ಕರ್ನಾಟಕ ವಿಧಾನಸಭೆ ಚುನಾವಣೆ: ಕೊಪ್ಪಳದಲ್ಲಿ ಮಾಜಿ, ಹಾಲಿ ಶಾಸಕರ ನಡುವೆ ವಾಕ್ಸಮರ ಶುರು
ಕೊಪ್ಪಳ, ನವೆಂಬರ್, 17: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಎಲ್ಲಾ ಪಕ್ಷಗಳಿಂದಲೂ ಭಾರಿ ತಯಾರಿ ನಡೆಯುತ್ತಿದೆ. ಎಂಎಲ್ಎ ಗದ್ದುಗೆಗಾಗಿ ಅಕಾಂಕ್ಷಿಗಳ ಕಸರತ್ತುಗಳು ಜೋರಾಗಿಯೇ ನಡೆಯುತ್ತಿವೆ. ಹಾಗೆಯೇ ಕೊಪ್ಪಳದ ಕನಕಗಿರಿ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದೆ ಎನ್ನುವಂತೆ ಹಾಲಿ ಶಾಸಕ ಹಾಗೂ ಮಾಜಿ ಸಚಿವರ ನಡುವೆ ಕೆಸರೆರೆಚಾಟದ ಜೊತೆಗೆ ಚುನಾವಣಾ ರಂಗು ಹೆಚ್ಚುತ್ತಲೇ ಇದೆ.
ಮಾಜಿ ಸಚಿವ ಶಿವರಾಜ ತಂಗಡಗಿ ಸಾವಿರಾರು ಜನರನ್ನು ಸೇರಿಸಿ ಕಾಲ್ನಡಿಗೆ ಮೂಲಕ ಕ್ಷೇತ್ರದಲ್ಲಿ ಸಂಚಾರ ನಡೆಸಿದ್ದಾರೆ. ಹಾಗೂ ಹಾಲಿ ಶಾಸಕ ಬಸವರಾಜ ದಡೆಸೂಗುರು ವಿರುದ್ಧದ ಭ್ರಷ್ಟಾಚಾರ ದುರಾಡಳಿತದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಕ್ಷೇತ್ರದಲ್ಲಿ ಜನ ಪ್ರತಿಜ್ಞಾ ಯಾತ್ರೆಯನ್ನು ಆರಂಭಿಸಿದ್ದಾರೆ. ಕನಕಗಿರಿ ಕ್ಷೇತ್ರದ ಸಿದ್ದಾಪುರದಿಂದ ಕಾರಟಗಿ ಪಟ್ಟಣದವರೆಗೂ ಸಾವಿರಾರು ಜನ ಬೆಂಬಲಿಗರೊಂದಿಗೆ 12 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಭಾರಿ ಪೈಪೋಟಿ
ಪಾದಯಾತ್ರೆಯಲ್ಲಿ ಕ್ಷೇತ್ರದ ಸಾವಿರಾರು ಜನ ಕಾರ್ಯಕ್ರರ್ತರು ಭಾಗವಹಿಸಿದ್ದು, ಮಾಜಿ ಸಚಿವ ಶಿವರಾಜ ತಂಗಡಗಿ ಜೊತೆಯಲ್ಲಿ ಹೆಜ್ಜೆ ಹಾಕಿದರು. ಪಾದಯಾತ್ರೆ ಪ್ರತಿ ಹಳ್ಳಿಗೂ ಆಗಮಿಸುತ್ತಿದ್ದಂತೆ ಬೆಂಬಲಿಗರು ಹೂವುಗಳು ಎಸೆಯುತ್ತಾ ಶಿವರಾಜ ತಂಗಡಗಿ ಅವರನ್ನು ಸ್ವಾಗತಿಸಿದರು. ಇದೆ ವೇಳೆ ಮಾದ್ಯಮಗಳ ಜೊತೆ ಮಾತನಾಡಿದ ಶಿವರಾಜ ತಂಗಡಗಿ, ಹಾಲಿ ಶಾಸಕ ಬಸವರಾಜ ಹಾಗೂ ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ್ದಾರೆ. "ಬಿಜೆಪಿ ಸರ್ಕಾರ ಹಾಗೂ ಶಾಸಕ ಬಸವರಾಜ ದಡೆಸೂಗುರು ಜ್ಞಾನ ಇಲ್ಲದ ಶಾಸಕನಿಗೆ ಜನರು ಬುದ್ಧಿ ಕಲಿಸಲು ಮುಂದಾಗಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಮುನ್ನವೇ ಆರೋಪ, ಪ್ರತ್ಯಾರೋಪ
ಒಂದೆಡೆ ಶಿವರಾಜ ತಂಗಡಗಿ ಜನರನ್ನು ಸೇರಿಸಿ ಪಾದಯಾತ್ರೆ ನಡೆಸಿದರೆ, ಮತ್ತೊಂದೆಡೆ ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ವಿರುದ್ದ ಗುಡುಗಿದ್ದಾರೆ. "ಕ್ಷೇತ್ರದಲ್ಲಿ ಜನರಿಗೆ ಗೊಂದಲ ಸೃಷ್ಠಿಸಲು ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಿದ್ದಾರೆ. ಶಿವರಾಜ ತಂಗಡಗಿ ಯಾವ ಕಾರಣಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎನ್ನುವುದೇ ಗೊತ್ತಿಲ್ಲ.

ಇವರ ಅಧಿಕಾರದ ಅವಧಿಯಲ್ಲಿ ಏನು ಕೆಲಸ ಮಾಡಿದ್ದಾರೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಇವರು ಮಾಡಿರುವ ಭ್ರಷ್ಟಾಚಾರ, ಕೊಲೆ ಎಲ್ಲವನ್ನು ಜನರು ನೋಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರೇ ಉತ್ತರ ಕೊಡುತ್ತಾರೆ ಎಂದು ದಡೇಸೂಗುರು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ, ಒಬ್ಬರ ಮೇಲೊಬ್ಬರ ಆರೋಪ ಪತ್ಯಾರೋಪ ಹೆಚ್ಚಾಗಿದೆ. ಇದೆಲ್ಲಕ್ಕೂ 2023ರ ಚುನಾವಣೆಯಲ್ಲಿ ಕ್ಷೇತ್ರದ ಮತದಾರರೇ ಭವಿಷ್ಯ ಬರೆಯಲಿದ್ದಾರೆ. ಆಗ ಯಾರು ಮೇಲುಗೈ ಗದ್ದುಗೆ ಹಿಡಿಯಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications