ಓಡಾಡಲು,ಮಾತನಾಡಲು ಅಸಮರ್ಥ, ಚದುರಂಗದಲ್ಲಿ ಈತ ಸಮರ್ಥ
ಕಾರವಾರ, ಅಕ್ಟೋಬರ್ 26: ದೈಹಿಕವಾಗಿ ಓಡಾಡಲು ಹಾಗೂ ಸ್ಪಷ್ಟವಾಗಿ ಮಾತನಾಡಲು ಈತ ಅಸಮರ್ಥ. ಆದರೆ, ಚದುರಂಗದ ಆಟದಲ್ಲಿ ಈತ ಎಲ್ಲರಿಗಿಂತಲೂ ಸಮರ್ಥ...
ಹೌದು...ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಎಂ.ಪಿ.ಇ ಸೊಸೈಟಿಯ ಎಸ್.ಡಿ.ಎಂ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಮರ್ಥ ಜೆ.ರಾವ್ ಎಂಥವರಿಗೂ ಕೂಡ ಸ್ಪೂರ್ತಿಯ ಮೂರ್ತಿ.
ಹುಟ್ಟಿದ ಬಳಿಕ ಸೆಲೆಬ್ರಲ್ ಪಾಲ್ಸಿಯಿಂದ ವಿಕಲಚೇತನಕ್ಕೆ ತುತ್ತಾದ ಸಮರ್ಥ, ಸರಾಗವಾಗಿ ನಡೆಯಲಾರ ಹಾಗೂ ಸ್ಪಷ್ಟವಾಗಿ ಮಾತನಾಡಲು ಕೂಡ ಈತನಿಂದ ಅಸಾಧ್ಯ. ಇದರಿಂದ ತಂದೆ ಅಥವಾ ತಾಯಿಯೇ ಈತನನ್ನು ಹೊತ್ತುಕೊಂಡೇ ಹೋಗ ಬೇಕು. ಶಾಲೆ, ಕಾಲೇಜಿಗೂ ಕೂಡ ಹೊತ್ತು ಕೊಂಡೇ ಹೋಗಿ ಬಿಟ್ಟುಬರಬೇಕು.
ಆದರೆ, ಚದುರಂಗದಲ್ಲಿ ಮಾತ್ರ ಈತ ಅಸಾಮಾನ್ಯ ಆಟಗಾರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಬಂದಿರುವ ಈತನ ಯಶೋಗಾಥೆಯನ್ನು ಮುಂದೆ ಓದಿ...
ತಾಯಿಯೇ ಚೆಸ್ ನ ಮೊದಲ ಗುರು
ಸಮರ್ಥನಿಗೆ ಅವರ ತಾಯಿ ವಿನುತಾ ಭಟ್ಟರೇ ಮೊದಲ ಗುರು. ಅವನಲ್ಲಿದ್ದ ಚೆಸ್ ಬಗೆಗಿನ ಆಸಕ್ತಿಯನ್ನು ಗುರುತಿಸಿದ್ದ ಅವರು, ಇಂದು ಭಾರತವನ್ನು ಪ್ರತಿನಿಧಿಸುವ ಮಟ್ಟಿಗೆ ತಳಪಾಯ ಹಾಕಿದವರು. ಶಾಲೆಯಲ್ಲಿ ಎಲ್ಲ ಮಕ್ಕಳೂ ಆಡಲು ಹೋದಾಗ ಸಮರ್ಥ ಮಾತ್ರ ಬಾಗಿಲ ಬಳಿ ನಿಂತು ಏನನ್ನೋ ಯೋಚನೆ ಮಾಡುತ್ತಾ ಇತರರ ಆಟವನ್ನು ನೋಡುತ್ತಾ ಕುಳಿತಿರುತ್ತಿದ್ದ. ಈ ಬಗ್ಗೆ ತಿಳಿದ ತಾಯಿ ವಿನುತಾ, ಅವನಿಗೆ ಚೆಸ್ ಆಡಲು ಹೇಳಿಕೊಟ್ಟರು. ಅಲ್ಲಿಂದ ಪ್ರಾರಂಭವಾಯಿತು ಸಮರ್ಥನ ಚೆಕ್ ಕೊಡೋ ಚೆಸ್ ಆಟ.
ತಾಲೂಕು, ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ
ಪ್ರಾರಂಭದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ಅದಾಗಲೇ ಸ್ಥಾನಗಳಿಸುತ್ತಿದ್ದ ಸಮರ್ಥನಿಗೆ ಚೆಸ್ ಆಟಗಾರ ವಿ.ಕೆ.ಕಾಮತ ಹಾಗೂ ಶಿರಸಿಯ ಪ್ರಸಾದ ಹೆಗಡೆ ಅವರ ಬಳಿ ತರಬೇತಿ ನೀಡಲಾಯಿತು. ಬಳಿಕ ತಮಿಳುನಾಡಿನ ಶ್ರೀನಿಧಿ ಶ್ರೀಪತಿ ಅವರಿಂದ ಆನ್ ಲೈನ್ ತರಬೇತಿ, ಜತೆಗೆ ಮಧುರೈನ ಜ್ಯೋತಿ ಪ್ರಕಾಶ ಅವರಿಂದ ಕೂಡ ತರಬೇತಿ ಕೊಡಿಸಲಾಯಿತು.
ಅಂತಾರಾಷ್ಟ್ರೀಯ ವರೆಗೆ ಸಮರ್ಥನ ಸಾಧನೆಗಳು
ಸಮರ್ಥ 2015ರ ಏಪ್ರಿಲ್ನಲ್ಲಿ ತ್ರಿಚಿಯಲ್ಲಿ ನಡೆದ ವಿಶೇಷ ಚೇತನರ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಹುಬ್ಬಳ್ಳಿಯಲ್ಲಿ ನಡೆದ ಅಂತಾರಾಜ್ಯ ಸ್ಪರ್ಧೆಯಲ್ಲಿ 3 ನೇ ಸ್ಥಾನ, ಮೈಸೂರಿನಲ್ಲಿ ನಡೆದ 16 ವರ್ಷ ದೊಳಗಿನವರ ಸ್ಪರ್ಧೆಯಲ್ಲಿ ದ್ವಿತೀಯ, ಫಿಡೆ(ವರ್ಲ್ಡ್ ಚೆಸ್ ಫೆಡರೇಶನ್) 1,260ನೇ ಶ್ರೇಣಿ, ಅಮೇರಿಕಾದ ಫ್ಲೋರಿಡಾದಲ್ಲಿ ಈ ವರ್ಷದ ಜೂನ್ ನಲ್ಲಿ ನಡೆದ ಪ್ರಥಮ ವಿಶ್ವ ಫಿಡೇ ಕಿರಿಯ ದೈಹಿಕ ಅಸಮರ್ಥರ ಚದುರಂಗ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಅಷ್ಟೇ ಅಲ್ಲದೇ ಬರುವ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ ಸ್ಪರ್ಧೆಗೂ ಕೂಡ ಸಮರ್ಥ ಆಯ್ಕೆಯಾಗಿದ್ದಾನೆ.
ಮಗನಿಗಾಗಿ ಬಡ್ತಿ ಬೇಡ ಎಂದ ತಂದೆ
ತಂದೆ ಜಗದೀಶ ರಾವ್ ಸಿಂಡಿಕೇಟ್ ಬ್ಯಾಂಕ್ ಹೊನ್ನಾವರ ಶಾಖೆಯಲ್ಲಿ ಉದ್ಯೋಗಿ. ಅವರ ಕೆಲಸಕ್ಕೆ ಮೆಚ್ಚಿ ಅವರಿಗೆ ಬಡ್ತಿ ಕೂಡ ಲಭಿಸಿತ್ತು. ಆದರೆ. ಬಡ್ತಿಗಾಗಿ ಗೋವಾದ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ವರ್ಗಾವಣೆಯಾಗಬೇಕಿತ್ತು. ಅಲ್ಲಿಗೆ ತೆರಳಿದರೆ ಮನೆಯಲ್ಲಿ ಹೆಂಡತಿಗೆ ಸಮರ್ಥನನ್ನು ನೋಡಿಕೊಳ್ಳಲು ತೊಂದರೆ ಆಗುವುದಲ್ಲದೇ ಆತನ ಚೆಸ್ ಆಸಕ್ತಿಗೆ ಹಿನ್ನಡೆಯಾಗುತ್ತದೆ ಎಂದು ಅವರು ಬಡ್ತಿ ತ್ಯಜಿಸಿದರು. ಈವರೆಗೂ ಹೊನ್ನಾವರ ಶಾಖೆಯಲ್ಲಿಯೇ ಉದ್ಯೋಗಿಯಾಗಿ, ಸಮರ್ಥನ ಪ್ರತೀ ಹೆಜ್ಜೆಗೂ ಬೆಂಗಾವಲಾಗಿ ನಿಂತಿದ್ದಾರೆ.
ವಿಶ್ವ ಚಾಂಪಿಯನ್ ಸಮರ್ಥನ ಕನಸು
"ವಿಶ್ವನಾಥನ್ ಆನಂದರಂತಾಗಿ ಮ್ಯಾಗ್ನಸ್ ಕಾರ್ಲಸನ್ ಸೋಲಿಸಬೇಕು" ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ರಂತೆ ವಿಶ್ವ ಚಾಂಪಿಯನ್ ಆಗಬೇಕು ಎನ್ನುವುದು ಸಮರ್ಥನ ಕನಸು. ಸಮರ್ಥನ ಈ ಕನಸು ನನಸಾಗಲಿ. ಆತನ ಪ್ರತಿ ಹೆಜ್ಜೆ ಆತನಿಗೆ ಯಶಸ್ಸು ತರಲಿ ಎಂದು 'ಒನ್ ಇಂಡಿಯಾ ಕನ್ನಡ' ಕೂಡ ಹಾರೈಸುತ್ತದೆ. ನೀವೂ ಕೂಡ ಸಮರ್ಥನಿಗೆ ಶುಭ ಹಾರೈಸಿ....