ಭಾರೀ ಮುಖಭಂಗದತ್ತ ಮಮತಾ: ಬಿಜೆಪಿಯತ್ತ ಪಕ್ಷಾಂತರದ ಮಹಾಪರ್ವ?
ಭಾರೀ ಮುಖಭಂಗದತ್ತ ಮಮತಾ: ಟಿಎಂಸಿ ಬುಡಕ್ಕೇ ಕೈಹಾಕಿದ ಬಿಜೆಪಿ
ಕೋಲ್ಕತ್ತಾ, ಜುಲೈ 13: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಭರ್ಜರಿ ಟಕ್ಕರ್ ನೀಡಿದ್ದ ಬಿಜೆಪಿ, ಈಗ ತೃಣಮೂಲ ಕಾಂಗ್ರೆಸ್ಸಿನ ಬುಡಕ್ಕೇ ಕೈಹಾಕಲು ಮುಂದಾಗಿದ್ದು, ಹಾಲೀ ಟಿಎಂಸಿ ಮತ್ತು ಕಾಂಗ್ರೆಸ್ಸಿನ ಶಾಸಕರು, ಬಿಜೆಪಿಗೆ ಸೇರಲು ಸಿದ್ದರಾಗಿದ್ದಾರೆ.
ಟಿಎಂಸಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷದ ಸುಮಾರು 107 ಶಾಸಕರು ಬಿಜೆಪಿ ಸೇರಲು ಸಿದ್ದರಾಗಿದ್ದಾರೆಂದು, ಒಂದು ಕಾಲದಲ್ಲಿ ಮಮತಾ ಆಪ್ತ, ಈಗ ಬಿಜೆಪಿಯ ಪ್ರಭಾವೀ ಮುಖಂಡರಾಗಿರುವ ಮುಕುಲ್ ರಾಯ್ ತಿಳಿಸಿದ್ದಾರೆ.
ಕರ್ನಾಟಕ ಮತ್ತು ಗೋವಾದಲ್ಲಿ ನಡೆಯುತ್ತಿರುವಂತಹ ರಾಜಕೀಯ ಬೆಳವಣಿಗೆಯ ರೀತಿಯಲ್ಲಿ ಪಶ್ಚಿಮ ಬಂಗಾಳವೂ ಈ ರೀತಿಯ ವಿದ್ಯಮಾನಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಗೋವಾದ ಹತ್ತು ಕಾಂಗ್ರೆಸ್ ಶಾಸಕರು ಬಿಜೆಪಿಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.

2016ರಲ್ಲಿ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ 294 ಕ್ಷೇತ್ರಗಳ ಪೈಕಿ 211 ಸ್ಥಾನವನ್ನು ಗೆದ್ದಿತ್ತು. ಎಚ್ ಡಿ ಕುಮಾರಸ್ವಾಮಿಯ ರೀತಿಯಲ್ಲಿ ಮಮತಾ ಬ್ಯಾನರ್ಜಿಗೂ ಪಕ್ಷಾಂತರ ಮಹಾನ್ ಪರ್ವದ ಬಿಸಿತಟ್ಟುವ ಸಾಧ್ಯತೆ ದಟ್ಟವಾಗಿದೆ.
ಶನಿವಾರ (ಜು 13) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮುಕುಲ್ ರಾಯ್, ನಮ್ಮ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಜನಬೆಂಬಲದ ನಂತರ, ಮೂರು ಪ್ರಮುಖ ಪಕ್ಷಗಳ 107ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆನ್ನುವ ಮುಕುಲ್ ರಾಯ್ ಹೇಳಿಕೆ, ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಮುನ್ನುಡಿ ಹಾಡಿದಂತಿದೆ.
ಪಕ್ಷಕ್ಕೆ ಸೇರಲು ಸಿದ್ದರಾಗಿರುವವರ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಆ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ರಾಯ್ ಹೇಳಿದ್ದಾರೆ.
ಕಳೆದ ಒಂದೆರಡು ತಿಂಗಳಲ್ಲಿ, ಟಿಎಂಸಿಯ ಇಬ್ಬರು ಶಾಸಕರು, 50ರಿಂದ 60 ಕೌನ್ಸಿಲರ್ ಗಳು ಮತ್ತು ಸಿಪಿಎಂನ ಓರ್ವ ಶಾಸಕ ಬಿಜೆಪಿಗೆ ಸೇರ್ಪಡೆಯಾಗಿದ್ದರು.












Click it and Unblock the Notifications