ಕೊಪ್ಪಳ ರಾಜಕೀಯ: 5 ಕ್ಷೇತ್ರಗಳ ಕ್ಲೀನ್ ಸ್ವೀಪ್ ನತ್ತ ಕಾಂಗ್ರೆಸ್ ಚಿತ್ತ
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಮೂರ್ನಾಲ್ಕು ತಿಂಗಳು ಬಾಕಿ ಇರುವಾಗಲೇ ಭತ್ತದ ಕಣಜ ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆಯ ಕಾವು ನಿಧಾನವಾಗಿ ಏರ ತೊಡಗಿದೆ.
ಕೊಪ್ಪಳ ಜಿಲ್ಲೆ 5 ವಿಧಾನಸಭೆ ಕ್ಷೇತ್ರ ಒಳಗೊಂಡಿದ್ದು, ಐದು ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಇದ್ದು, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಐದು ಕ್ಷೇತ್ರಗಳ ಪೈಕಿ ಕಳೆದ 2013 ಚುನಾವಣೆಯಲ್ಲಿ ಕಾಂಗ್ರೆಸ್ ಕನಕಗಿರಿ, ಕೊಪ್ಪಳ, ಯಲಬುರ್ಗಾ ಒಟ್ಟು 3 ಕ್ಷೇತ್ರಗಳಲ್ಲಿ ಗೆದ್ದಿದ್ದು, ಜೆಡಿಎಸ್ (ಗಂಗಾವತಿ) ಹಾಗೂ ಬಿಜೆಪಿ (ಕುಷ್ಟಗಿ) ತಲಾ ಒಂದು ಕ್ಷೇತ್ರಗಳಲ್ಲಿ ಗೆದ್ದಿವೆ.
ಆದರೆ, ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿ ಜೆಡಿಎಸ್ ತೊರೆದು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿಯುವುದು ಗ್ಯಾರಂಟಿಯಾಗಿದ್ದು, ಈ ಕ್ಷೇತ್ರವನ್ನು ಸಹ ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಳ್ಳುವುದುರಲ್ಲಿ ಅನುಮಾನವೇ ಇಲ್ಲ.
ಇನ್ನು ಕಳೆದ ಬಾರಿ ಬಿಜೆಪಿ ಪಾಲಾಗಿರುವ ಕುಷ್ಟಗಿಗೆ ಹಿರಿಯ ನಾಯಕ ಅಮರೇಗೌಡ ಮತ್ತೆ ಅಖಾಡಕ್ಕೆ ಇಳಿಯಲಿದ್ದು, ಈ ಬಾರಿ ಗೆಲ್ಲುವ ಫೆವರೆಟ್ ಎನಿಸಿದ್ದಾರೆ. ಒಂದು ವೇಳೆ ಅಮರೆಗೌಡ ಗೆದ್ದಿದ್ದೆಯಾದರೆ ಕೊಪ್ಪಳ ಜಿಲ್ಲೆ 5ಕ್ಕೆ 5 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿದೆ. ಹಾಗಾದರೆ ಈ ಐದು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಕೊಪ್ಪಳ ವಿಧಾನಸಭಾ ಕ್ಷೇತ್ರ
ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಲಿ ಸಂಸದ ಕರಡಿ ಸಂಗಣ್ಣ ಅವರನ್ನು ಮಣಿಸಿದ್ದರು. ಕರಡಿ ಸಂಗಣ್ಣ ಈ ಮೊದಲು ಜೆಡಿಎಸ್ ನಲ್ಲಿ ಇದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 2013ರ ಅಸೆಂಬ್ಲಿಯಲ್ಲಿ ಸೋತ ಬಳಿಕ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿಯ 2018 ವಿಧಾನಸಭೆಗೆ ಕಾಂಗ್ರೆಸ್ ನಿಂದ ರಾಘವೇಂದ್ರ ಹಿಟ್ನಾಳ್ ಸ್ಪರ್ಧಿಸುವುದು ಖಚಿತವಾಗಿದೆ.

ಗಂಗಾವತಿ ಅಸೆಂಬ್ಲಿ ಕ್ಷೇತ್ರ
ತೀವ್ರ ಪೈಪೋಟಿಯಿಂದ ಕೂಡಿರುವ ಗಂಗಾವತಿ ಅಸೆಂಬ್ಲಿ ಕ್ಷೇತ್ರ 2013ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಇಕ್ಬಾಲ್ ಅನ್ಸಾರಿ ಅವರು ಬಿಜೆಪಿಯ ಪರಣ್ಣ ಮನವಳ್ಳಿ ಅವರನ್ನು ಸೋಲಿಸಿದ್ದರು. ಆದರೆ, ಈ ಬಾರಿ ಅನ್ಸಾರಿ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ಇತ್ತೀಚೆಗೆ ಸಿದ್ದರಾಮಯ್ಯ ಅವರು ಸಾರ್ವಜನಿಕ ವೇದಿಕೆಯಲ್ಲಿಯೇ ಅನ್ಸಾರಿ ಅವರನ್ನು ಕೊಂಡಾಡಿರುವುದು ಜೊತೆಗೆ ಈ ಬಾರಿಯೂ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿ.

ಕನಕಗಿರಿ ವಿಧಾನಸಭಾ ಕ್ಷೇತ್ರ
ಎಸ್ ಸಿ ಮೀಸಲು ಕ್ಷೇತ್ರವಾಗಿರುವ ಕನಕಗಿರಿ ವಿಧಾನಸಭಾ ಕ್ಷೇತ್ರ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಶಿವರಾಜ ತಂಗಡಿಗಿಯದ್ದೇ ಹವಾ. ಮೊದಲ ಬಾರಿಗೆ ಅಂದರೆ 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಿಜೆಪಿಗೆ ಬೆಂಬಲಿಸಿ ಸಚಿವರಾಗಿದ್ದ ತಂಗಡಗಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಎಸ್ ವೈ ಆಪ್ತ ಬಸವರಾಜ ಧಡೇಸ್ಗೂರು ಅವರನ್ನು ಸೋಲಿಸಿ ಮತ್ತೆ ಮಂತ್ರಿಗಿರಿ ಪಡೆದುಕೊಂಡಿದ್ದರು. 2018ರ ಚುನಾವಣೆಯಲ್ಲೂ ಕಾಂಗ್ರೆಸ್ ನಿದ ತಂಗಡಗಿ ಕಣ್ಣಕ್ಕಿಳಿಯುವುದು ನೂರಕ್ಕೆ ನೂರು ಪಕ್ಕಾ ಆಗಿದ್ದು, ಬಸವರಾಜ ಧಡೇಸ್ಗೂರು v/s ಶಿವರಾಜ ತಂಗಡಗಿ ನಡುವೆ ತೀವ್ರ ಸ್ಪರ್ಧಿಯಾಗಲಿದೆ.

ಕುಷ್ಟಗಿ ಅಸೆಂಬ್ಲಿ ಕ್ಷೇತ್ರ
ಕುಷ್ಟಗಿ ಅಸೆಂಬ್ಲಿ ಕ್ಷೇತ್ರ ಅತಿ ಹೆಚ್ಚು ಕುರುಬ ಮತದಾರರನ್ನು ಹೊಂದಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ನ ಅಮರೇಗೌಡ ಬಯ್ಯಾಪುರ ನಡುವೆ ಜಿದ್ದಾಜಿದ್ದಿಯಿಂದ ಕೂಡಿದೆ. ಬೇರೆ ಕ್ಷೇತ್ರದಿಂದ ವಲಸೆ ಬಂದು 2008ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಯ್ಯಾಪುರ ಗೆಲುವಿನ ನಗೆ ಬೀರಿದ್ದರು. ಆದರೆ, 2013ರ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಬಯ್ಯಾಪುರ ಅವರನ್ನು ಬಿಜೆಪಿಯ ಕುರುಬ ಜನಾಂಗದ ದೊಡ್ಡನಗೌಡ ಪಾಟೀಲ್ ಅವರು ಮಣಿಸಿದ್ದರು. ಇದೀಗ ಬಯ್ಯಾಪುರ ಹವಾ ಜೋರಾಗಿದ್ದು ಮತ್ತೆ ಬಯ್ಯಾಪುರ 2018ರ ಚುನಾವಣೆಯಲ್ಲಿ ಗೆಲ್ಲುವ ಫೆವರೆಟ್ ಎನಿಸಿದ್ದಾರೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ನ ಡೈನಾಮಿಕ್ ಲೀಡರ್ ಹಾಲಿ ಸಚಿವ ಬಸವರಾಜ ರಾಯರೆಡ್ಡಿ ಅವರನ್ನು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಟಚ್ ಮಾಡುವವರೆ ಇಲ್ಲ. ಹಾಗಾಗಿ ಇವರಿಗೆ ಚುನಾವಣೆ ಕಣದಲ್ಲಿ ಪೈಪೋಟಿ ನೀಡುವ ಯಾವೊಬ್ಬ ಅಭ್ಯರ್ಥಿ ಹುಟ್ಟಿಕೊಂಡಿಲ್ಲ. ಆದ್ದರಿಂದ ಈ ಬಾರಿಯೂ ಅಂದರೆ 2018ರ ಚುನಾವಣೆಯಲ್ಲಿ ರಾಯರೆಡ್ಡಿ ಗೆಲುವು ಕಟ್ಟಿಟ್ಟಾ ಬುತ್ತಿ

ಕೊಪ್ಪಳ ಜಿಲ್ಲೆಯ ಕ್ಲೀನ್ ಸ್ವೀಪ್ ಮೇಲೆ ಕಾಂಗ್ರೆಸ್ ಕಣ್ಣು
ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಗಂಗಾವತಿಯ ಅನ್ಸಾರಿ ಕಾಂಗ್ರೆಸ್ ನಿಂದ ಬರುವುದುರಿಂದ ಈ ಕ್ಷೇತ್ರವು ಕಾಂಗ್ರೆಸ್ ಕೈವಶವಾಗಲಿದೆ. ಇನ್ನು ಒಂದು ಕ್ಷೇತ್ರ ಅರು ಕುಷ್ಟಗಿಯನ್ನು ಈ ಬಾರಿ ಶತಾಯಗತಾಯವಾಗಿ ಕಾಂಗ್ರೆಸ್ ಗೆಲ್ಲಲು ಭಾರೀ ಕಸರತ್ತು ನಡೆಸಿರುವುದು ಒಂದು ಕಡೆಯಾಗಿದ್ದರೆ, ಮತ್ತೊಂದೆಡೆ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಜನಪ್ರಿಯತೆ ಕುಂಠಿತವಾಗಿದೆ, ಇದರಿಂದ ಕ್ಷೇತ್ರದಲ್ಲಿ ಅಮರೇಗೌಡ ಬಯ್ಯಾಪೂರ ಪರ ಗಾಳಿ ಬೀಸುತ್ತಿದೆ. ಒಂದು ವೇಳೆ ಕುಷ್ಟಗಿ ಮತ್ತು ಗಂಗಾವತಿಯಲ್ಲಿ ಕಾಂಗ್ರೆಸ್ ಗೆದ್ದರೆ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆ.

ನವ ಕರ್ನಾಟಕ ಯಾತ್ರೆಯಲ್ಲಿ ಘೋಷಿಸಿದ ಸಿಎಂ
ಕಾಂಗ್ರೆಸ್ ಈಗಾಗಲೇ ಜಿಲ್ಲೆಯ ಐದು ಅಸೆಂಬ್ಲಿ ಕ್ಷೇತ್ರಗಳಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವ ಕರ್ನಾಟಕ ನಿರ್ಮಾಣ ಯಾತ್ರೆಯ ವೇಳೆ ಚುನಾವಣೆ ಕಾರ್ಯತಂತ್ರಗಳನ್ನು ಆರಂಭಿಸಿ ಎಂದು ಪರೋಕ್ಷವಾಗಿ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದು, ಅವರನ್ನು ಮನವೊಲಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.












Click it and Unblock the Notifications