ಕೊಪ್ಪಳದಲ್ಲಿ ನಿರಂತರ ಮಳೆ; ವಿವಿಧ ಬೆಳೆಗಳಿಗೆ ಹಾನಿ
ಕೊಪ್ಪಳ, ನವೆಂಬರ್ 22; ಕೊಪ್ಪಳ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಭತ್ತ ಮತ್ತು ಇತರ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ತ್ವರಿತವಾಗಿ ಪರಿಹಾರಕ್ಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಸೋಮವಾರ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಪ್ಪಳ ತಾಲ್ಲೂಕಿನ ಅಗಳಕೇರಾ ಗ್ರಾಮದಲ್ಲಿ ಭತ್ತ ಬೆಳೆ ನಾಶ ಪ್ರದೇಶ ವೀಕ್ಷಿಸಿದ ಬಳಿಕ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು. "ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಹಾನಿಯಾಗಿರುವ ಬೆಳೆಗಳ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿ, ರೈತರಿಗೆ ಸಾಂತ್ವನ ಹೇಳುತ್ತಿದ್ದೇವೆ" ಎಂದರು.

'ಅಕಾಲಿಕ ಮಳೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಭತ್ತ, ದ್ರಾಕ್ಷಿ, ಶೇಂಗಾ, ತೊಗರಿ, ಮೆಕ್ಕೆಜೋಳ, ಈರುಳ್ಳಿ ಹಾಗೂ ಪ್ರಮುಖ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಈ ಬೆಳೆಗಳ ಬಗ್ಗೆ ಸಮೀಕ್ಷೆ ನಡೆಸಿ, ತಕ್ಷಣ ಸರ್ಕಾರಕ್ಕೆ ವರದಿಯನ್ನು ಕೊಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ" ಎಂದು ಸಚಿವರು ತಿಳಿಸಿದರು.
"ಮಳೆಯಿಂದಾಗಿ ನವೆಂಬರ್ 21ರವರೆಗೆ ಸಾಕಷ್ಟು ಬೆಳೆ ನಾಶ ಹಾಗೂ ಹಲವು ಕಡೆ ಮನೆಗಳಿಗೂ ಸಹ ಹಾನಿಯಾಗಿದೆ. ಮಳೆಯಿಂದ ನಷ್ಟವುಂಟಾದ ಮನೆಗಳನ್ನು ಎ, ಬಿ ಹಾಗೂ ಸಿ ಕೆಟಗೇರಿಯಲ್ಲಿ ಸರ್ವೇ ನಡೆಸುವಂತೆ ತಿಳಿಸಿದ್ದು, ಇದರಿಂದ ಮನೆಗಳು ನಷ್ಟವಾದ ಪ್ರಮಾಣದನ್ವಯ ಪರಿಹಾರ ನೀಡಲು ಅನುಕೂಲವಾಗುತ್ತದೆ" ಎಂದು ಮಾಹಿತಿ ನೀಡಿದರು.
"ಪ್ರಾಥಮಿಕ ಸಮೀಕ್ಷೆಯ ವರದಿಯಂತೆ ಜಿಲ್ಲೆಯಲ್ಲಿ 18,855 ಹೆಕ್ಟರ್ ಭತ್ತ ನಷ್ಟವಾಗಿರುವ ಬಗ್ಗೆ ವರದಿಯಿದ್ದು, ಇನ್ನು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಬೆಳೆ ವಿಮೆಗೆ ಸಂಬಂಧಿಸದಂತೆ 64,0351ಕ್ಕೂ ಅಧಿಕ ರೈತರು ಇನ್ಸೂರೆನ್ಸ್ ಪಾವತಿಸಿದ್ದು, ವಿಮಾ ಪರಿಹಾರ ಮೊತ್ತವನ್ನು ರೈತರಿಗೆ ನೀಡಲು ಆಯಾ ಇನ್ಸೂರೆನ್ಸ್ ಕಂಪನಿಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ" ಎಂದು ಸಚಿವರು ಹೇಳಿದರು.

ರೈತರಿಗೆ ಬೆಳೆ ನಷ್ಟದ ಪರಿಹಾರ ಒದಗಿಸಲು ನವೆಂಬರ್ 30ರೊಳಗಾಗಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಅನುದಾನಡಿ ತಕ್ಷಣ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಿದೆ.
ವಿವಿಧ ಕಡೆ ಪರಿಶೀಲನೆ; ಕೊಪ್ಪಳ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಹಲವು ಬೆಳೆಗಳು ನಷ್ಟವಾಗಿವೆ. ಸಚಿವರು ಸೋಮವಾರ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ, ಕಲ್ಲಭಾವಿ, ಮಾಟಲದಿನ್ನಿ, ಪುಟಗಮರಿ ಹಾಗೂ ಕೊಪ್ಪಳ ತಾಲ್ಲೂಕಿನ ಅಗಳಕೇರಾ, ಶಿವಪುರ, ಬಂಡಿಹರ್ಲಾಪುರದಲ್ಲಿ ಸಮೀಕ್ಷೆ ನಡೆಸಿದರು.
ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲ್ಲೂಕುಗಳ ಸಾಣಾಪುರ, ಆನೆಗೊಂದಿ, ಸಂಗಾಪುರ, ಗಂಗಾವತಿ, ಡಾಣಾಪುರ, ಹೆಬ್ಬಾಳ, ಮುಸ್ಟೂರು, ಜಮಾಪುರ, ನಂದಿಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬೆಳೆ ಹಾನಿ ಪ್ರದೇಶಗಳಿಗೆ ಸಚಿವರು ತೆರಳಿ, ಬೆಳೆ ನಷ್ಟದ ವೀಕ್ಷಣೆ ಮಾಡಿದರು.
ಸಹಾಯವಾಣಿ ಆರಂಭ; ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ತುರ್ತು ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ವ್ಯವಸ್ಥೆಯನ್ನು ಮಾಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಾದ್ಯಂತ ಇನ್ನೂ ಒಂದು ವಾರ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ.
ಸಹಾಯವಾಣಿ ಸಂಖ್ಯೆ ವಿವರ
* ಜಿಲ್ಲಾಧಿಕಾರಿ ಕಚೇರಿ 08539-225001, 9481767314
* ಕೊಪ್ಪಳ ತಾಲ್ಲೂಕು ಸಹಾಯವಾಣಿ 08539-220381, 9164258531
* ಯಲಬುರ್ಗಾ ತಾಲ್ಲೂಕು 7975027648, 6360821215
* ಕುಷ್ಟಗಿ ತಾಲ್ಲೂಕು 8217634269, 08536-267031
* ಕನಕಗಿರಿ ತಾಲ್ಲೂಕು 9900433012, 9535754151
* ಕುಕನೂರು 8050303495, 9902488347
* ಗಂಗಾವತಿ 9740793877, 08533-230929
* ಕಾರಟಗಿ 8792429600, 08533-275106/07












Click it and Unblock the Notifications