ಕೊಪ್ಪಳ; ರಾಜವಂಶಸ್ಥ, ಮಾಜಿ ಸಚಿವ ಶ್ರೀರಂಗ ದೇವರಾಯಲು ವಿಧಿವಶ
ಕೊಪ್ಪಳ, ಆಗಸ್ಟ್ 22: ಸರಳ ಸಜ್ಜನ ರಾಜಕಾರಣಿ, ರಾಜವಂಶಸ್ಥ, ಮಾಜಿ ಸಚಿವ ಹಾಗೂ ಶಾಸಕ ಶ್ರೀರಂಗ ದೇವರಾಯಲು ವಿಧಿವಶರಾದರು. ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಹಲವು ನಾಯಕರು ಶ್ರೀರಂಗ ದೇವರಾಯಲು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀರಂಗ ದೇವರಾಯಲು (87) ಮಂಗಳವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ವಿಧಿವಶರಾದರು. ಕೊಪ್ಪಳ ಜಿಲ್ಲಾ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು ಶ್ರೀರಂಗ ದೇವರಾಯಲು.

ಕೊಪ್ಪಳ ಜಿಲ್ಲೆಯ ಕನಕಗಿರಿ ಮತ್ತು ಗಂಗಾವತಿ ಕ್ಷೇತ್ರದ ರಾಜಕೀಯದಲ್ಲಿ ಶ್ರೀರಂಗ ದೇವರಾಯಲು ಪ್ರಭಾವ ಹೊಂದಿದ್ದರು. ಒಟ್ಟು 8 ಬಾರಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು, 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಚಿವರಾಗಿಯೂ ಕೆಲಸ ಮಾಡಿದ್ದರು.
ಜನಾರ್ದನ ರೆಡ್ಡಿ ಸಂತಾಪ; ಗಂಗಾವತಿ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಫೇಸ್ಬುಕ್ ಪೋಸ್ಟ್ ಹಾಕಿದ್ದು, 'ಆನೆಗೊಂದಿ ರಾಜಮನೆತನದ ಹಿರಿಯರು, ಹಿರಿಯ ಮುಖಂಡರು ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರದಿಂದ ಐದು ಭಾರಿ ಶಾಸಕರಾಗಿದ್ದ ಮಾಜಿ ಸಚಿವರಾದ ಶ್ರೀರಂಗದೇವರಾಯಲು(87) ಇವರು ವಯೋ ಸಹಜವಾಗಿ ನಿಧನರಾಗಿದ್ದು, ಇವರ ನಿಧನದಿಂದ ಅವರ ಕುಟುಂಬ ಮತ್ತು ಗಂಗಾವತಿ, ಕನಕಗಿರಿ ಕ್ಷೇತ್ರದ ಜನರು ದುಕ್ಕಿತರಾಗಿದ್ದು ಇವರ ದುಃಖದಲ್ಲಿ ನಾನು ಭಾಗಿಯಾದ್ದೇನೆ' ಎಂದು ಸಂತಾಪ ಸೂಚಿಸಿದ್ದಾರೆ.
ರಾಜವಂಶಸ್ಥ ಶ್ರೀರಂಗ ದೇವರಾಯಲು ಒಟ್ಟು 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1974ರಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದರು. ಎಚ್. ಜಿ. ರಾಮುಲು ವಿರುದ್ಧ ಸೋಲು ಕಂಡಿದ್ದರು. 1978ರಲ್ಲಿ ಜೆಎನ್ಪಿಯಿಂದ 2ನೇ ಬಾರಿಗೆ ಕಣಕ್ಕಿಳಿದು ಮತ್ತೆ ಸೋತರು.
ಬಳಿಕ ಕನಕಗಿರಿ ವಿಧಾನಸಭಾ ಕ್ಷೇತ್ರ ರಚನೆಗೊಂಡಿತು. 1983ರಲ್ಲಿ ಕಾಂಗ್ರೆಸ್ನಿಂದ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದರು, ಗೆದ್ದರು. 1985ರಲ್ಲಿ2ನೇ ಬಾರಿಗೆ ಗೆದ್ದರು.
1989ರಲ್ಲಿ ಗಂಗಾವತಿ ಕ್ಷೇತ್ರಕ್ಕೆ ಮರಳಿದರು. 1994, 1999ರ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸಿದರು. 2004ರಲ್ಲಿ ಸೋಲುಕಂಡ ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದರು.
2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ನಾಯಕ ಇಕ್ಬಾಲ್ ಅನ್ಸಾರಿ ಶ್ರೀರಂಗ ದೇವರಾಯಲು ನಿವಾಸಕ್ಕೆ ಭೇಟಿ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿತ್ತು.












Click it and Unblock the Notifications