ಅಂಜನಾದ್ರಿ ಬೆಟ್ಟದ ಹುಂಡಿ ಎಣಿಕೆ; 6 ಲಕ್ಷ ರೂ. ಸಂಗ್ರಹ
ಕೊಪ್ಪಳ, ಮೇ 31; ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿನ ಹುಂಡಿಯನ್ನು ಎಣಿಕೆ ಮಾಡಲಾಗಿದೆ. ಒಟ್ಟು 6,37,458 ರೂ. ಸಂಗ್ರಹವಾಗಿದ್ದು, 2 ನೇಪಾಳ ದೇಶದ ನಾಣ್ಯಗಳು ಸಹ ಪತ್ತೆಯಾಗಿವೆ.
ಶ್ರೀ ಆಂಜನೇಯ ದೇವಾಲಯ ಅಂಜನಾದ್ರಿ ಬೆಟ್ಟ ಆನೆಗುಂದಿಯಲ್ಲಿ ಸೋಮವಾರ ಗಂಗಾವತಿ ತಹಶೀಲ್ದಾರ್ ನಾಗರಾಜ ನೇತೃತ್ವದಲ್ಲಿ ಹುಂಡಿಯ ಎಣಿಕೆ ನಡೆಯಿತು. ಲಾಕ್ಡೌನ್ ಸಮಯದಲ್ಲಿ ಹುಂಡಿಯಲ್ಲಿನ ಹಣ ಹಾಳಾಗುವ ಸಾಧ್ಯತೆ ಇರುವುದರಿಂದ ಏಣಿಕೆ ಮಾಡಲಾಗಿದೆ.
ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಎಣಿಕೆ ನಡೆಯಿತು. ಕಳೆದ ಬಾರಿ 18-03-2021 ರಂದು ಹುಂಡಿ ತೆರೆಯಲಾಗಿತ್ತುಆಗ 15,42,204 ರೂ. ಸಂಗ್ರಹವಾಗಿತ್ತು. ಕೋವಿಡ್ ಕಾರಣದಿಂದ ದೇವಾಲಯ ಬಂದ್ ಇರುವ ಕಾರಣ ಈಗ ಹುಂಡಿ ಏಣಿಕೆ ಮಾಡಲಾಗಿದೆ.

33 ದಿನದಲ್ಲಿ 6,37,458 ರೂಪಾಯಿ ಸಂಗ್ರಹವಾಗಿದೆ. ಮಾರ್ಚ್ 18 ರಿಂದ ಏಪ್ರಿಲ್ 21ರ ತನಕ ಹುಂಡಿಯಲ್ಲಿ ಸಂಗ್ರವಾದ ಹಣದ ಎಣಿಕೆ ಇಂದು ನಡೆದಿದೆ. ದೇವಾಲಯದ ಆಡಳಿತ ಮಂಡಳಿ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.
ಆಂಜನೇಯ ಜನಿಸಿರುವ ಅಂಜನಾದ್ರಿ ಬೆಟ್ಟದ ಮೂಲಭೂತ ಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ 2 ಹಂತದ ಯೋಜನೆಯನ್ನು ರೂಪಿಸಿದೆ. ಮೊದಲ ಹಂತದಲ್ಲಿ ರೂ. 50 ಕೋಟಿ ವೆಚ್ಚದಲ್ಲಿ ಅತೀ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
ಅಂಜನಾದ್ರಿ ಬೆಟ್ಟದಲ್ಲಿ 2ನೇ ಹಂತದಲ್ಲಿ ರೋಪ್ ವೇ, ಯಾತ್ರಿ ನಿವಾಸ, ವಾಟರ್ ಸ್ಪೋರ್ಟ್ಸ್ ಆರಂಭ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ವಿವಿಧ ಇಲಾಖೆಗಳು ಜಂಟಿಯಾಗಿ ಈ ಕಾರ್ಯವನ್ನು ಕೈಗೊಳ್ಳಲಿವೆ. ಲಾಕ್ಡೌನ್ ಪರಿಣಾಮ ಕೆಲಸಗಳು ಸ್ಥಗಿತವಾಗಿವೆ.












Click it and Unblock the Notifications