ಸುರಕ್ಷತೆ ಬೇಕಾದರೆ ಜೆಡಿಎಸ್ ಗೆಲ್ಲಿಸಿ: ಕೋಲಾರದಲ್ಲಿ ಮಾಯಾವತಿ
ಕೋಲಾರ, ಮೇ 06: "ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕರ್ನಾಟಕದ ಜನರನ್ನು ನಿರ್ಲಕ್ಷ್ಯಿಸುತ್ತಿವೆ" ಎಂದು ಬಿಎಸ್ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
ಮೇ 12 ರಂದು ನಡೆಯಲಿರುವ ಕರ್ನಾತಕ ವಿಧಾನಸಭೆ ಚುನಾವಣೆ ನಿಮಿತ್ತ ಪ್ರಚಾರ ಆರಂಭಿಸಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ನಿನ್ನೆ(ಮೇ 06) ಕೋಲಾರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮೈಸೂರಿನಲ್ಲಿ ನಡೆಯುತ್ತಾ ಮಾಯಾವತಿ ಮ್ಯಾಜಿಕ್?
ಬಹುಜನ ಸಮಾಜವಾದಿ ಪಕ್ಷ ಈಗಾಗಲೇ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಎಸ್ಪಿ ಸಹ 20 ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದೆ.
ಈಗಾಗಲೇ ಮೈಸೂರಿನಲ್ಲಿ ಒಂದು ಹಂತದ ಪ್ರಚಾರ ಮುಗಿಸಿರುವ ಮಾಯಾವತಿ, ನಿನ್ನೆ ಕೋಲಾರದಲ್ಲೂ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
"ಕಳೆದ ಐದು ವರ್ಷದಿಂದ ಕಾಂಗ್ರೆಸ್ ಮತ್ತು ಬಿಜೆಪಿಪಕ್ಷಗಳು ಜನರನ್ನು ಕಡೆಗಣಿಸುತ್ತಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗಾಗಿ ಏನನನ್ನೂ ಮಾಡಿಲ್ಲ. ಹಾಗೆಯೇ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತ ಕಾಲಕಳೆಯುತ್ತಿದೆ" ಎಂದು ಅವರು ಹೇಳಿದರು.
"ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರವೇ ಜನರು ಸುರಕ್ಷಿತವಾಗಿರುವುದಕ್ಕೆ ಸಾಧ್ಯ. ಜೆಡಿಎಸ್ ಮಾತ್ರವೇ ದಕ್ಷ ಆಡಳಿತ ನೀಡಬಲ್ಲದು" ಎಂದ ಅವರು ಜೆಡಿಎಸ್ ಅನ್ನೇ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು.