ಸುವೇಂದು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮಮತಾ ಸಂಪುಟ ಸಭೆಗೆ ನಾಲ್ವರು ಸಚಿವರ ಗೈರು
ಕೋಲ್ಕತಾ, ಡಿಸೆಂಬರ್ 23: ಪಶ್ಚಿಮ ಬಂಗಾಳದ ಮಾಜಿ ಸಚಿವ ಸುವೇಂದು ಅಧಿಕಾರಿ ಅವರು ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದೊಳಗೆ ಭಾರಿ ಸಂಚಲನದ ಸೂಚನೆ ದೊರೆತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ಮಂಗಳವಾರ ರಾಜ್ಯ ಸಚಿವಾಲಯದಲ್ಲಿ ನಡೆದ ಸಂಪುಟ ಸಭೆಗೆ ನಾಲ್ವರು ಸಚಿವರು ಗೈರು ಹಾಜರಾಗಿರುವುದು ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ.
ಉತ್ತರ ಬಂಗಾಳ ಭಾಗದವರಾದ ಪ್ರವಾಸೋದ್ಯಮ ಸಚಿವ ಗೌತಮ್ ದೇವ್ ಮತ್ತು ಉತ್ತರ ಬಂಗಾಳ ಅಭಿವೃದ್ಧಿ ಸಚಿವ ರವೀಂದ್ರನಾಥ್ ಘೋಷ್ ಅವರು ಸಂಪುಟ ಸಭೆಗೆ ಗೈರಾಗಿದ್ದರು. ಇದಕ್ಕೆ ಕೋವಿಡ್ ಕಾರಣ ನೀಡಲಾಗಿದೆ. ಕೋವಿಡ್ 19 ಸೋಂಕು ಹರಡಿದ ಸಂದರ್ಭದಿಂದಲೂ ಇಬ್ಬರೂ ಸಂಪುಟ ಸಭೆಗಳಿಗೆ ಹಾಜರಾಗುತ್ತಿಲ್ಲ.
ಮೀನುಗಾರಿಕೆ ಸಚಿವ ಚಂದ್ರನಾಥ್ ಸಿನ್ಹಾ ಮತ್ತು ಅರಣ್ಯ ಸಚಿವ ರಾಜೀವ್ ಬ್ಯಾನರ್ಜಿ ಅವರ ಗೈರು ಹೆಚ್ಚು ಚರ್ಚೆಗೆ ಒಳಗಾಗಿದೆ. ರಾಜೀವ್ ಬ್ಯಾನರ್ಜಿ ವಿರುದ್ಧ ಪಕ್ಷದೊಳಗೆ ಹಿತಾಸಕ್ತಿ ಸಂಘರ್ಷದ ಅನೇಕ ಆರೋಪಗಳು ಕೇಳಿಬಂದಿದ್ದವು. ಅವರು ಟಿಎಂಸಿ ತೊರೆಯಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ.

ರಾಜೀವ್ ಬ್ಯಾನರ್ಜಿ ಅವರ ಮನವೊಲಿಸುವ ಸಲುವಾಗಿ ಪಕ್ಷದ ಅನೇಕ ಹಿರಿಯ ಮುಖಂಡರು ಕೆಲವು ವಾರಗಳ ಹಿಂದೆ ಭೇಟಿ ಮಾಡುವ ಪ್ರಯತ್ನ ನಡೆಸಿದ್ದರು. ರಾಜ್ಯ ಸಚಿವಾಲಯವು ರಾಜೀವ್ ಅವರ ಕ್ಷೇತ್ರವಾದ ಹೌರಾದಲ್ಲಿಯೇ ಇದೆ. ಸುವೇಂದು ಅಧಿಕಾರಿ ಕೂಡ ಹಲವು ತಿಂಗಳಿಂದ ಸಂಪುಟ ಸಭೆಗಳಿಗೆ ಹಾಜರಾಗುತ್ತಿರಲಿಲ್ಲ. ಕೊನೆಗೆ ಅವರು ಅಧಿಕೃತವಾಗಿ ಪಕ್ಷ ತೊರೆದರು. ಅವರ ಜತೆ ಇನ್ನೂ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ.
ಈ ನಡುವೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಪ್ರತಾಪ್ ಬ್ಯಾನರ್ಜಿ ಅವರು ಅವಹೇಳನಾಕಾರಿ ಮತ್ತು ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಯಾಂತನ್ ಬಸು ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಟಿಎಂಸಿಯ ಶಾಸಕ ಜಿತೇಂದ್ರ ತಿವಾರಿ ಅವರು ಬಿಜೆಪಿ ಸೇರುವುದನ್ನು ಪಕ್ಷದಲ್ಲಿನ ಅನೇಕರು ವಿರೋಧಿಸಿದ್ದಾರೆ ಎಂದು ವಿದ್ಯುನ್ಮಾನ ಮಾಧ್ಯಮಗಳಿಗೆ ಬಸು ಹೇಳಿಕೆ ನೀಡಿದ್ದರು. ತಿವಾರಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವುದರ ವಿರುದ್ಧ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಕೂಡ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications