ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ: ಮೊದಲಿದ್ದವರು ಚಿಂತಿಸಬೇಕಿತ್ತೆಂದ ಸಚಿವ ಹೆಬ್ಬಾರ್
ಕಾರವಾರ, ಆಗಸ್ಟ್ 25: "ಉತ್ತರ ಕನ್ನಡದಲ್ಲಿ ಈವರೆಗೆ ಸುಸಜ್ಜಿತ ಆಸ್ಪತ್ರೆಗಳಿಲ್ಲ ಎನ್ನುವ ಕೊರತೆ ಕೇವಲ ನಮ್ಮ ಒಂದು ವರ್ಷದ ಅಧಿಕಾರದ ಅವಧಿಯಲ್ಲಿ ಇರುವುದಲ್ಲ. ಬಹಳ ಕಾಲದಿಂದ ಆಡಳಿತ ನಡೆಸಿದವರು ಇದರ ಬಗ್ಗೆ ಯೋಚಿಸಬೇಕಿತ್ತು, ಗಂಭೀರವಾಗಿ ಚಿಂತನೆ ನಡೆಸಬೇಕಿತ್ತು," ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
"ಈ ಹಿಂದೆ ಇದ್ದ ಸರ್ಕಾರಗಳು ಮಾಡಲಿಲ್ಲ. ಹೀಗಾಗಿ ನಮ್ಮ ಸರ್ಕಾರ ಬಂದಮೇಲೆ ಈ ಕುರಿತು ಪ್ರಯತ್ನ ಸಾಗಿದೆ. ಏನು ಮಾಡಬೇಕೆಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ," ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
'ಒನ್ ಇಂಡಿಯಾ ಕನ್ನಡ'ದ ಜೊತೆಗಿನ ಫೇಸ್ಬುಕ್ ಸಂವಾದದಲ್ಲಿ ಮಾತನಾಡಿದ ಸಚಿವ ಹೆಬ್ಬಾರ್, "ಉತ್ತರ ಕನ್ನಡ ಜಿಲ್ಲೆಯಲ್ಲಿ 1961ರ ನಂತರ ಮೊಟ್ಟ ಮೊದಲ ಬಾರಿಗೆ ಅತಿದೊಡ್ಡ ಪ್ರವಾಹಕ್ಕೆ ಈ ಬಾರಿ ಒಳಗಾಯಿತು. ಒಂದು ಅಂದಾಜಿನ ಪ್ರಕಾರ 810 ಕೋಟಿಯಷ್ಟು ದೊಡ್ಡ ಮೊತ್ತದ ಹಾನಿಯಾಗಿದೆ ಎಂದು ಅಧಿಕಾರಿಗಳ ತಂಡ ಈಗಾಗಲೇ ವರದಿ ನೀಡಿದೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ಕೇವಲ 16 ಗಂಟೆಯೊಳಗೆ ಅವರನ್ನು ಕರೆದುಕೊಂಡು ಜಿಲ್ಲಾ ಪ್ರವಾಸ ಮಾಡುವಲ್ಲಿ ಯಶಸ್ಸು ಕಂಡಿದ್ದು, 210 ಕೋಟಿಯನ್ನೂ ಅವರು ಸ್ಥಳದಲ್ಲೇ ಬಿಡುಗಡೆ ಮಾಡಿ ಪರಿಹಾರ ಕಾರ್ಯಗಳಿಗೆ ಸಾಕಷ್ಟು ವೇಗ ನೀಡಿದ್ದಾರೆ," ಎಂದರು.

ಜನರು ಸ್ಪಂದಿಸಿದರೆ ಸ್ಥಳಾಂತರ ನಿಶ್ಚಿತ
"ನದಿಪಾತ್ರದ ಜನರನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವುದು ಕಷ್ಟದಾಯಕ. ಉತ್ತರ ಕನ್ನಡ ಶೇ.70ರಷ್ಟು ಅರಣ್ಯದಿಂದ ಕೂಡಿರುವ ಜಿಲ್ಲೆ. ಇಲ್ಲಿ ಅರಣ್ಯ ಹೊರತಾದ ಪ್ರದೇಶಗಳು ಸಿಗುವುದೇ ಬಹಳ ಕಷ್ಟ. ಒಂದು ಕಡೆ ವಸತಿವಾರು ಇದ್ದವರನ್ನು ಸ್ಥಳಾಂತರಿಸಲು ಅವರು ಆ ಸಂದರ್ಭದಲ್ಲಿ ಒಪ್ಪಿಕೊಂಡರೂ ನಂತರ ಒಲ್ಲೆ ಎನ್ನುತ್ತಾರೆ. ಇನ್ನೊಂದು ಕಡೆ ತಮ್ಮೆಲ್ಲ ಜಾಗ, ಜಮೀನುಗಳನ್ನು ಬಿಟ್ಟು ಎಲ್ಲೋ ಮನೆ ಕಟ್ಟಿಕೊಂಡು ಉಳಿದುಕೊಳ್ಳಲು ರೈತಾಪಿ ಜನರಿಗೂ ಕಷ್ಟ. ಆದರೆ ಮೂರ್ನಾಲ್ಕು ಕಡೆಗಳಲ್ಲಿ ಪ್ರತಿವರ್ಷ ಪ್ರವಾಹ ಉಂಟಾಗುತ್ತಿರುವ ಕಾರಣ ತಾವು ಬೇರೆ ಕಡೆ ಹೋಗುತ್ತೇವೆ ಎಂದು ಅಲ್ಲಿನ ಜನ ಹೇಳಿದ್ದಾರೆ."
"ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಿದ್ದು, ಯಾರ್ಯಾರು ಹೋಗಲು ತಯಾರಿದ್ದಾರೋ, ಅವರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ವರದಾ ನದಿಯಿಂದ ಮುಳುಗಡೆಯಾಗುವ ಮುಂಡಗೋಡ ತಾಲೂಕಿನ ಭಾಶಿ ಪಂಚಾಯತಿಯ ಮೊಗಳ್ಳಿ, ಗಂಗಾವಳಿ ನದಿಯಿಂದ ಅಂಕೋಲಾ ತಾಲೂಕಿನ ಬೆಳಸೆ, ಕಾಳಿ ನದಿಯಿಂದಾಗಿ ಮಲ್ಲಾಪುರ ಮತ್ತು ಕದ್ರಾ ಪ್ರದೇಶದಲ್ಲಾಗುವ ಅನಾಹುತಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸೂಚನೆ ನೀಡಿದ್ದೇನೆ. ಜನರು ಸ್ಪಂದಿಸಲು ಸಿದ್ಧರಾದರೆ ನಿಶ್ಚಿತವಾಗಿ ಸರ್ಕಾರ ಈ ಕೆಲಸ ಮಾಡುತ್ತದೆ," ಎಂದರು.

ಮೂರನೇ ಅಲೆ ಯಶಸ್ವಿಯಾಗಿ ಎದುರಿಸುತ್ತೇವೆ
"ಕೊರೊನಾ ಮೂರನೇ ಅಲೆಗೆ ಉತ್ತರ ಕನ್ನಡದಲ್ಲಿ ಎಲ್ಲಾ ಸಿದ್ಧತೆಯಾಗಿದೆ. ಮೊದಲ ಮತ್ತು 2ನೇ ಅಲೆಯಲ್ಲಿದ್ದ ಪರಿಸ್ಥಿತಿ ಈಗ ಇಲ್ಲ. ಎಲ್ಲಾ ಆಸ್ಪತ್ರೆಗಳು ಬೇಕಾದ ತಯಾರಿಯಲ್ಲಿದೆ. ಯಾವುದೇ ಆಕ್ಸಿಜನ್ ಪ್ಲಾಂಟ್ ಇಲ್ಲದ ಸಮಯದಲ್ಲಿ ಕೋವಿಡ್ ಅನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದ್ದೇವೆ. ಇವತ್ತು ಆಕ್ಸಿಜನ್ ಪ್ಲಾಂಟ್ಗಳು ಕೂಡ ನಿರ್ಮಾಣವಾಗಿದೆ. ಕೇವಲ 10- 12 ಅಂಬ್ಯುಲೆನ್ಸ್ಗಳು ಇದ್ದ ಕಾಲದಲ್ಲಿ ಕೋವಿಡ್ ಎದುರಿಸಿದ್ದೇವೆ. ಈಗ 25 ಹೊಸ ಅಂಬ್ಯುಲೆನ್ಸ್ಗಳನ್ನು ಜಿಲ್ಲೆಗೆ ಖರೀದಿ ಮಾಡಿದ್ದೇವೆ."
"ಎಲ್ಲಾ ಅತ್ಯಾಧುನಿಕ ಬೆಡ್ಗಳನ್ನು ಖರೀದಿ ಮಾಡಿ, ಪ್ರತಿ ಆಸ್ಪತ್ರೆಗೆ 25- 50 ಆಕ್ಸಿಜನ್ ಸಹಿತ ಬೆಡ್ಗಳು ಸಿದ್ಧವಿದೆ. ಮಕ್ಕಳಿಗಾಗಿಯೇ 150 ಬೆಡ್ಗಳನ್ನು ತಯಾರಿಟ್ಟಿದ್ದೇವೆ. ಕೋವಿಡ್ ಒಂದು ಮತ್ತು ಎರಡನೇ ಅಲೆಯಲ್ಲಿ ಅನುಭವದ ಕೊರತೆ ಇತ್ತು. ಆದರೆ ಮೂರನೇ ಅಲೆಯಲ್ಲಿ ಅನುಭವದ ಕೊರತೆ ಇಲ್ಲ. ಜಿಲ್ಲೆಗೆ 65ಕ್ಕಿಂತ ಹೆಚ್ಚು ವೈದ್ಯರುಗಳನ್ನು ನೇಮಕ ಮಾಡಲಾಗಿದೆ. ಮೂರನೇ ಅಲೆ ಬಂದರೆ ಯಶಸ್ವಿಯಾಗಿ ಎದುರಿಸುತ್ತೇವೆ," ಎಂದರು.
ಇನ್ನು ಪುತ್ರ ವಿವೇಕ ಹೆಬ್ಬಾರ್ ಅವರನ್ನು ಮುಂಬರುವ ಚುನಾವಣೆಗಳಲ್ಲಿ ನಿಲ್ಲಿಸುವ ಯೋಚನೆ ಇದೆಯೇ ಎಂಬ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ನನ್ನ ಚುನಾವಣೆಯಲ್ಲಿ ಪ್ರಚಾರ ಮಾಡಿಕೊಳ್ಳಲು ಮಾತ್ರ ಅವನನ್ನು ಸೀಮಿತ ಮಾಡಿಕೊಂಡಿದ್ದೇನೆ," ಎಂದರು.
ಡ್ರೈವರ್ ಆಗಿ ಐದು ರಾಜ್ಯ ಸುತ್ತಾಡಿದ್ದೇನೆ
"ಸಾರ್ವಜನಿಕ ಜೀವನಕ್ಕೆ ಬರುವುದಕ್ಕೂ ಪೂರ್ವದಲ್ಲಿ ಜೀವನದ ಯಶೋಗಾಥೆ ಎಲ್ಲದಕ್ಕಿಂತಲೂ ದೊಡ್ಡದು. ಅದನ್ನು ಯೋಚನೆ ಮಾಡಿಯೇ ಬಹುಶಃ ಮುಖ್ಯಮಂತ್ರಿಯವರು ನನಗೆ ಕಾರ್ಮಿಕ ಖಾತೆ ಕೊಟ್ಟಿದ್ದಾರೆಯೇನೋ ಅಂದುಕೊಂಡಿದ್ದೇನೆ. ನಾನೊಬ್ಬ ಡ್ರೈವರ್, ಕ್ಲೀನರ್ ಆಗಿ ಕರ್ನಾಟಕ, ಗೋವಾ, ಆಂಧ್ರ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಟ್ರಕ್ ನಡೆಸುವ ವೃತ್ತಿ ಮಾಡಿ, ಹಂತ ಹಂತವಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಬಂದು ಈಗ ಈ ಹಂತಕ್ಕೆ ಬಂದು ತಲುಪಿದ್ದೇನೆ. ಆ ಕಾರಣಕ್ಕಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ," ಎಂದು ಸಚಿವ ಶಿವರಾಮ ಹೆಬ್ಬಾರ್ ತಮ್ಮ ಜೀವನಗಾಥೆ ಹೇಳಿದರು.












Click it and Unblock the Notifications