ಎಲ್ಲಾ ಮುಗೀತು, ಈಗ ಮಮತಾ ಕಣ್ಣಲ್ಲಿ ಟಿಎಂಸಿ ಸದಸ್ಯರೇ ವಿಲನ್!
ಕೋಲ್ಕತ್ತಾ, ಜೂನ್ 08: ಇಷ್ಟು ದಿನ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಣ್ಣಲ್ಲಿ ಇದೀಗ ಟಿಎಂಸಿ ಸದಸ್ಯರೇ ವಿಲನ್ ಆಗಿದ್ದಾರೆ!
ಟಿಎಂಸಿ ಭದ್ರಕೋಟೆಯಾಗಿದ್ದ ಬಂಗಾಳದ ಹೂಗ್ಲಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಟಿಎಂಸಿ ಸೋಲಿಗೆ ಪಕ್ಷದ ನಾಯಕರ ದುರಾಸೆ ಮತ್ತು ಸ್ವಜನ ಪಕ್ಷಪಾತವೇ ಕಾರಣ ಎಂದು ದೀದಿ ದೂರಿದ್ದಾರೆ.
ಶುಕ್ರವಾರ ಪಕ್ಷದ ಕಳಪೆ ಪ್ರದರ್ಶನದ ಅವಲೋಕನದ ಸಭೆ ನಡೆಸಿದ್ದ ಮಮತಾ ಬ್ಯಾನರ್ಜಿ ಯಾವೆಲ್ಲ ಕ್ಷೇತ್ರಗಳಲ್ಲಿ ಟಿಎಂಸಿ ಸೋಲು ಕಂಡಿದೆಯೋ ಆ ಎಲ್ಲ ಕ್ಷೇತ್ರಗಳ ಸೋಲಿಗೆ ಕಾರಣವೇನು ಎಂಬ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಟಿಎಂಸಿ ನಾಯಕರನ್ನು ತರಾಟೆಗೆ ತೆಗೆದುಕೊಂಡು, ಪಕ್ಷದ ಸೋಲಿಗೆ ನಿಮ್ಮ ದುರಾಸೆ, ಸ್ವಜನ ಪಕ್ಷಪಾತವೇ ಕಾರಣ. ನೀವ್ಯಾರೂ ಚುನಾವಣೆಯನ್ನು ಗಂಭೀರವಾಗಿ ಎದುರಿಸಲಿಲ್ಲ ಎಂದು ದೂರಿದರು.

ಬಿಜೆಪಿ ನಾಯಕರು ಚುನಾವಣೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಆದರೆ ಅದನ್ನು ತಡೆಯಲು ಟಿಎಂಸಿ ಕಾರ್ಯಕರ್ತರು ವಿಫಲರಾದರು. ಅಲ್ಲದೆ ಪಶ್ಚಿಮ ಬಂಗಾಳ ಸರ್ಕಾರದ ಜನಸ್ನೇಹಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿಯೂ ಪಕ್ಷದ ಕಾರ್ಯಕರ್ತರ ವೈಫಲ್ಯ ಎದ್ದು ಕಾಣಿಸುತ್ತಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದರು.












Click it and Unblock the Notifications