀವಂತವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಕೊಪ್ಪಳದ ಗಂಗಾವತಿಯ ಗುಡೂರು ಗ್ರಾಮದ ಹೋಟೆಲ್ ಗಳಲ್ಲಿ ದಲಿತರನ್ನು ಕೀಳಾಗಿ ಕಂಡಿರುವ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ.ಅಷ್ಟೇ ಅಲ್ಲ, ಕನಕಗಿರಿಯ ಹೀರೇಖೇಡ ಗ್ರಾಮದಲ್ಲೂ ಅಸ್ಪೃಶ್ಯತೆ ಇನ್ನು ಜೀವಂತವಾಗಿರುವುದು ತಿಳಿದು ಬಂದಿದೆ.
ಮೈಸೂರು:ದಲಿತ ಮಹಿಳೆ ಅಡುಗೆ, ಊಟ ಮಾಡದ ವಿದ್ಯಾರ್ಥಿಗಳು
ಹೋಟೆಲ್ಗಳಲ್ಲಿ ಈಗಲೂ ದಲಿತರು ಬೊಗಸೆಯಲ್ಲಿ ನೀರು ಕುಡಿಯುತ್ತಾರೆಂದರೆ ನಿಮಗೆ ಆಶ್ಚರ್ಯವಾಗಬಹುದು. ದಲಿತರಿಗೆ ಹೋಟೆಲ್ ಗಳ ಮಾಲೀಕರು ಮೇಲಿಂದ ಅಂದರೆ ಎತ್ತರದಿಂದ ನೀರು ಹಾಕುತ್ತಾರೆ. ಅವರನ್ನು ಮುಟ್ಟಿದರೆ ಮೈಲಿಗೆ ಎಂಬ ಕೆಟ್ಟ ಆಚರಣೆ ಗ್ರಾಮಗಳಲ್ಲಿ ಇನ್ನು ಜೀವಂತವಾಗಿದೆ.
ದಲಿತರು ಹೋಟೆಲ್ ಗೆ ಹೋದಾಗ ಬಾಗಿ ಕೈ ಜೋಡಿಸಿ ನೀರು ಕುಡಿಯಬೇಕಾದ ಪದ್ಧತಿ ಈಗಲೂ ಇರುವುದು ವಿಷಾದಕರ ಸಂಗತಿ. ಕಳೆದ ತಿಂಗಳು ಕೊಪ್ಪಳದ ಹೊಸಳ್ಳಿ ಗ್ರಾಮದಲ್ಲಿಯೂ ಇಂತಹ ಪ್ರಕರಣ ಬಯಲಾಗಿತ್ತು. ಆಗ ಗ್ರಾಮಕ್ಕೆ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಪಿ ಭೇಟಿ ನೀಡಿ ಎಚ್ಚರಿಕೆ ಕೊಟ್ಟಿದ್ದರು.
ಅಧಿಕಾರಿಗಳಿಗೂ ಡಿಸಿ ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ ಡಿಸಿ ಎಚ್ಚರಿಕೆ ನೀಡಿದ ಬಳಿಕವೂ ಈಗ ಮತ್ತೆರಡು ಪ್ರಕರಣಗಳು ಬಯಲಿಗೆ ಬಂದಿರುವುದು ನೋಡಿ ಜನ ಬೇಸರಗೊಂಡಿದ್ದಾರೆ.