"ದೀದಿ ಸರ್ಕಾರ ಬಾಗಿಲು ಮುಚ್ಚಿಕೊಂಡು ಹೋಗುವುದು ಖಚಿತ"
ಕೋಲ್ಕತ್ತಾ, ಜನವರಿ 09: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಇಲ್ಲಿ ನಾವು ಸರ್ಕಾರ ರಚನೆ ಮಾಡುವುದು ಖಂಡಿತ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಏನಾಗಿದೆ ಮಮತಾಜೀ, ಯಾಕೆ ಭಯ ಪಡುತ್ತಿದ್ದೀರಿ? ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ" ಎಂದು ಸಿಎಂ ಮಮತಾ ಬ್ಯಾನರ್ಜಿಗೆ ಸವಾಲು ಹಾಕಿದ್ದಾರೆ.
ಶನಿವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಅವರು, "ಏಕ್ ಮುಟ್ಠೀ ಚಾವಲ್" (ಒಂದು ಮುಷ್ಠಿ ಅಕ್ಕಿ) ಅಭಿಯಾನಕ್ಕೆ ಚಾಲನೆ ನೀಡಿದರು. ಬಿಜೆಪಿ ಕಾರ್ಯಕರ್ತರು ರಾಜ್ಯದ 48 ಸಾವಿರ ಹಳ್ಳಿಗಳ, ರೈತರ ಮನೆಗೆ ಭೇಟಿ ನೀಡಿ ಅಕ್ಕಿ ಸಂಗ್ರಹಿಸಲಿದ್ದಾರೆ. ಈ ಆಂದೋಲನ ಶನಿವಾರ ಆರಂಭವಾಗಿ ಜನವರಿ 24ರವರೆಗೆ ನಡೆಯಲಿದೆ. ಸಂಗ್ರಹವಾದ ಅಕ್ಕಿಯಿಂದ ತಯಾರಿಸಿದ ಊಟವನ್ನು ರೈತ ಕುಟುಂಬಗಳೊಂದಿಗೆ ಬಡ ಜನರಿಗೂ ನೀಡಲಾಗುವುದು ಎಂದು ಹೇಳಿದರು.

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ಯುದ್ಧ ನಡೆಸಿದ ಅವರು, "ಇಲ್ಲಿನ ಜನರು ನನ್ನನ್ನು ಸ್ವಾಗತಿಸಿದ ರೀತಿ ನೋಡಿದರೆ, ಮಮತಾ ಸರ್ಕಾರ ಬಾಗಿಲು ಮುಚ್ಚಿಕೊಂಡು ಹೋಗುವುದು ಖಚಿತ ಎನಿಸುತ್ತಿದೆ. ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬರುತ್ತದೆ" ಎಂದರು.
"ತೃಣಮೂಲ ಕಾಂಗ್ರಸ್ ತನ್ನ ನೆಲೆ ಕಳೆದುಕೊಳ್ಳುತ್ತದೆ ಎಂದು ಅರಿತ ನಂತರ ಪಿಎಂ ಕಿಸಾನ್ ಯೋಜನೆಗೆ ಒಪ್ಪಿಗೆ ನೀಡಿದೆ. ಆದರೆ ಈಗಾಗಲೇ ತುಂಬಾ ತಡವಾಗಿ ಹೋಗಿದೆ" ಎಂದು ತಿರುಗೇಟು ನೀಡಿದರು.
ಕಳೆದ ಬಾರಿ ಪಶ್ಚಿಮ ಬಂಗಾಳಕ್ಕೆ ಜೆಪಿ ನಡ್ಡಾ ಭೇಟಿ ನೀಡಿದ್ದ ಸಂದರ್ಭ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿತ್ತು. ಈ ಘಟನೆಗೆ ಬಿಜೆಪಿ ಟಿಎಂಸಿಯನ್ನು ಹೊಣೆ ಮಾಡಿದ್ದು, ಇದನ್ನು ಟಿಎಂಸಿ ತಳ್ಳಿಹಾಕಿತ್ತು. ಘಟನೆ ನಂತರ ಬಿಜೆಪಿ-ತೃಣಮೂಲ ಕಾಂಗ್ರೆಸ್ ನಡುವಿನ ಜಟಾಪಟಿ ಇನ್ನಷ್ಟು ಹೆಚ್ಚಾಗಿತ್ತು.












Click it and Unblock the Notifications