ರಾಜ್ಯದಲ್ಲಿ ಹೆಚ್ಚಾದ ಮೀಸಲಾತಿ ಕೂಗು, ನಮಗೂ ಮೀಸಲಾತಿ ನೀಡಿ ಎಂದ ಈಡಿಗ ಸಮುದಾಯ
ಕೊಪ್ಪಳ , ಡಿ.11: ರಾಜ್ಯದಲ್ಲಿ ಮೀಸಲಾತಿಗಾಗಿ ಹಲವು ಸಮುದಾಯಗಳು ಹೋರಾಟ ನಡೆಸಿವೆ, ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಕೂಡ ಆರಂಭವಾಗಿವೆ. ಇದರ ಬೆನ್ನಲ್ಲೇ ಸದ್ಯ ಮತ್ತೊಂದು ಸಮುದಾಯದಿಂದ ಮೀಸಲಾತಿಯ ಕೂಗು ಕೇಳಿ ಬಂದಿದೆ. ಸಮುದಾಯ ಸ್ವಾಮಿಜಿಗಳು ಎಸ್ಟಿ ಮೀಸಲಾತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆಗೆ ಕರೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಸದ್ಯ ಎಸ್ಸಿ, ಎಸ್ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ, ಪಂಚಮಸಾಲಿಗಳಿಗೆ 2 ಎ ಮೀಸಲಾತಿ, ಬೇಡ ಜಂಗಮರಿಗೆ, ಎಸ್ಸಿ ಮೀಸಲಾತಿಗಾಗಿ ಹೋರಾಟಗಳು ನಡೆದಿವೆ. ಇದರ ಬೆನ್ನಲ್ಲೆ ಸದ್ಯ ಕರ್ನಾಟಕ ರಾಜ್ಯದ ಈಡಿಗ ಸಮುದಾಯವು ಸರ್ಕಾರದ ಎದುರು ಎಸ್ಟಿ ಮೀಸಲಾತಿಗೆ ಬೇಡಿಕೆ ಇಟ್ಟಿದೆ.
ಮೀಸಲಾತಿ ಹೆಚ್ಚಳದ ರಾಜ್ಯ ಬಿಜೆಪಿಯ ಬಲೂನ್ ಗೆ ಕೇಂದ್ರ ಸರ್ಕಾರವೇ ಸೂಜಿ ಚುಚ್ಚಿದೆ: ಸಿದ್ಧರಾಮಯ್ಯ
ಈಡಿಗ ಸಮುದಾಯವನ್ನ ಎಸ್ಟಿಗೆ ಸೇರಿಸಲು ಆಗ್ರಹ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟಕ್ಕೆ ಸಿದ್ದತೆಯಲ್ಲಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಣವಾನಂದ ಸ್ವಾಮೀಜಿ ಈ ಕುರಿತು ಕರೆ ನೀಡಿದ್ದಾರೆ. ಎಸ್ಟಿ ಮೀಸಲಾತಿ, ಸರ್ಕಾರದಿಂದ ಹೆಂಡದ ಮಾರಯ್ಯ ಜಯಂತಿ ಆಚರಣೆ, ಈಡೀಗ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಸರ್ಕಾರದ ಗಮನ ಸೆಳೆಯಲು ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಜನವರಿ 06 ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೂ 658 ಕಿ ಮೀ ಪಾದಯಾತ್ರೆ ಮಾಡುವ ಮೂಲಕ ಎಸ್ಟಿ ಮೀಸಲಾತಿಗೆ ಸರ್ಕಾರದ ಮೇಲೆ ಒತ್ತಾಯ ತರಲಾಗುವುದು ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ರಾಜ್ಯದಲ್ಲಿ 70 ಲಕ್ಷ ಜನ ಈಡಿಗ ಸಮುದಾಯದವರಿದ್ದಾರೆ. ಜೊತೆಗೆ 7 ಜನ ಈಡಿಗ ಶಾಸಕರಿದ್ದು, ಅದರಲ್ಲಿ ಇಬ್ಬರು ಸಚಿವರಿದ್ದರು ಸಹ ಈಡಿಗ ಸಮುದಾಯವನ್ನ ಸರ್ಕಾರ ಕಡೆಗಣಿಸುತ್ತಿದೆ ಎಂದು ಸರಕಾರದ ವಿರುದ್ದ ಸ್ವಾಮೀಜಿ ಕಿಡಿ ಕಾರಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಕುತಂತ್ರದಿಂದ ಈಡಿಗ ಸಮುದಾಯಕ್ಕೆ ಮೋಸವಾಗಿದೆ ಎಂದು ಸಿಎಂ ವಿರುದ್ದ ಹರಿಹಾಯ್ದ ಸ್ವಾಮೀಜಿ, ಸಿಎಂ ಬೊಮ್ಮಾಯಿ ಅವರು ನಮ್ಮ ಸಮುದಾಯದ ಸಚಿವರ ಮಾತುಗಳನ್ನ ಕೇಳದಿದ್ದಲ್ಲಿ ರಾಜೀನಾಮೆ ನೀಡಿ ನಮ್ಮ ಜೊತೆ ಪಾದಯಾತ್ರೆಗೆ ಬನ್ನಿ ಎಂದು ಸಚಿವರಾದ ಸುನೀಲ್ ಕುಮಾರ್ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಸೇಂದಿ ಮಾರಾಟ ಮಾಡುವ ಈಡಿಗ ಸಮುದಾಯ ಒಂದು ಕಾಲದಲ್ಲಿ ರಾಜ್ಯ ನಡೆಸಲು ಆರ್ಥಿಕವಾಗಿ ಸಹಕಾರಿಯಾಗಿತ್ತು. ಆದರೆ ಇಂದು ಈಡಿಗ ಸಮುದಾಯದ ಕುಲಕಸುಬನ್ನು ಕಸಿದುಕೊಂಡು ಅನ್ಯಾಯ ಮಾಡಲಾಗಿದೆ. ಈ ಎಲ್ಲಾ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ್ ಹೇಳಿದ್ದಾರೆ.
ಈಗಾಗಲೇ ಕುರುಬ ಸಮುದಾಯಕ್ಕೆ ಎಸ್ಟಿ ಹಾಗೂ ಪಂಚಮಸಾಲಿಗಳಿಗೆ 2 ಎ ಮೀಸಲಾತಿಗಾಗಿ ನಡೆದ ಹೋರಾಟ ಫಲಪ್ರದವಾಗುವ ಹಂತಕ್ಕೆ ಬಂದು ನಿಂತಿದೆ. ಚುನಾವಣೆಯ ಸಮಯದಲ್ಲಿ ಈ ಮತಗಳ ಮೇಲೆ ನಿಗಾವಹಿಸಿ ಮೀಸಲಾತಿ ಘೋಷಣೆಯಾಗುವ ಮುನ್ಸೂಚನೆಗಳು ಸಿಕ್ಕಿವೆ. ಆದರೆ, ಇಂತಹ ಸಮಯದಲ್ಲೇ ಮತ್ತೊಂದು ಸಮುದಾಯದ ಮೀಸಲಾತಿ ಬೇಡಿಕೆಯಿಂದ ಸರ್ಕಾರ ಯಾವ ನಿರ್ಧಾರ ಕೈಗೊಳ್ಳತ್ತದೆ ಕಾದು ನೋಡಬೇಕಿದೆ.