ಹಿಂದೂ ದೇವತೆ ಬಗ್ಗೆ ಹೇಳಿಕೆ; ತೃಣಮೂಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ
ಕೋಲ್ಕತ್ತಾ, ಜನವರಿ 11: ಹಿಂದೂ ದೇವತೆ ಕುರಿತು ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ.
ಸೀತಾದೇವಿಯನ್ನು ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ತಂದಿರುವುದು ಸಮಾಜ ವಿರೋಧಿ ನಡೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ತೊಡಗಿದ್ದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಸೀತಾಪಹರಣ ಸಂಗತಿಯನ್ನು ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಹೋಲಿಸಿದ್ದರು. "ನಾನು ರಾವಣನಿಂದ ಅಪಹರಣಕ್ಕೆ ಒಳಗಾದೆ, ನಿಮ್ಮ ಕೇಸರಿ ಅನುಯಾಯಿಗಳಿಂದ ಅಪಹರಣವಾಗಿದ್ದರೆ ಹತ್ರಾಸ್ ಪ್ರಕರಣದಂತೆಯೇ ನನ್ನ ಹಣೆ ಬರಹವೂ ಆಗುತ್ತಿತ್ತು" ಎಂದು ಸದ್ಯದ ಪರಿಸ್ಥಿತಿಯಲ್ಲಿ ಸೀತೆ ರಾಮನಿಗೆ ಹೇಳಬೇಕಾಗಿತ್ತು ಎಂದು ಹೇಳಿಕೆ ನೀಡಿದ್ದರು.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಕೈಲಾಶ್ ವಿಜಯ್ ವರ್ಗಿಯಾ, "ತೃಣಮೂಲ ನಾಯಕರ ಈ ಹೇಳಿಕೆ ದಡ್ಡತನದ್ದು. ಸಾರ್ವಜನಿಕ ಕ್ಷೇತ್ರದಲ್ಲಿರುವ ನಾಯಕರು ಹೀಗೆ ನಿಯಂತ್ರಣ ಕಳೆದುಕೊಂಡು ಮಾತನಾಡುವುದು ಎಷ್ಟು ಸರಿ" ಎಂದಿದ್ದರು.
ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಕೂಡ ಪ್ರತಿಕ್ರಿಯಿಸಿ, "ಈ ಸಮಾಜ ವಿರೋಧಿ ಜನರು ನಾಯಕರಾದರೆ, ಮುಂದಿನ ಸ್ಥಿತಿ ಏನು. ಟಿಎಂಸಿಯವರಿಗೆ ಸಲಹೆ ನೀಡುವುದೂ ಪ್ರಯೋಜನವಿಲ್ಲ. ಜನರೇ ಉತ್ತರಿಸುತ್ತಾರೆ. ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ. 200ಕ್ಕೂ ಹೆಚ್ಚು ಸೀಟುಗಳನ್ನು ಬಿಜೆಪಿ ಪಡೆಯುತ್ತದೆ" ಎಂದಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದು, ಈ ಬಾರಿ 294 ಸೀಟುಗಳಿಗೆ ಸ್ಪರ್ಧೆ ನಡೆಯುತ್ತಿದೆ. ಬಿಜೆಪಿ, ಟಿಎಂಸಿ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ.












Click it and Unblock the Notifications