"ಗೃಹ ಸಚಿವರಿಗಿನ್ನೂ ಪಶ್ಚಿಮ ಬಂಗಾಳ ರಾಜಕೀಯದ ವಾಸ್ತವ ಅರ್ಥವಾಗಿಲ್ಲ"
ಕೋಲ್ಕತ್ತಾ, ಡಿಸೆಂಬರ್ 19: ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತೃಣಮೂಲ ಕಾಂಗ್ರೆಸ್ ಮೇಲೆ ಸರಣಿ ವಾಗ್ದಾಳಿ ನಡೆಸಿರುವ ಬೆನ್ನಲ್ಲೇ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಕುರಿತು ಅಮಿತ್ ಶಾ ಹೇಳಿಕೆಗಳಿಗೆ ಉತ್ತರಿಸಿರುವ ಕಲ್ಯಾಣ್ ಬ್ಯಾನರ್ಜಿ, "ಪಶ್ಚಿಮ ಬಂಗಾಳ ರಾಜಕೀಯ ವಾಸ್ತವವನ್ನು ಗೃಹ ಸಚಿವರು ಸರಿಯಾಗಿ ಅರ್ಥೈಸಿಕೊಂಡಂತಿಲ್ಲ. ಅಷ್ಟೇ ಅಲ್ಲ, ಮುಂದಿನ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಈ ಎಲ್ಲಾ ವಿರೋಧಗಳನ್ನು ಮೀರಿ ಮೂರನೇ ಬಾರಿಯೂ ಅಧಿಕಾರಕ್ಕೆ ಬರುವುದು ಖಚಿತ. ಆ ಆತ್ಮವಿಶ್ವಾಸವನ್ನು ಜನರು ತುಂಬಿದ್ದಾರೆ" ಎಂದಿದ್ದಾರೆ.

ಕುಟುಂಬ ಕೇಂದ್ರಿತ ರಾಜಕೀಯದ ಆರೋಪಕ್ಕೆ ಪ್ರತಿಕ್ರಿಯಿಸಿ, "ಕುಟುಂಬ ಕೇಂದ್ರಿತ ರಾಜಕೀಯದ ಬಗ್ಗೆ ಮಾತನಾಡುವ ಅಮಿತ್ ಶಾ ಅವರೇ, ನಿಮಗೆ ಮತ್ತೆ ನೆನಪಿಸುತ್ತಿದ್ದೇನೆ, ನಿಮ್ಮ ಪಕ್ಷಕ್ಕೆ ಬಂದಿರುವ ಸುವೇಂದು ಅಧಿಕಾರಿ ಕೂಡ ಪ್ರಭಾವಶಾಲಿ ರಾಜಕೀಯ ಕುಟುಂಬದಿಂದ ಬಂದವರೇ ಅಲ್ಲವೇ?, ಸ್ವತಃ ಗೃಹ ಸಚಿವರ ಮಗ ಕೂಡ ಬಿಸಿಸಿಐನ ಉನ್ನತ ಸ್ಥಾನದಲ್ಲಿರುವುದು ಯಾರ ಪ್ರಭಾವದಿಂದ?" ಎಂದು ಪ್ರಶ್ನಿಸಿದರು.
ಶನಿವಾರ ತೃಣಮೂಲ ಕಾಂಗ್ರೆಸ್ ನ ಸುವೇಂದು ಅಧಿಕಾರಿ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ಸಂಗತಿ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.












Click it and Unblock the Notifications