ಗೆದ್ದ ಬಳಿಕ ಮುಖ ಹಾಕದ ಶಾಸಕಿ: ಪ್ರಚಾರಕ್ಕೆ ಬಂದ ಬಿಜೆಪಿ ಬೆಂಬಲಿಗರಿಗೆ ಗ್ರಾಮಸ್ಥರ ತರಾಟೆ!
ಕಾರವಾರ, ಏಪ್ರಿಲ್ 28: ಶಾಸಕಿಯಾದ ಬಳಿಕ ಒಮ್ಮೆಯೂ ಗ್ರಾಮಕ್ಕೆ ಬಾರದ ಮತ್ತು ಸಮಸ್ಯೆ ಆಲಿಸದ ರೂಪಾಲಿ ನಾಯ್ಕ ವಿರುದ್ಧ ಸ್ಥಳೀಯರು ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ಮುಖಂಡರ ಬಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಮಾಜಾಳಿಯ ಬಾವಳದಲ್ಲಿ ನಡೆದಿದೆ.
ಗ್ರಾಮಕ್ಕೆ ಬಿಜೆಪಿ ಮುಖಂಡ ಉಡುಪಿ ಜಿಲ್ಲೆಯ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರುಗಳು ಬಿಜೆಪಿ ಅಭ್ಯರ್ಥಿ ಶಾಸಕಿ ರೂಪಾಲಿ ನಾಯ್ಕ ಪರ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಆದರೆ ಶಾಸಕಿ ರೂಪಾಲಿ ನಾಯ್ಕ ತೆರಳಿರಲಿಲ್ಲ. ಇದನ್ನು ಪ್ರಶ್ನಿಸಿದ ಸ್ಥಳೀಯರು ಬಿಜೆಪಿ ಮುಖಂಡರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕಿ ರೂಪಾಲಿ ನಾಯ್ಕ 2018ರ ಚುನಾವಣೆಯಲ್ಲಿ ಮತಯಾಚನೆಗೆ ಬಂದಿದ್ದವರು ಮತ್ತೆ ಮುಖ ತೋರಿಸಿಲ್ಲ. ಸ್ಥಳೀಯವಾಗಿ ಯಾವುದೇ ಅಭಿವೃದ್ಧಿ ಮಾಡದೇ ಈಗ ಮತ ಯಾಚನೆಗೆ ಬಂದಿದ್ದೀರಾ. ಬೇರೆ ಜಿಲ್ಲೆಯ ನಾಯಕರು ಇಲ್ಲಿನವರ ಪರ ಬಂದು ಪ್ರಚಾರ ಮಾಡುವುದೇನಿದೆ? ಶಾಸಕಿಯೇ ಸ್ಥಳಕ್ಕೆ ಬಂದು ಗ್ರಾಮಸ್ಥರ ಸಮಸ್ಯೆ ಕೇಳಲಿ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಬಳಿಕ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಆಕ್ರೋಶಗೊಂಡ ಸ್ಥಳೀಯರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರಾದರೂ ಕೆಲ ಮಂದಿ ಸಭೆಗೆ ತೆರಳದೇ ವೇದಿಕೆ ಹೊರಗೆ ನಿಂತು ಭಾಷಣ ಕೇಳಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಿಂದ ಶಾಸಕಿ ರೂಪಾಲಿ ನಾಯ್ಕ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಆರಿಸಿ ತರಬೇಕು. ಅಲ್ಲದೆ ಆರೋಗ್ಯ, ಕ್ರೀಡೆ, ಆಸ್ಪತ್ರೆಯನ್ನು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಯಾರಿಗಾದರೂ ಸಮಸ್ಯೆಯಾಗಿದ್ದರೇ ಇಲ್ಲಿ ಹೇಳಿದ್ದರೇ ಸಮಸ್ಯೆ ಬಗೆಹರಿಯುವುದಿಲ್ಲ. ಮನವಿ ನೀಡಿ ಅದನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಲೂಟಿ ಮಾಡಿ ಸಾಮ್ರಾಜ್ಯ ಕಟ್ಟುವ ಬದಲು ಮೀನಿಗೆ ಗಾಳ ಹಾಕುವುದೇ ಒಳ್ಳೆಯ ವೃತ್ತಿ:ಪ್ರಮೋದ್ ಮದ್ವರಾಜ್
ಕಾರವಾರ: ಲೂಟಿ ಮಾಡಿ ದುಡ್ಡು ಸಂಪಾದಿಸಿ ಸಾಮ್ರಾಜ್ಯ ಕಟ್ಟುವ ಬದಲಿಗೆ ಪ್ರಾಮಾಣಿಕವಾಗಿ ಮೀನಿಗೆ ಗಾಳ ಹಾಕಿಕೊಂಡು ಇರುವುದು ಉತ್ತಮ ವೃತ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.

ಪ್ರಮೋದ್ ಮಧ್ವರಾಜ್ ಅವರು ಅಧಿಕಾರ ಸಿಗುವ ನಿರೀಕ್ಷೆಯಲ್ಲಿ ಬಿಜೆಪಿ ಸೇರಿದ್ದರು. ಆದರೆ ಬಿಜೆಪಿಯಲ್ಲಿ ಅವರಿಗೆ ಯಾವುದೇ ಅಧಿಕಾರ ನೀಡಿಲ್ಲ. ಹೀಗಾಗಿ ಅವರು ಮೀನಿಗೆ ಗಾಳ ಹಾಕಿ ಕೂರಬೇಕಾಗಿದೆ ಎಂದು ಇತ್ತೀಚಿಗೆ ಡಿ.ಕೆ.ಶಿವಕುಮಾರ್ ಉಡುಪಿಯಲ್ಲಿ ಹೇಳಿಕೆ ನೀಡಿದ್ದರು. ಈ ಕುರಿತು ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಪ್ರಮೋದ್ ಮಧ್ವರಾಜ್, ಗಾಳ ಹಾಕಿ ಮೀನು ಹಿಡಿಯುವುದು ಒಂದು ಕಾಯಕ. ಇದು ಸಾವಿರಾರು ವರ್ಷಗಳಿಂದ ಮೀನುಗಾರರು ಮಾಡಿಕೊಂಡು ಬಂದಿದ್ದಾರೆ. ಆ ಮೂಲಕವೇ ಪ್ರಾಮಾಣಿಕವಾಗಿ ಜೀವನ ಮಾಡುತ್ತಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಎಲ್ಲಿಂದ ಎಲ್ಲಿಗೆ ಬಂದಿದ್ದಾರೆ ಎನ್ನುವುದನ್ನು ನೋಡಬೇಕಿದೆ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ 1989ರಲ್ಲಿ ಮೊದಲ ಬಾರಿಗೆ ಶಾಸಕರಿದ್ದಾಗ ನನ್ನ ಸ್ನೇಹಿತರಾಗಿದ್ದರು. ನಮ್ಮ ತಾಯಿ ಮಂತ್ರಿಯಾಗಿದ್ದ ವೇಳೆ ನಮ್ಮ ಮನೆಗೆ ಡಿಕೆಶಿ ಬರುತ್ತಿದ್ದರು. ಆಗ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು, ಇವತ್ತು ಹೇಗಿದೆ ಎನ್ನುವುದನ್ನು ಗಮನಿಸಬೇಕು. ಪ್ರಾಯಶಃ ಲೂಟಿ ಮಾಡಿ ದುಡ್ಡು ಮಾಡಿ ಸಾಮ್ರಾಜ್ಯ ಕಟ್ಟುವ ಬದಲಿಗೆ ಪ್ರಾಮಾಣಿಕವಾಗಿ ಮೀನಿಗೆ ಗಾಳ ಹಾಕಿ ಹಿಡಿದು ಜೀವನ ನಡೆಸುವುದೇ ಉತ್ತಮವಾದ ವೃತ್ತಿ ಎಂದಿದ್ದಾರೆ.
ಸುವರ್ಣ ತ್ರಿಭುಜ ಅವಘಡದ ಕುರಿತು ಪ್ರತಿಕ್ರಿಯಿಸಿದ ಅವರು, ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ಏಳು ಮಂದಿ ಮೀನುಗಾರರು ಮೃತಪಟ್ಟಿದ್ದರು. ನಾನು ಮೀನುಗಾರಿಕಾ ಇಲಾಖೆಯ ಮಂತ್ರಿಯಾಗುವ ಮುನ್ನ ಮೀನುಗಾರರು ಹೀಗೆ ಅವಘಡದಲ್ಲಿ ಮೃತಪಟ್ಟರೆ ಪರಿಹಾರ 2 ಲಕ್ಷ ರೂ. ಇತ್ತು. ಅದನ್ನು ನಾನು ಮಂತ್ರಿಯಾದ ಬಳಿಕ 6 ಲಕ್ಷಕ್ಕೆ ಏರಿಸಿದ್ದೆ. ಸುವರ್ಣ ತ್ರಿಭುಜ ಅವಘಡದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸಮ್ಮಿಶ್ರ ಸಕಾರ ಇತ್ತು. ನಾನು ಪ್ರಯತ್ನಪಟ್ಟು ತಲಾ 11 ಲಕ್ಷ ಕೊಡಿಸಿದ್ದೆ. ಅದಾದ ಬಳಿಕ ಬಿಜೆಪಿ ಸರ್ಕಾರ ಬಂದ ನಂತರ ಮತ್ತೆ ತಲಾ 10 ಲಕ್ಷ ನೀಡಲಾಗಿದೆ. ಬೋಟ್ ಹುಡುಕಲು ನೌಕಾಪಡೆಯಿಂದ ಕಾರ್ಯಾಚರಣೆ ನಡೆಸಿ, ಬೋಟ್ ಮಾಲೀಕರಿಗೆ ಇನ್ಶೂರೆನ್ಸ್ ಹಣವೂ ಬರುವಂತೆ ಮಾಡಿದ್ದೇವೆ. ಮೃತ ಕುಟುಂಬಸ್ಥರಿಗೆ ತಲಾ 21 ಲಕ್ಷ ಪರಿಹಾರ ಕೊಡಿಸಲಾಗಿದೆ ಎಂದರು.
ಅಂದು ಘಟನೆ ನಡೆದ ಸಂದರ್ಭದಲ್ಲಿ ನಾನು ಕೂಡ ಈ ಘಟನೆಯ ತನಿಖೆಗೆ ಒತ್ತಾಯಿಸಿದ್ದೆ. ಆದರೆ ತದನಂತರದಲ್ಲಿ ಮೃತ ಮೀನುಗಾರರ ಕುಟುಂಬಸ್ಥರು ಹಾಗೂ ಮೀನುಗಾರರು ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಲ್ಲ. ಹೀಗಾಗಿ ಘಟನೆ ನಡೆದು ವರ್ಷಗಳೇ ಆದರೂ ಪರಿಹಾರ ಕೊಡುವ ಕೆಲಸವಾಗಿದೆ. ಆದರೆ ಘಟನೆಗೆ ಕಾರಣ ಇನ್ನೂ ನಿಗೂಢವಾಗಿದೆ. ಬೋಟ್ ಗುರುತಿಸಲಾಗಿದೆ. ಘಟನೆಯ ಹಿನ್ನೆಲೆ ತಿಳಿದುಬಂದಿಲ್ಲ. ಪ್ರಾಯಶಃ ಯಾವುದೇ ಅವಘಡದಲ್ಲಿ ಆಗಿರಬಹುದು. ಯಾರು ಕೂಡ ಹತ್ಯೆ ನಡೆಸಿರುವ ಘಟನೆ ಇದಲ್ಲ ಎಂದರು.
ನೌಕಾಪಡೆಯವರು ಆಗಾಗ ಮೀನುಗಾರರ ಮೇಲೆ ಹಲ್ಲೆ ನಡೆಸುತ್ತಿದ್ದಾರೆಂಬ ಕುರಿತು ಮಾತನಾಡಿದ ಅವರು, ನಮಗೆ ದೇಶದ ಭದ್ರೆತೆಗ ನೌಕಾನೆಲೆಯೂ ಮಹತ್ವ, ಮೀನುಗಾರರು ಕೂಡ ಅಷ್ಟೇ ಮಹತ್ವ. ಎರಡನ್ನೂ ಸಮತೋಲನದಲ್ಲಿ ಕಾಣಬೇಕಿದೆ. ಹೀಗಾಗಿ ಈ ಬಗ್ಗೆ ಒಮ್ಮೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ಮಾಡುತ್ತೇವೆ. ಚುನಾವಣೆಯಾದ ಬಳಿಕ ನಾನೇ ಖುದ್ದಾಗಿ ಶಾಸಕಿಯೊಂದಿಗೂ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.












Click it and Unblock the Notifications