ಪ.ಬಂಗಾಳದಲ್ಲಿ ಬಿಜೆಪಿ ಭಾರೀ ಬಲವೃದ್ದನೆ: ಟಿಎಂಸಿ, ಎಡರಂಗಕ್ಕೆ ಎದುರಾಳಿ ಯಾರು ಎನ್ನುವುದೇ ಗೊಂದಲ!
ಅಸೆಂಬ್ಲಿ ಚುನಾವಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಜೂನ್ 21, 1977ರಲ್ಲಿ ಶುರುವಾಗಿದ್ದ ಕಮ್ಯೂನಿಸ್ಟರ ಪಾರುಪತ್ಯಕ್ಕೆ ಬ್ರೇಕ್ ಹಾಕಿದ್ದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್. ಸತತವಾಗಿ ಅಧಿಕಾರದ ರುಚಿ ಅನುಭವಿಸಿದ್ದ ಸಿಪಿಐ(ಎಂ)ಗೆ ಟಿಎಂಸಿ ಠಕ್ಕರ್ ನೀಡಿತ್ತು.
ಸತತವಾಗಿ 23 ವರ್ಷ ಜ್ಯೋತಿ ಬಸು, ಇವರ ನಿಧನದ ನಂತರ ಹತ್ತು ವರ್ಷ ಬುದ್ದದೇಬ್ ಭಟ್ಟಾಚಾರ್ಯ ಪಶ್ಚಿಮ ಬಂಗಾಳದಲ್ಲಿ ರಾಜ್ಯಭಾರ ನಡೆಸಿದ್ದರು. ಇದಾದ ನಂತರ ಆಡಳಿತ ವಿರೋಧಿ ಅಲೆಯೆದ್ದು 2011ರ ಅಸೆಂಬ್ಲಿ ಚುನಾವಣೆಯಲ್ಲಿ ಟಿಎಂಸಿ ಅಧಿಕಾರಕ್ಕೆ ಬಂತು.
ಎಡಪಕ್ಷಗಳಿಗೆ ಅಲ್ಲಿಂದ ಆರಂಭವಾದ ಹಿನ್ನಡೆಯಲ್ಲಿ, ರಾಜ್ಯ ಈಗ ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿದ್ದರೂ ಯಾವುದೇ ಚೇತರಿಕೆ ಕಾಣುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಎಡಪಕ್ಷಗಳು ತಮ್ಮ ಅಂದಿನ ಗತ ರಾಜಕೀಯವನ್ನು ಮರುಕಳಿಸಲು ಪಡುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಫಲ ಸಿಗುತ್ತಿಲ್ಲ.
ಸತತವಾಗಿ ಎರಡು ಅವಧಿಯಿಂದ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ಸಿಗೆ ಈ ಬಾರಿ ಬಿಜೆಪಿ ಭಾರೀ ಸಡ್ಡನ್ನು ನೀಡುತ್ತಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಸದ್ದನ್ನು ಮಾಡಿತ್ತು. ಹಾಗಾಗಿ, ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮೂರು ಪಕ್ಷಗಳ ನಿದ್ದೆಗೆಡಿಸಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಹಲವು ಸುತ್ತಿನಲ್ಲಿ ರಾಜ್ಯಕ್ಕೆ ಭೇಟಿ
ಮುಂದಿನ ವರ್ಷದ ಮೇ ತಿಂಗಳೊಳಗೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಬೇಕಿದೆ. ಬಿಜೆಪಿ ಈಗಾಗಲೇ ಪ್ರಚಾರದ ಕೆಲಸವನ್ನು ಚುರುಕುಗೊಳಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಹಲವು ಸುತ್ತಿನಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆಡಳಿತ ಟಿಎಂಸಿಯ ಪ್ರಮುಖ ಮುಖಂಡರು ಪಕ್ಷಕ್ಕೆ ಗುಡ್ ಬೈ ಹೇಳುತ್ತಿರುವುದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗುತ್ತಿದೆ. (ಚಿತ್ರ:ಪಿಟಿಐ)

2011ರ ಚುನಾವಣೆಯಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಹೊಂದಾಣಿಕೆ
2011ರ ಚುನಾವಣೆಯಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿದಿದ್ದವು. ಈ ಮೈತ್ರಿಕೂಟ 226 ಸ್ಥಾನವನ್ನು ಗೆದ್ದಿದ್ದವು. ಸತತವಾಗಿ ಅಧಿಕಾರದಲ್ಲಿ ಎಡಪಕ್ಷಗಳು ಭಾರೀ ಮುಖಭಂಗವನ್ನು ಎದುರಿಸಬೇಕಾಯಿತು. ಸಿಪಿಐ(ಎಂ) ಕೇವಲ ನಲವತ್ತು ಸ್ಥಾನದಲ್ಲಿ ಮಾತ್ರ ಗೆದ್ದಿದ್ದರೆ, ಫಾರ್ವರ್ಡ್ ಬ್ಲಾಕ್ ಹನ್ನೊಂದು ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.

ಟಿಎಂಸಿ ತನ್ನ ಸ್ಥಿತಿಯನ್ನು ಇನ್ನಷ್ಟು ಸುಧಾರಿಸಿಕೊಂಡಿತ್ತು
2016ರಲ್ಲಿ ನಡೆದ ಚುನಾವಣೆಯಲ್ಲಿ ಟಿಎಂಸಿ ತನ್ನ ಸ್ಥಿತಿಯನ್ನು ಇನ್ನಷ್ಟು ಸುಧಾರಿಸಿಕೊಂಡಿತ್ತು. 211ಸ್ಥಾನದಲ್ಲಿ ಟಿಎಂಸಿ ಗೆದ್ದರೆ, ಸಿಪಿಐ(ಎಂ) ತನ್ನ ನಿರಾಶಾದಾಯಕ ಪ್ರದರ್ಶನವನ್ನು ಮುಂದುವರಿಸಿತ್ತು. ಇನ್ನು, ಕಾಂಗ್ರೆಸ್ 44 ಸ್ಥಾನದಲ್ಲಿ ಗೆದ್ದಿದ್ದರೆ, ಬಿಜೆಪಿ ಕೇವಲ ಮೂರು ಸ್ಥಾನದಲ್ಲಿ ಗೆಲುವು ಕಂಡುಕೊಂಡಿತ್ತು. ಆದರೆ, ಈಗ ರಾಜ್ಯದ ರಾಜಕೀಯ ಚಿತ್ರಣವೇ ಬೇರೆ ಎನ್ನುವುದಕ್ಕೆ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಸಾಕ್ಷಿ.

ಕಳೆದ ಲೋಕಸಭಾ ಚುನಾವಣೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 42ಕ್ಷೇತ್ರಗಳಲ್ಲಿ ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಮತ್ತು ಎಡರಂಗಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. 22ಸ್ಥಾನದಲ್ಲಿ ಟಿಎಂಸಿ, ಕಾಂಗ್ರೆಸ್ 2ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. 18 ಸೀಟನ್ನು ಗೆಲ್ಲುವ ಮೂಲಕ ಬಿಜೆಪಿ, ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಸದ್ಯಕ್ಕೆ ಲಭ್ಯವಾಗುತ್ತಿರುವ ಸಮೀಕ್ಷೆಯ ಪ್ರಕಾರ, ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಟಿಎಂಸಿಯ ಹಾದಿ ಸುಗಮವಾಗಿಲ್ಲ. (ಚಿತ್ರ:ಪಿಟಿಐ)

ಟಿಎಂಸಿ, ಎಡರಂಗ ಮತ್ತು ಕಾಂಗ್ರೆಸ್
ಇಲ್ಲಿ ಬಿಜೆಪಿ ಹೊರತಾಗಿ ಇತರ ಪ್ರಮುಖ ಮೂರು ಪಕ್ಷಗಳಾದ ಟಿಎಂಸಿ, ಎಡರಂಗ ಮತ್ತು ಕಾಂಗ್ರೆಸ್ಸಿಗೆ ತಮ್ಮ ವಿರೋಧಿ ಯಾರು ಎನ್ನುವುದೇ ದೊಡ್ಡ ಗೊಂದಲ. ಆದರೆ, ಬಿಜೆಪಿಗೆ ಈ ಸಮಸ್ಯೆಯಿಲ್ಲ. ಹತ್ತು ವರ್ಷಗಳ ಹಿಂದೆ ಟಿಎಂಸಿಗೆ ಎಡಪಕ್ಷಗಳು ತಮ್ಮ ವಿರೋಧಿಯಾಗಿದ್ದವು, ಹಾಗೆಯೇ ಎಡಪಕ್ಷಗಳಿಗೆ ಮಮತಾ ವಿರೋಧಿಯಾಗಿದ್ದರು. ಆದರೆ, ಈಗ ಎಲ್ಲಾ ಮೂರು ಪಕ್ಷಗಳಿಗೆ ತಮ್ಮ ವಿರೋಧಿ ಬಿಜೆಪಿಯೋ ಅಥವಾ ಇನ್ನೊಂದು ಪಕ್ಷವೋ ಎನ್ನುವ ಗೊಂದಲವಿದೆ. ಬಿಜೆಪಿ ಇದರ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.












Click it and Unblock the Notifications