ಉತ್ತರಕನ್ನಡ; ವರ್ಷದಲ್ಲಿ 6 ಸಾವಿಕ್ಕೂ ಹೆಚ್ಚು ಜನರಿಗೆ ಕಚ್ಚಿದ ಬೀದಿ ನಾಯಿಗಳು
ಕಾರವಾರ, ಸೆಪ್ಟೆಂಬರ್, 30: ಉತ್ತರಕನ್ನಡ ಜಿಲ್ಲೆಯಲ್ಲಿ ಬೀದಿ ನಾಯಿಗಳ ಕಾಟದಿಂದ ಜನರು ಬೇಸತ್ತಿದ್ದಾರೆ. ಕೆಲ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿಯೇ ಇರುವ ನಾಯಿಗಳು ದಾರಿಹೋಕರ ಮೇಲೆ ದಿಢೀರ್ ದಾಳಿ ಮಾಡುತ್ತಿವೆ. ಕಳೆದ ಒಂದು ವರ್ಷದಲ್ಲಿ ಬರೊಬ್ಬರಿ 6 ಸಾವಿರಕ್ಕೂ ಹೆಚ್ಚು ಮಂದಿಗೆ ನಾಯಿಗಳು ಕಚ್ಚಿದ್ದು, ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿದೆ.
ನಗರ ಪ್ರದೇಶಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೋಟೆಲ್, ಅಂಗಡಿ ಮುಂಗಟ್ಟುಗಳ ಮುಂದೆ ಇರುವ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರ ಮೇಲೆ, ದಾರಿಹೋಕರ ಮೇಲೆ ದಾಳಿ ಮಾಡುತ್ತಿವೆ. ಕಾರವಾರದಲ್ಲಿ ಇಂತಹ ಪ್ರಕರಣದಿಂದಾಗಿ ಬೈಕ್ನಿಂದ ಬಿದ್ದು ಅದೇಷ್ಟೋ ಜನರು ಪ್ರಾಣವನ್ನೇ ಕಳೆದಕ್ಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಆಶ್ರಮ ರಸ್ತೆ, ನಂದನಗದ್ದಾ, ಮೀನು ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಎಲ್ಲೆಡೆಯೂ ನಾಯಿಗಳು ರಾಜಾರೋಷವಾಗಿ ದಾಳಿ ಮಾಡುತ್ತಿವೆ.
ಇನ್ನು ಇತ್ತೀಚೆಗೆ ಭಟ್ಕಳ ಪಟ್ಟಣದಲ್ಲಿ ಒಂದೇ ದಿನ ಇಬ್ಬರು ಮಕ್ಕಳು ಸೇರಿ 7 ಜನರ ಮೇಲೆ ನಾಯಿಗಳು ದಾಳಿ ನಡೆಸಿದ್ದವು. ಪಟ್ಟಣದ ನವಾಯತ್ ಕಾಲೋನಿ, ಹನುಮಾನ್ ನಗರ, ಮೂಡಭಟ್ಕಳ, ತಾಲೂಕಿನ ಸೋಡಿಗದ್ದೆ, ಡೊಂಗರಪಲ್ಲಿ, ಗೊರಟೆ ಗ್ರಾಮದಲ್ಲಿ ನಾಯಿಗಳು ದಾಳಿ ನಡೆಸಿದ್ದವು. ಬಳಿಕ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.
ಬೀದಿನಾಯಿಗಳ ಹಾವಳಿಯಿಂದ ಜನರು ತತ್ತರ
ನಾಯಿಗಳ ನಿರಂತರ ದಾಳಿಯಿಂದಾಗಿ ಜನರು ರಸ್ತೆಯಲ್ಲಿ ಓಡಾಡುವುದಕ್ಕೆ ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ರಸ್ತೆಯ ಅಲ್ಲಲ್ಲಿ ಗುಂಪು ಗುಂಪಾಗಿ ಕಂಡು ಬರುವ ಬೀದಿ ನಾಯಿಗಳು ಯಾವಾಗ ಮೈಮೇಲೆ ಎರಗುತ್ತವೆಯೋ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಆರೋಗ್ಯ ಇಲಾಖೆ ಅಂಕಿ ಅಂಶದ ಪ್ರಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 6,500ಕ್ಕೂ ಅಧಿಕ ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವುದು ದಾಖಲಾಗಿದೆ.
ನಾಯಿ ಕಡಿತಕ್ಕೊಳಗಾದವರಿಗೆ ಚಿಕಿತ್ಸೆ
ಸದ್ಯ ನಾಯಿಗಳ ಕಾಟ ಹೆಚ್ಚಾದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪಶು ವೈದ್ಯರು ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮಕ್ಕೆ ಮುಂದಾಗಿದ್ದಾರೆ. ನಾಯಿ ಕಡಿತಕ್ಕೊಳಗಾದವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಅಲ್ಲದೇ ಆರೋಗ್ಯ ಇಲಾಖೆಯಿಂದ ರೇಬಿಸ್ ವ್ಯಾಕ್ಸಿನ್ಗಳನ್ನು ಸಂಗ್ರಹಿಸಿ ಇಡಲಾಗಿದ್ದು, ಮುಂಜಾಗ್ರತಾ ಡೋಸ್ಗಳನ್ನು ಸಹ ಅಗತ್ಯವಿರುವ ಕಡೆ ಪೂರೈಕೆ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪ್ರಮುಖವಾಗಿ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಕೈಗೊಳ್ಳಲು ಸೂಚಿಸಲಾಗಿದೆ. ಪ್ರಾಣಿದಯಾ ಸಂಘಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್ ಮಾಹಿತಿ ನೀಡಿದ್ದಾರೆ.
ನಾಯಿಗಳ ಸಂತತಿ ಕಡಿಮೆ ಮಾಡಲು ಪ್ಲಾನ್
ಬೀದಿ ನಾಯಿಗಳ ನಿಯಂತ್ರಣದ ಜೊತೆಗೆ ಶಾಲೆಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬೀದಿ ನಾಯಿಗಳಿಂದ ಯಾವ ರೀತಿ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು ಎನ್ನುವ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಮಿಷನ್ ರೇಬಿಸ್ ಎನ್ನುವ ಖಾಸಗಿ ಸಂಸ್ಥೆ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಇದರೊಂದಿಗೆ ಬೀದಿನಾಯಿಗಳ ಸಂತತಿಯನ್ನು ಸಹ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಾಣಿಪ್ರಿಯರ ಅಭಿಪ್ರಾಯಗಳು ಏನು?
ಬೀದಿ ನಾಯಿಗಳ ನಿಯಂತ್ರಣದ ಹೆಸರಿನಲ್ಲಿ ಮೂಕ ಪ್ರಾಣಿಗಳನ್ನು ಕೂಡ ಶೋಷಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕೆಲವು ದಿನಗಳ ಹಿಂದೆ ಹಳಿಯಾಳದಲ್ಲಿ ಬೀದಿನಾಯಿಗಳನ್ನು ಹಿಡಿದು ಅರಣ್ಯಕ್ಕೆ ತೆಗೆದುಕೊಂಡು ಹೋಗಿ ಬಿಡಲಾಗಿತ್ತು. ಇದು ಒಂದೆಡೆ ಬೀದಿ ನಾಯಿಗಳ ಅಪಾಯಕ್ಕೆ ಎಡೆಮಾಡಿಕೊಡುವಂತಿತ್ತು. ಜೊತೆಗೆ ಕಾಡು ಪ್ರಾಣಿಗಳಿಗೂ ಸಹ ಬೀದಿನಾಯಿಗಳಿಂದ ರೋಗ ಹರಡುವ ಆತಂಕ ಇದೆ. ಹೀಗಾಗಿ ಸರಿಯಾದ ಕ್ರಮ ಅನುಸರಿಸಿ ಬೀದಿ ನಾಯಿಗಳನ್ನ ನಿಯಂತ್ರಿಸಬೇಕು ಎನ್ನುವುದು ಪ್ರಾಣಿ ಪ್ರಿಯರ ಅಭಿಪ್ರಾಯವಾಗಿದೆ. ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲು ಜಿಲ್ಲಾಡಳಿತ ಕಾರ್ಯಕ್ರಮ ರೂಪಿಸಿದೆ. ಆದರೆ ಸಂತಾನಹರಣದ ಹೆಸರಿನಲ್ಲಿ ಮೂಕಪ್ರಾಣಿಗಳನ್ನು ಹಿಂಸಿಸುತ್ತಿರುವುದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಸರಿಯಾದ ಕ್ರಮದಲ್ಲಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಬೇಕು. ಈ ಮೂಲಕ ಬೀದಿ ನಾಯಿಗಳ ಉಪಟಳಕ್ಕೆ ತಡೆಯಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿಪ್ರಿಯರ ಆಗ್ರಹವಾಗಿದೆ.