ಕೊತ್ತೂರು ಮಂಜುನಾಥ್, ಸುಧಾಕರ್ ಕಾಂಗ್ರೆಸ್ಸಿಗೆ: ರಾಹುಲ್ ಹಾಕಿದ ಏಕೈಕ ಷರತ್ತು?
ಕೋಲಾರ ಮತ್ತು ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಇಬ್ಬರು ಪ್ರಭಾವೀ ಮುಖಂಡರು ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.
ವೃತ್ತಿಯಲ್ಲಿ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ಮತ್ತು ಮುಳಬಾಗಿಲಿನ ಪ್ರಭಾವೀ ಮುಖಂಡ ಕೊತ್ತೂರು ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಇವರಿಬ್ಬರ ಕಾಂಗ್ರೆಸ್ ಸೇರುವಿಕೆಗೆ ಕೋಲಾರ ಭಾಗದಲ್ಲಿ ವಿಶೇಷ ಮಹತ್ವವಿದೆ. ಅದಕ್ಕೆ ಕಾರಣ ಇಲ್ಲದಿಲ್ಲಾ..
ಪರಿಷ್ಕೃತ ಪಠ್ಯ ಪುಸ್ತಕದಲ್ಲಿನ ತಿದ್ದುಪಡಿ; ಸಿದ್ದರಾಮಯ್ಯ ಗರಂ
ಇವರಿಬ್ಬರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವಾಗ ರಾಹುಲ್ ಗಾಂಧಿ ಒಂದೇ ಒಂದು ಕಂಡಿಷನ್ ಹಾಕಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅದು ಮುಂದಿನ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು..
ಕೋಲಾರ ಜಿಲ್ಲೆಯ ಕಾಂಗ್ರೆಸ್ ಘಟಕದಲ್ಲಿ ಸ್ಪಷ್ಟವಾಗಿ ಎರಡು ಬಣ ಇರುವ ವಿಚಾರ ಎಲ್ಲರಿಗೂ ಗೊತ್ತಿರುವ ವಿಚಾರ. ಒಬ್ಬರು ಇನ್ನೊಬ್ಬರನ್ನು ಸೋಲಿಸಲು ಈ ಜಿಲ್ಲೆಯ ಇಬ್ಬರು ಹಿರಿಯ ಮುಖಂಡರಿಗೆ ಬಿಜೆಪಿ ಅಥವಾ ಜೆಡಿಎಸ್ ಪಕ್ಷದ ಅವಶ್ಯಕತೆಯಿಲ್ಲ, ಅದನ್ನು ಕಾಂಗ್ರೆಸ್ ನಾಯಕರು/ಕಾರ್ಯಕರ್ತರೇ ಮಾಡುತ್ತಾರೆ.
ರಮೇಶ್ ಕುಮಾರ್ ಮತ್ತು ಕೆ.ಎಚ್.ಮುನಿಯಪ್ಪ ಎನ್ನುವ ಎರಡು ಬಣ
ಮುಳಬಾಗಿಲಿನಲ್ಲಿ ಕೊತ್ತೂರು ಮಂಜುನಾಥ್ ಯಾವ ಪಕ್ಷವನ್ನು ಬೆಂಬಲಿಸುತ್ತಾರೋ ಆ ಪಕ್ಷಕ್ಕೆ ಜಯ ಎನ್ನುವ ವಾತಾವರಣವಿದೆ. ಕೋಲಾರ ಜಿಲ್ಲೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಎನ್ನುವ ಎರಡು ಬಣಗಳಿವೆ. ಕಾಂಗ್ರೆಸ್ ಸೇರಿರುವ ಈ ಇಬ್ಬರು ನಾಯಕರು ರಮೇಶ್ ಕುಮಾರ್ ಬಣದಲ್ಲಿ ಗುರುತಿಸಿಕೊಂಡವರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮುಳಬಾಗಿಲಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಎಚ್.ನಾಗೇಶ್ ಗೆದ್ದಿದ್ದರು, ಇದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೊತ್ತೂರು ಮಂಜುನಾಥ್ ಕಾರಣರಾಗಿದ್ದರು.
ಮುನಿಯಪ್ಪ ಮತ್ತು ಕೊತ್ತೂರು ನಡುವಿನ ಮನಸ್ತಾಪ ಇನ್ನೂ ಜೀವಂತ
ಕೊತ್ತೂರು ಮಂಜುನಾಥ್ ಅವರ ಸುಳ್ಳು ಜಾತಿ ಪ್ರಮಾಣಪತ್ರದಿಂದ ಅವರ ಶಾಸಕತ್ವ ಕಾನೂನುಬಾಹಿರವಾಗಿತ್ತು, ಇದಕ್ಕೆ ಮುನಿಯಪ್ಪನವರೇ ಕಾರಣ ಎನ್ನುವ ಸಿಟ್ಟು ಕೊತ್ತೂರು ಮಂಜುನಾಥ್ ಅವರದ್ದು. ಬುಡಗ ಜಂಗಮ ಜಾತಿಗೆ ಸೇರಿದವನು ಎಂದು ಪ್ರಮಾಣಪತ್ರವನ್ನು ನೀಡಿದ್ದರು, ಅಸಲಿಗೆ ಅವರು ಹಿಂದುಳಿದ ವರ್ಗಕ್ಕೆ (ಬೈರಾಗಿ) ಸೇರಿದವರಾಗಿದ್ದರು. ಮುನಿಯಪ್ಪನವರ ಮೇಲಿನ ಸಿಟ್ಟನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಕೊತ್ತೂರು ತೀರಿಸಿಕೊಂಡರು ಎಂದು ಜಿಲ್ಲೆಯ ಜನತೆಯ ಅಭಿಪ್ರಾಯ. ಹಾಗಾಗಿ, ಮುನಿಯಪ್ಪ ಮತ್ತು ಕೊತ್ತೂರು ನಡುವಿನ ಮನಸ್ತಾಪ ಇನ್ನೂ ಜೀವಂತವಾಗಿದೆ. ಇದಕ್ಕೆ ರಾಹುಲ್ ಗಾಂಧಿ ಹುಡುಕಿದ ದಾರಿ ಇನ್ನೊಂದು..
ಡಾ.ಎಂ.ಸಿ.ಸುಧಾಕರ್ ಅವರು ಜೆಡಿಎಸ್ ಅಭ್ಯರ್ಥಿಗೆ ಉತ್ತಮ ಪೈಪೋಟಿ
ಕಳೆದ ಚುನಾವಣೆಯಲ್ಲಿ ಬಿಪಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಡಾ.ಎಂ.ಸಿ.ಸುಧಾಕರ್ ಅವರು ಜೆಡಿಎಸ್ ಅಭ್ಯರ್ಥಿಗೆ ಉತ್ತಮ ಪೈಪೋಟಿಯನ್ನು ನೀಡಿ ಸುಮಾರು ಐದು ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು. ಈಗ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನ ಮೇಲೆ ಕಣ್ಣಿಟ್ಟು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಳಬಾಗಿಲು ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ಸಿಗೆ ಮಹತ್ವದ್ದಾಗಿದೆ. ಹಾಗಾಗಿ, ಈ ಇಬ್ಬರು ನಾಯಕರಿಗೆ ಷರತ್ತೊಂದನ್ನು ವಿಧಿಸಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
|
ಕೊತ್ತೂರು ಮಂಜುನಾಥ್, ಸುಧಾಕರ್ ಕಾಂಗ್ರೆಸ್ಸಿಗೆ: ರಾಹುಲ್ ಕೊಟ್ಟ ಏಕೈಕ ಷರತ್ತು
ಮುಂದಿನ ಚುನಾವಣೆಯ ವೇಳೆಗೆ (ಅಸೆಂಬ್ಲಿ ಅಥವಾ ಲೋಕಸಭಾ) ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಯಾವುದೇ ಮನಸ್ತಾಪಗಳಿರಬಾರದು. ಎಲ್ಲರೂ ಒಂದಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು, ಕೆ.ಎಚ್.ಮುನಿಯಪ್ಪನವರ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು ಎನ್ನುವ ಷರತ್ತನ್ನು ರಾಹುಲ್ ಗಾಂಧಿ ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಮುನಿಯಪ್ಪ ಇಬ್ಬರು ನಾಯಕರ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿದ್ದರೂ, ಒಂದು ಮಾತನ್ನೂ ನನ್ನಲ್ಲಿ ಕೇಳಲಿಲ್ಲ ಎನ್ನವ ಆಕ್ರೋಶವನ್ನು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ. ಕೆಪಿಸಿಸಿ ಮಾಡಿರುವ ಟ್ವೀಟ್ ಎಲ್ಲವನ್ನೂ ಸಾರುತ್ತದೆ, ಮುಂದಿನದು ರಾಜಕೀಯ.
Recommended Video