Gavi Siddeshwara Jatra: ದಕ್ಷಿಣ ಭಾರತದ ಕುಂಬಮೇಳವೆಂದೇ ಪ್ರಸಿದ್ಧಿ ಪಡೆದಿರುವ ಗವಿಮಠದ ಜಾತ್ರೆಗೆ ಕ್ಷಣಗಣನೆ
ಕೊಪ್ಪಳ, ಜನವರಿ, 08: ದಕ್ಷಿಣ ಭಾರತದ ಕುಂಬಮೇಳವೆಂದೆ ಪ್ರಸಿದ್ಧಿ ಪಡೆದಿರುವ ಗವಿಮಠ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ (ಜನವರಿ 8) ನೆಡೆಯಲಿರುವ ಮಹಾರಥೋತ್ಸವಕ್ಕೆ ಭರದ ಸಿದ್ದತೆ ನಡೆದಿದೆ. ನಾನಾ ಊರುಗಳಿಂದ ಭಕ್ತರು ಅಜ್ಜನ ಜಾತ್ರೆಗೆ ರೊಟ್ಟಿ, ಹೊಳಿಗೆ ಸೇರಿದಂತೆ ದಾಸೋಹಕ್ಕೆ ಮತ್ತಿತರ ಅಡುಗೆಗಳನ್ನು ಮಾಡಿಕೊಂಡು ಬಂದಿದ್ದಾರೆ.
ಕರಾವಳಿಯಲ್ಲಿ ಜಾತ್ರೆಗಳು ಸಮೀಪಿಸುತ್ತಿದ್ದಂತೆ ಧರ್ಮ ಧಂಗಲ್ ಕಾಟ ಹೆಚ್ಚಾಗುತ್ತೆ. ಆದರೆ ಕಲ್ಯಾಣ ಕರ್ನಾಟಕ ಕೊಪ್ಪಳದಲ್ಲಿ ಜಾತಿ, ಮತ ಪಂಥ ಎನ್ನದೇ ಸರ್ವ ಧರ್ಮದವರು ಒಂದೇಡೆ ಸೇರಿ ಜಾತ್ರೆ ಆಚರಿಸುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಗವಿಮಠದ ಮುಂದಿನ ಆವರಣದಲ್ಲಿ ನಿಂತಿರುವ ರಥೋತ್ಸವದ ಮುಂದೆ ಭಾವೈಕ್ಯೆತೆಗೆ ಸಾಕ್ಷಿ ಎಂಬಂತೆ ರಂಗೋಲಿ ಹಾಕಿದ್ದಾರೆ. ಈ ರಂಗೋಲಿ ಜಾತ್ರೆಗೆ ಬರುವ ಭಕ್ತರನ್ನು ಮನಸೆಳೆಯುತ್ತಿದೆ. ಓಂ ಚಿಹ್ನೆ ಆಕಾರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಚಿಹ್ನೆಯನ್ನು ಒಂದೇಡೆ ಸೆರಿಸಿ ರಂಗೋಲಿಯನ್ನು ಬಿಡಿಸಲಾಗಿದೆ. ಇನ್ನು ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದ್ದು, ಎಲ್ಲಿ ನೋಡಿದರೂ ರೊಟ್ಟಿಯ ರಾಶಿಯೇ ಕಾಣುತ್ತದೆ. ಕ್ವಿಂಟಲ್ಗಟ್ಟಲೇ ಅನ್ನ, ದೊಡ್ಡ ದೊಡ್ಡ ಪಾತ್ರೆಯಲ್ಲಿ ಸಾಂಬಾರ್, ಹಾಗೂ ಭಕ್ತರಿಗಾಗಿ ಬರೋಬ್ಬರಿ 275 ಕ್ವಿಂಟಾಲ್ ಮಾದಲಿ ತಯಾರಿಸಲಾಗಿದೆ.
ರಾಜ್ಯದಲ್ಲಿ ಹೆಚ್ಚಾದ ಮೀಸಲಾತಿ ಕೂಗು, ನಮಗೂ ಮೀಸಲಾತಿ ನೀಡಿ ಎಂದ ಈಡಿಗ ಸಮುದಾಯ
ಶ್ರೀಗಳಿಂದ ಭಕ್ತರಿಗೆ ಪ್ರಸಾದ ವಿತರಣೆ
ಇನ್ನು ಮಹಾದಾಸೋಹಕ್ಕೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ದಾಸೋಹ ಸ್ಥಳಕ್ಕೆ ಆಗಮಿಸಿ ಭಕ್ತರಿಗೆ ಪ್ರಸಾದ ನೀಡಿದರು. ಅಡುಗೆ ಸಿದ್ಧತೆಯಲ್ಲಿರುವವರನ್ನು ವಿಚಾರಿಸಿ ಅವರನ್ನು ಮಾತನಾಡಿಸುತ್ತಾ ಪ್ರೋತ್ಸಾಹಿಸಿದರು. ಅಂದಹಾಗೇ ದಕ್ಷಿಣ ಭಾರತದ ಕುಂಬ ಮೇಳವೆಂದೇ ಪ್ರಸಿದ್ದಿಯಾಗಿರುವ ಗವಿಮಠದ ಅಜ್ಜನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಸಂಜೆ 5 ಗಂಟೆಗೆ ಸರಿಯಾಗಿ ಅಜ್ಜನ ಮಹಾರಥೋತ್ಸವ ಜರಗಲಿದ್ದು, ಅಜ್ಜನ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಮಠದ ಆವರಣದಲ್ಲಿ ಭಕ್ತ ಸಮೂಹವೇ ನೆರೆದಿದೆ. ಹಾಗೆಯೇ ಗವಿಮಠದ ಕೈಲಾಸ ಮಂಟಪದಲ್ಲಿ ಜಾತ್ರೆಗೆ ಈಶಾ ಫೌಂಡಶನ್ನ ಸದ್ಗುರು ಜಗ್ಗಿ ವಾಸುದೇವ್ ಚಾಲನೆ ನೀಡಲಿದ್ದಾರೆ.
ರಥ ಎಳೆಯಲು ಕ್ಷಣಗಣನೆ ಆರಂಭ
ಮಠದ ಆವರಣದಲ್ಲಿ ನೆರೆದ ಭಕ್ತರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿಲಿದ್ದಾರೆ. ಕಳೆದೆರಡೂ ವರ್ಷಗಳಿಂದ ಮಹಾಮಾರಿ ಕೊರೊನಾದಿಂದ ಸರಳವಾಗಿ ಜಾತ್ರೆ ಮಾಡಲಾಗಿತ್ತು. ಆದರೆ ಇದೀಗ ಕೊರೊನಾ ತಗ್ಗಿದ್ದು, ಈ ಬಾರಿಯ ಜಾತ್ರೆಗೆ ಕನಿಷ್ಟ ಏನಿಲ್ಲಾ ಅಂದರೂ 5 - 6 ಲಕ್ಷ ಭಕ್ತರು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಕ್ಕಾಗಿಯೇ ಮಠದ ಆಡಳಿತ ಮಂಡಳಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಭಾನುವಾರದಿಂದ (ಜನವರಿ 9) ಮೂರು ದಿನಗಳ ಕಾಲ ಜಾತ್ರೆಯಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳಿದ್ದು, ಒಂದು ತಿಂಗಳುಗಳ ಕಾಲ ಜಾತ್ರೆ ಜರುಗಲಿದೆ. ಇನ್ನು ಜಾತ್ರೆಗೆ ಬರುವ ಭಕ್ತರಿಗಾಗಿ 15 ದಿನಗಳ ಕಾಲ ನಿರಂತರ ಪ್ರಸಾದದ ವ್ಯವಸ್ಥೆಯನ್ನು ಶ್ರೀ ಗವಿಮಠ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮಠದ ಪಕ್ಕದಲ್ಲಿ ಬೃಹತ್ ದಾಸೋಹ ಮಂಟಪವನ್ನು ನಿರ್ಮಾಣ ಮಾಡಲಾಗಿದೆ.
ವಿವಿಧ ಅಡುಗೆಗಳ ವಿವರ ಇಲ್ಲಿದೆ
ಈಗಾಗಲೇ ದವಸ ಧಾನ್ಯ, ಸಿಹಿ ಪದಾರ್ಥ, ರೊಟ್ಟಿ ಸೇರಿದಂತೆ ಹಲವು ಪದಾರ್ಥಗಳು ದಾಸೋಹಕ್ಕೆ ಹರಿದು ಬರುತ್ತಿವೆ. ಇನ್ನು ಜಾತ್ರೆ ಹಿನ್ನೆಲೆಯಲ್ಲಿ ಮಠಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಕೊರೊನಾ ನಂತರ ಮತ್ತೊಮ್ಮೆ ಅಜ್ಜನ ಜಾತ್ರೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಗವಿಮಠದ ಅಜ್ಜ ಹೇಳಿರುವಂತೆ ಈ ಬಾರಿ ಜಾತ್ರೆಯ ಹುಚ್ಚು ಬೀಡಬೇಕು ಎಂದಿರುವುದು ಭಕ್ತರ ಉತ್ಸಾಹಕ್ಕೆ ಪ್ರೇರಣೆಯಾಗಿದೆ.
1200ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್
ಸಂಜೆ ರಥೋತ್ಸವದ ಬಳಿಕ ಮಠದ ಮೇಲಿನ ಬೆಟ್ಟದಲ್ಲಿನ ಕೈಲಾಸ ಮಂಟಪದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆಯ ರಥೋತ್ಸವದಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನೀರಿಕ್ಷೆ ಇದೆ. ಆದ್ದರಿಂದ 1200ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ. ಒಟ್ಟಿನಲ್ಲಿ ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡದಿರುವ ಗವಿಮಠದ ಗವಿಸಿದ್ದೇಶ್ವರ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.