ಅಪಾಯ ಮಟ್ಟ ತಲುಪಿದ ವರದೆ: 400 ಎಕರೆ ಕೃಷಿ ಭೂಮಿ ಮುಳುಗಡೆ
ಕಾರವಾರ, ಜುಲೈ.17: ಶಿರಸಿಯ ಬನವಾಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜೀವನದಿ ವರದೆಯಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟ ತಲುಪಿದೆ. ಇದರಿಂದಾಗಿ ನದಿ ತಟದ 400 ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಡೆಯಾಗಿದೆ.
ಶಿರಸಿ, ಬನವಾಸಿ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ವರದಾ ನದಿ ಉಕ್ಕಿ ಹರಿದಿದೆ. ಪರಿಣಾಮ ಅಜ್ಜರಣಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಉಪವಿಭಾಗಾಧಿಕಾರಿ ರಾಜು ಮೊಗವೀರ ಪ್ರವಾಹ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬರಗಾಲ ಎದುರಿಸುತ್ತಿದ್ದ ಬನವಾಸಿಗರು ಈ ಬಾರಿ ಪ್ರವಾಹದ ಸೆಲೆಗೆ ಸಿಲುಕಿದ್ದಾರೆ. ಮಳೆ ಇನ್ನಷ್ಟು ಸುರಿದರೆ ಮತ್ತಷ್ಟು ಕೃಷಿ ಭೂಮಿ ಜಲಾವೃತವಾಗುವ ಆತಂಕ ಎದುರಾಗಿದೆ.

ವರದಾ ನದಿ ತುಂಬಿ ಹರಿಯಲು ಶಿರಸಿ, ಬನವಾಸಿಯ ಭಾಗದಲ್ಲೇ ಮಳೆಯಾಗಬೇಕಂತೇನಿಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದಂತೆ ವರದಾ ನದಿಗೆ ನೀರಿನ ಹರಿವು ಜಾಸ್ತಿಯಾಗುತ್ತದೆ.
ಈ ಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿರುವುದರಿಂದ ಸಹಜವಾಗಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರ ಪರಿಣಾಮ ಕೃಷಿ ಭೂಮಿಗೆ ನೀರು ಆವರಿಸತೊಡಗಿದೆ.

ಬಸ್ ನಿಲ್ದಾಣ ಕುಸಿತ
ಮಳೆಯಿಂದಾಗಿ ಭಟ್ಕಳದ ಬಸ್ ನಿಲ್ದಾಣ ಭಾಗಶಃ ಕುಸಿದು ಬಿದ್ದಿದೆ. 42 ವರ್ಷಗಳಷ್ಟು ಹಳೆಯದಾಗಿದ್ದ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿತ್ತು. ಭಾನುವಾರ ರಾತ್ರಿ ಸುರಿದ ಮಳೆಗೆ ಕಟ್ಟಡದ ಗೋಡೆಗಳು ಮತ್ತಷ್ಟು ನೀರು ಹೀರಿಕೊಂಡು ಸೋಮವಾರ ಕುಸಿಯಿತು. ಕಟ್ಟಡದಲ್ಲಿರುವ ಅಂಗಡಿಗಳನ್ನು ಮೊದಲೇ ತೆರವು ಮಾಡಲಾಗಿತ್ತು.












Click it and Unblock the Notifications