ಮೋದಿ ವಿರುದ್ದ ಆರ್ಭಟ: ವೇದಿಕೆಯಲ್ಲೇ ಸಿದ್ದರಾಮಯ್ಯಗೆ ತೀವ್ರ ಮುಜುಗರ!
ಕೊಪ್ಪಳ, ಏಪ್ರಿಲ್ 25: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸುತ್ತಿದ್ದ ವೇಳೆ, ವೇದಿಕೆಯಲ್ಲೇ ಅವರಿಗೆ ಮುಜುಗರ ಅನುಭವಿಸಿದ ವಿದ್ಯಮಾನ ನಗರದಲ್ಲಿ ನಡೆದಿದೆ.
Recommended Video
ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಸಂವಿಧಾನ ಸಂರಕ್ಷಣಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹೈಡ್ರಾಮಾ ನಡೆಯಿತು. ಮೋದಿ ವಿರುದ್ದ ಸಿದ್ದರಾಮಯ್ಯ ಕಿಡಿಕಾರುತ್ತಿದ್ದಾಗ, ವೇದಿಕೆಯಲ್ಲಿ ಮೊದಲ ಸಾಲಿನಲ್ಲಿ ಆಸೀನರಾಗಿದ್ದ ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಎನ್ನುವ ಬಿಜೆಪಿ ಮುಖಂಡ ತೀವ್ರ ಆಕ್ಷೇಪವನ್ನು ವ್ಯಕ್ತ ಪಡಿಸಿದರು.
ಆ ವೇಳೆ, ಸ್ವಲ್ಪಹೊತ್ತು ಕಾರ್ಯಕ್ರಮ ಗೊಂದಲದ ಗೂಡಾಗಿ ಹೋಯಿತು. ನನ್ನ ಮಾತನ್ನು ಕೇಳಲು ಇಷ್ಟ ಪಡದವರು ವೇದಿಕೆಯಿಂದ ಎದ್ದು ಹೋಗಬಹುದು ಎಂದು ಸಿದ್ದರಾಮಯ್ಯ ಹೇಳಿದಾಗ, ಶರಣು ತಳ್ಳಿಕೇರಿ, ಸಿದ್ದರಾಮಯ್ಯನವರಿಗೆ ಕೈಮುಗಿದು ವೇದಿಕೆಯಿಂದ ನಿರ್ಗಮಿಸಿದರು.

ಡಾ.ಅಂಬೇಡ್ಕರ್ ಅವರ 131ನೇ ಜಯಂತಿಯ ಅಂಗವಾಗಿ ಕಾರ್ಯಕ್ರಮ
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 131ನೇ ಜಯಂತಿಯ ಅಂಗವಾಗಿ ಸಂವಿಧಾನ ಸಂರಕ್ಷಣಾ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಮುಖ್ಯ ಭಾಷಣಕಾರರಾಗಿ ಸಿದ್ದರಾಮಯ್ಯ ಮಾತನಾಡಲು ಆರಂಭಿಸಿದರು. ಕೇಂದ್ರ ಸರಕಾರದ ಜನ ವಿರೋಧಿ ನೀತಿ ಮತ್ತು ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ವೈಫಲ್ಯಗೊಂಡಿದ್ದನ್ನು ಸಿದ್ದರಾಮಯ್ಯ ಜಾಲಾಡಿಸುತ್ತಿದ್ದರು. ಬೆಲೆ ಏರಿಕೆ, ನಿರುದ್ಯೋಗ, ಧಾರ್ಮಿಕ ಸಂಘರ್ಷದ ಬಗ್ಗೆ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸುತ್ತಿದ್ದರು. ಜೊತೆಗೆ, ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ದವೂ ಕಿಡಿಕಾರುತ್ತಿದ್ದರು.

ಶರಣು ತಳ್ಳಿಕೇರಿ ಇದಕ್ಕೆ ವೇದಿಕೆಯಲ್ಲೇ ಆಕ್ಷೇಪವನ್ನು ವ್ಯಕ್ತ ಪಡಿಸಿದರು
ಆ ವೇಳೆ, ಶರಣು ತಳ್ಳಿಕೇರಿ ಇದಕ್ಕೆ ವೇದಿಕೆಯಲ್ಲೇ ಆಕ್ಷೇಪವನ್ನು ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರರು ಸುಮ್ಮನಿರುವಂತೆ ಸೂಚಿಸುತ್ತಿದ್ದರೂ, ಶರಣು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರು. ಇದರಿಂದ ಕುಪಿತರಾದ ಸಿದ್ದರಾಮಯ್ಯ, "ನಾನು ಹೇಳೋದು ನಿನಗೆ ಇಷ್ಟವಿಲ್ಲದಿದ್ದರೆ, ಎದ್ದು ಹೋಗಪ್ಪಾ"ಎಂದು ಶರಣು ತಳ್ಳಿಕೇರಿಯನ್ನು ನಿರ್ಗಮಿಸುವಂತೆ ಸೂಚಿಸಿದರು. ಅದರಂತೇ, ಅವರು ವೇದಿಕೆಯಿಂದ ಹೊರ ನಡೆದರು. ಆದರೆ, ಅಷ್ಟಕ್ಕೇ ಮುಗಿಯಲಿಲ್ಲ..

ನಾನು ಹೇಳುವುದನ್ನು ಎಲ್ಲರೂ ಪಾಲಿಸಬೇಕು ಎಂದೇನಿಲ್ಲ, ಸಿದ್ದರಾಮಯ್ಯ
"ನಾನು ಹೇಳುವುದನ್ನು ಎಲ್ಲರೂ ಪಾಲಿಸಬೇಕು ಎಂದೇನಿಲ್ಲ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ನಾನು ಅನಂತ್ ಕುಮಾರ್ ಹೆಗ್ಡೆ ಬಗ್ಗೆ ಮಾತನಾಡಿರುವುದು ಸತ್ಯವಾಗಿದೆ. ಸತ್ಯ ಹೇಳುವುದಕ್ಕೆ ನನಗೆ ಭಯವಿಲ್ಲ. ಬಿಜೆಪಿಯ ಆ ಲೋಕಸಭಾ ಸದಸ್ಯ, ಸಂವಿಧಾನದ ವಿರೋಧವಾಗಿ ಮಾತನಾಡಲಿಲ್ಲವೇ?ಸಾರ್ವಜನಿಕವಾಗಿಯೇ ಅನಂತ್ ಕುಮಾರ್ ಹೆಗ್ಡೆ ಸಂವಿಧಾನದ ಬಗ್ಗೆ ಮಾತನಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಸುಮ್ಮನಿರಲು ಸಾಧ್ಯವೇ? ನರೇಂದ್ರ ಮೋದಿಯವರ ಆಡಳಿತದಲ್ಲಿ ಸಂವಿಧಾನ ನಶಿಸಿ ಹೋಗುತ್ತಿದೆ. ಇದನ್ನು ಇಲ್ಲ ಎಂದು ಯಾರಾದರೂ ನನ್ನ ಬಳಿ ಬಹಿರಂಗ ಚರ್ಚೆಗೆ ಬಂದರೆ ನಾನು ಮಾತನಾಡಲು ಸಿದ್ದ"ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸುತ್ತಿದ್ದರು.

ಭಾರೀ ಸಂಖ್ಯೆಯ ತಮ್ಮ ಅಭಿಮಾನಿಗಳೊಂದಿಗೆ ಆಗಮಿಸಿದ ಶರಣು ತಳ್ಳಿಕೇರಿ
ಸಭೆಯಿಂದ ನಿರ್ಗಮಿಸಿದ ನಂತರ ಮತ್ತೆ, ಭಾರೀ ಸಂಖ್ಯೆಯ ತಮ್ಮ ಅಭಿಮಾನಿಗಳೊಂದಿಗೆ ಆಗಮಿಸಿದ ಶರಣು ತಳ್ಳಿಕೇರಿಗೆ, ಮೋದಿ..ಮೋದಿ ಎನ್ನುವ ಘೋಷಣೆ ಮತ್ತಷ್ಟು ಹುರುಪನ್ನು ನೀಡಿತು. ವೇದಿಕೆಯತ್ತ ಆಗಮಿಸುತ್ತಿದ್ದ ಶರಣು ಮತ್ತು ಅವರ ಅಭಿಮಾನಿಗಳನ್ನು ಪೊಲೀಸರು ತಡೆದರು. "ನಾನು ಸಿದ್ದರಾಮಯ್ಯನವರ ವಿರೋಧಿಯಲ್ಲ, ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಇದೊಂದು ಸಂಘಟನೆ ಆಯೋಜಿಸಿದ ಕಾರ್ಯಕ್ರಮ, ಅದು ಹೇಗೆ ಪ್ರಧಾನಿಯವರನ್ನು ಸಭೆಯಲ್ಲಿ ಟೀಕಿಸುತ್ತಾರೆ. ಹಾಗಾದರೆ, ಇದು ಕಾಂಗ್ರೆಸ್ ಕಾರ್ಯಕ್ರಮನಾ ಎಂದು ಪ್ರಶ್ನಿಸಬೇಕಾಗುತ್ತದೆ. ಸಂಘಟನಾಕಾರರಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ"ಎಂದು ಶರಣು ತಳ್ಳಿಕೇರಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. (ಫೈಲ್ ಫೋಟೋ)












Click it and Unblock the Notifications