ಗಂಗಾವತಿ-ದರೋಜಿ ನೂತನ ರೈಲು ಮಾರ್ಗ ಸಮೀಕ್ಷೆ ಪೂರ್ಣ; ವರದಿ
ಕೊಪ್ಪಳ, ಜನವರಿ 18: ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಬಳ್ಳಾರಿಯ ದರೋಜಿ ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಮಾಡುವ ಕುರಿತು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಒಟ್ಟು 36 ಕಿ. ಮೀ. ಉದ್ದದ ರೈಲು ಮಾರ್ಗ ಇದಾಗಿದೆ. ತುಂಗಭದ್ರಾ ನದಿಗೆ ಮುಖ್ಯವಾದ ಸೇತುವೆ ನಿರ್ಮಾಣವಾಗಬೇಕಿದೆ.
ಗಂಗಾವತಿ-ದರೋಜಿ ನಡುವಿನ ರೈಲು ಮಾರ್ಗ ಎರಡು ಜಿಲ್ಲೆಗಳ ಜನರ ಬಹುವರ್ಷದ ಬೇಡಿಕೆಯಾಗಿದೆ. 2022ರ ಮೇ ತಿಂಗಳಿನಲ್ಲಿ ಈ ರೈಲು ಮಾರ್ಗದ ಕುರಿತು ಕಾರ್ಯ ಸಾಧ್ಯತಾ ವರದಿ ತಯಾರು ಮಾಡಲು ರೈಲ್ವೆ ಮಂಡಳಿ ಸೂಚನೆ ನೀಡಿತ್ತು.

ರೈಲ್ವೆ ಇಲಾಖೆ ಅಧಿಕಾರಿಗಳು ಗಂಗಾವತಿ-ದರೋಜಿ ನಡುವಿನ ನೂತನ ರೈಲು ಮಾರ್ಗ ನಿರ್ಮಾಣದ ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಿ ಮಂಡಳಿಗೆ ಸಲ್ಲಿಕೆ ಮಾಡಿದ್ದಾರೆ. ರೈಲ್ವೆ ಇಲಾಖೆ ಈ ಯೋಜನೆಗೆ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.
ವರದಿಯ ಪ್ರಮುಖ ಅಂಶಗಳು; ಗಂಗಾವತಿ-ದರೋಜಿ ನಡುವಿನ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸುಮಾರು 919.49 ಕೋಟಿ ರೂ. ವೆಚ್ಚವಾಗಲಿದೆ ಎಂದು ಕಾರ್ಯ ಸಾಧ್ಯತಾ ವರದಿಯಲ್ಲಿ ಅಂದಾಜಿಸಲಾಗಿದೆ. ಹೊಸ ಮಾರ್ಗವಾದ ಕಾರಣ ಒಂದು ಕಿ. ಮೀ. ಮಾರ್ಗ ನಿರ್ಮಾಣಕ್ಕೆ ಸುಮಾರು 29.38 ಕೋಟಿ ರೂ. ವೆಚ್ಚವಾಗಲಿದೆ.
ಈ ನೂತನ ಮಾರ್ಗ 36 ಕಿ. ಮೀ.ಯಾಗಿದೆ. ಎಲ್ಲಾ ಕಾಮಗಾರಿಗಳಿಗೆ 210.53 ಹೆಕ್ಟೇರ್ ಭೂಮಿ ಬೇಕಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಮಾರ್ಗದಲ್ಲಿ ಯಾವುದೇ ಭೂಮಿಯು ಅರಣ್ಯ ಪ್ರದೇಶಕ್ಕೆ ಸೇರಿಲ್ಲ.
ಮಾರ್ಗದಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಆದ್ದರಿಂದ ಮುಖ್ಯವಾದ ಒಂದು ಸೇತುವೆ ಮತ್ತು 129 ಸಣ್ಣ ಸೇತುವೆಗಳನ್ನು ನಿರ್ಮಾಣ ಮಾಡಬೇಕು. 1 ಕಿ. ಮೀ. ಮಾರ್ಗ ನಿರ್ಮಾಣದ ಭೂ ಸ್ವಾಧೀನಕ್ಕೆ 9 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ. ಕಾರ್ಯ ಸಾಧ್ಯತಾ ವರದಿಯನ್ನು ಪರಿಶೀಲಿಸಿದ ಬಳಿಕ ರೈಲ್ವೆ ಮಂಡಳಿ ನೂತನ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಿದೆ.
ಗಂಗಾವತಿ-ದರೋಜಿ ನಡುವಿನ ನೂತನ ರೈಲು ಮಾರ್ಗದ ಕಾರ್ಯ ಸಾಧ್ಯತಾ ವರದಿ ತಯಾರಾಗಿದೆ. ಇದರ ಜೊತೆಗೆ ಈ ಮಾರ್ಗವನ್ನು ಬಾಗಲಕೋಟೆ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯೂ ಇದೆ. 2022ರಲ್ಲಿಯೇ ಈ ಕುರಿತು ಕೊಪ್ಪಳದ ಸಂಸದ ಸಂಗಣ್ಣ ಕರಡಿ ಬೇಡಿಕೆ ಇಟ್ಟಿದ್ದರು.
ನೂತನ ರೈಲು ಮಾರ್ಗವನ್ನು ಕನಕಗಿರಿ, ಕುಷ್ಟಗಿ, ಇಳಕಲ್ ಮತ್ತು ಹುನಗುಂದ ಮಾರ್ಗವಾಗಿ ಬಾಗಲಕೋಟೆ ತನಕ ವಿಸ್ತರಣೆ ಮಾಡಲು ಬೇಡಿಕೆ ಇಡಲಾಗಿತ್ತು. ಕೇಂದ್ರ ಸರ್ಕಾರ ಸಹ ಈ ಕುರಿತು ಸಮೀಕ್ಷೆ ನಡೆಸಲು 78.50 ಲಕ್ಷ ರೂ. ಅನುದಾನ ಮಂಜೂರು ಮಾಡಿತ್ತು. ಬಾಗಲಕೋಟೆ ತನಕ ವಿಸ್ತರಣೆಯಾದರೆ ಮಾರ್ಗದ ಉದ್ದ 157 ಕಿ. ಮೀ. ಆಗಲಿದೆ.
ಗಂಗಾವತಿ-ದರೋಜಿ ಮತ್ತು ಬಾಗಲಕೋಟೆ ನಡುವೆ ರೈಲು ಮಾರ್ಗ ನಿರ್ಮಾಣಗೊಂಡು ರೈಲು ಸಂಚಾರ ಆರಂಭವಾದರೆ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ. ಕೊಪ್ಪಳದ ಗಂಗಾವತಿ ಅಕ್ಕಿಯ ಕಣಜ ಎಂದೇ ಪ್ರಸಿದ್ಧಿ ಪಡೆದಿದೆ.
ಗಂಗಾವತಿಯಲ್ಲಿ ಬೆಳೆಯುವ ಸೋನಾ ಮಸೂರಿ ಅಕ್ಕಿ ಭಾರತದ ವಿವಿಧ ರಾಜ್ಯಗಳು ಮಾತ್ರವಲ್ಲ ವಿದೇಶಗಳಿಗೆ ಸಹ ರಫ್ತಾಗುತ್ತದೆ. ಪ್ರಮುಖ ವಾಣಿಜ್ಯ ಕೇಂದ್ರವಾದ ಗಂಗಾವತಿ ಮತ್ತು ಬಾಗಲಕೋಟೆಯನ್ನು ನೂತನ ರೈಲು ಮಾರ್ಗ ಸಂರ್ಪಕಿಸಲಿದೆ.
ನೈಋತ್ಯ ರೈಲ್ವೆ ಗಂಗಾವತಿಯಲ್ಲಿ ಸರಕು ಸಾಗಣೆಗಾಗಿಯೇ ಪ್ರತ್ಯೇಕ ಪ್ಲಾಟ್ ಫಾರಂ ನಿರ್ಮಾಣ ಮಾಡಿದೆ. 2022ರಲ್ಲಿ ಇಲ್ಲಿಂದ ಮೊದಲ ಬಾರಿಗೆ 1326 ಟನ್ ಅಕ್ಕಿಯನ್ನು ಅಸ್ಸಾಂಗೆ ಸಾಗಣೆ ಮಾಡಲಾಗಿತ್ತು. ಇಂತಹ ಪ್ರಮುಖ ಕೇಂದ್ರದಿಂದ ಬಾಗಲಕೋಟೆಗೆ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಇಡಲಾಗಿದೆ.












Click it and Unblock the Notifications