ಚಿತ್ರಗಳು : 'ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ' ಯಾತ್ರೆ ಆರಂಭ
ಕೋಲಾರ, ಡಿಸೆಂಬರ್ 21 : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೇತೃತ್ವದ 'ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ' ಯಾತ್ರೆಗೆ ಮುಳಬಾಗಿಲಿನಲ್ಲಿ ಗುರುವಾರ ಚಾಲನೆ ಸಿಕ್ಕಿದೆ. ಈ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಎರಡು ಯಾತ್ರೆಗಳ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ 'ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ' ಯಾತ್ರೆ ಸಚಾರ ನಡೆಸಲಿದೆ. ಯಾತ್ರೆಯ ಮೊದಲ ದಿನವಾದ ಇಂದು ಕೋಲಾರ ಜಿಲ್ಲೆಯ ಕೆಜಿಎಫ್ ಮತ್ತು ಮುಳುಬಾಗಿಲಿನಲ್ಲಿ ಯಾತ್ರೆ ಸಂಚಾರ ನಡೆಸಲಿದೆ.
'ಸಿಎಂ, ಪರಮೇಶ್ವರ ಪ್ರತ್ಯೇಕ ರಾಜ್ಯ ಪ್ರವಾಸ ಅನಗತ್ಯ'
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಈ ಯಾತ್ರೆ ಸಂಚರಿಸಲಿದೆ.
ನವ ಕರ್ನಾಟಕ ನಿರ್ಮಾಣಕ್ಕಾಗಿ' ಬೀದರ್ ನಲ್ಲಿ ಸಿದ್ದರಾಮಯ್ಯ ಮಹಾರ್ಯಾಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವ ಕರ್ನಾಟಕ ನಿರ್ಮಾಣಕ್ಕಾಗಿ ವಿಕಾಸ ಯಾತ್ರೆಯನ್ನು ನಡೆಸುತ್ತಿದ್ದು, ಇಂದು ಯಾತ್ರೆ ಬೆಳಗಾವಿ ಜಿಲ್ಲೆಯಲ್ಲಿದೆ. ಸಿದ್ದರಾಮಯ್ಯ ಯಾತ್ರೆ ಸರ್ಕಾರಿ ಕಾರ್ಯಕ್ರಮವಾಗಿದೆ. ಪರಮೇಶ್ವರ ಅವರು ಪಕ್ಷದ ವತಿಯಿಂದ ಯಾತ್ರೆ ನಡೆಸುತ್ತಿದ್ದಾರೆ.
ಯಾವ-ಯಾವ ನಾಯಕರು?
ಗುರುವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಿಂದ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಈ ಯಾತ್ರೆ ಆರಂಭವಾಯಿತು.
ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ
ಮುಳುಬಾಗಿಲಿನಲ್ಲಿ ಐತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನ, ಕುರುಡು ಮನೆ ಗಣೇಶ ದೇವಾಲಯಕ್ಕೆ ಕಾಂಗ್ರೆಸ್ ನಾಯಕರು ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂತರ 'ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ' ಯಾತ್ರೆಗೆ ಚಾಲನೆ ನೀಡಲಾಯಿತು.
ಕಾರ್ಯಕರ್ತರಿಂದ ಬೈಕ್ ಜಾಥಾ
ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಾಂಗ್ರೆಸ್ ನಾಯಕರು ಬೈಕ್ ಜಾಥಾ ಮೂಲಕ ಮುಳುಬಾಗಿಲಿನಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ತೆರಳಿದರು. ಸಾವಿರಾರು ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಎರಡು ಸಮಾವೇಶಗಳು
'ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ' ಯಾತ್ರೆ ಕೋಲಾರ ಜಿಲ್ಲೆಯಿಂದ ಆರಂಭವಾಗುತ್ತಿದೆ. ಕೆಜಿಎಫ್ ಮತ್ತು ಮುಳುಬಾಗಿಲಿನಲ್ಲಿ ಇಂದು ಎರಡು ಸಮಾವೇಶಗಳು ನಡೆಯಲಿವೆ.
ಯಾತ್ರೆ ಎಲ್ಲಿ-ಎಲ್ಲಿ ಸಾಗಲಿದೆ?
ಕೋಲಾರ ಜಿಲ್ಲೆಯಲ್ಲಿ ಗುರುವಾರ ಯಾತ್ರೆಗೆ ಚಾಲನೆ ಸಿಕ್ಕಿದೆ. ಡಿಸೆಂಬರ್ 30ರ ತನಕ ಮೊದಲ ಹಂತದ ಯಾತ್ರೆ ನಡೆಯಲಿದೆ. ಪಕ್ಷದ ನಾಯಕರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರಲ್ಲಿ ಮೊದಲ ಹಂತದ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.