ಕಾರವಾರ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ತೆಗೆದುಕೊಂಡ ಕ್ರಮಗಳಿವು
ಕಾರವಾರ, ಜನವರಿ, 19: ಶಾಲಾ ಮಕ್ಕಳ ಬ್ಯಾಗ್ಗಳಲ್ಲಿ ಹಿರಿಯರು ಬಳಸುವ ವಸ್ತುಗಳು ಪತ್ತೆಯಾಗುತ್ತಿವೆ. ಆದರೆ ಇದನ್ನು ತಡೆಯುವ ನಿಟ್ಟಿನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೆಡಿಕಲ್, ವೈನ್ ಶಾಪ್ನಲ್ಲಿ ವಯಸ್ಕರ ವಸ್ತುಗಳು ಸೇರಿದಂತೆ ಯಾವುದೇ ಮಾದಕ ವಸ್ತುಗಳು ಮಾರಾಟ ಮಾಡಿಸದಂತೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು, ಅಬಕಾರಿ ಆಯುಕ್ತರಿಂದ ವೈನ್ ಸ್ಟೋರ್ ಹಾಗೂ ಮೆಡಿಕಲ್ ಶಾಪ್ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಕಾರವಾರದಲ್ಲಿ ಹೇಳಿದರು.
ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ಮಕ್ಕಳ ಶಾಲಾ ಬ್ಯಾಗ್ಗಳಲ್ಲಿ ಕಾಂಡೋಮ್, ಗರ್ಭನಿರೋಧಕದಂತಹ ಮಾತ್ರೆಗಳಿರುವುದು ಪತ್ತೆಯಾಗಿದ್ದವು. ಈ ಘಟನೆಯ ಬಳಿಕ ಸಮಾಜ, ಮಕ್ಕಳನ್ನು ನಿಯಂತ್ರಿಸುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ. ಇದು ಸಮಾಜವೇ ತಲೆತಗ್ಗಿಸುವ ವಿಚಾರವಾಗಿದೆ.
ಜೀವದ ಹಂಗು ತೊರೆದು ಜಲಸಮಾಧಿಯಾಗುವವರಿಗೆ ಮರುಜೀವ ನೀಡುವ ಲೈಫ್ ಗಾರ್ಡ್
ಆದರೆ ಅಪ್ರಾಪ್ತ ಮಕ್ಕಳಿಗೆ ಇಂತಹ ಅನಗತ್ಯ ವಸ್ತುಗಳನ್ನು ನೀಡಬಾರದು ಎಂಬುದು ಕಾನೂನಿನಲ್ಲೇ ಇದೆ. ಆದರೆ ಮದ್ಯ ಖರೀದಿ ವಯಸ್ಸು ಇಳಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಹಾಗೇನಾದರೂ ಅಂಥ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಿದರೆ ಮಳಿಗೆಯ ಪರವಾನಗಿ ರದ್ದುಪಡಿಸಬೇಕು. ವ್ಯಾಪಾರವಷ್ಟೇ ಅಲ್ಲ, ಮಕ್ಕಳ ರಕ್ಷಣೆ ಕೂಡ ಇಲ್ಲಿ ಮುಖ್ಯವಾಗಿದೆ. ಜನರನ್ನು ಸಾಯಿಸಿ ವ್ಯಾಪಾರ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.
ಅತೀ ಕಡಿಮೆ ಪ್ರಕರಣಗಳು ದಾಖಲು
ರಾಜ್ಯದಲ್ಲಿ ದಾಖಲಾದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಮನಿಸಿದರೆ ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಅತೀ ಕಡಿಮೆ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಅತ್ಯಾಚಾರ, ಬಿಕ್ಷಾಟನೆ, ಬಾಲ್ಯ ವಿವಾಹ ಸೇರಿದಂತೆ ದಾಖಲಾದ ಅನೇಕ ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ ಉತ್ತರ ಕನ್ನಡ ಜಿಲ್ಲೆಯು ಕಡಿಮೆ ಪ್ರಕರಣಗಳನ್ನು ಹೊಂದಿದೆ. ಆದರೂ ಜಿಲ್ಲೆಯ ಬುಡಕಟ್ಟು ಜನಾಂಗಗಳು ಇರುವ ಕೆಲವೆಡೆ ಬಾಲ್ಯವಿವಾಹವನ್ನು ಸಂಪ್ರದಾಯ ಎಂಬಂತೆ ನಡೆಸುತ್ತಿದ್ದು, ಈ ಬಗ್ಗೆ ಅವರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ತಿಳುವಳಿಕೆ ನೀಡುವ ಅಗತ್ಯವಿದೆ ಎಂದರು.
ಮಕ್ಕಳಿಗೆ ಜಾಗೃತಿ ಮೂಡಿಸಲು ಪ್ಲಾನ್
ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೋಷಕರು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆಗಳ ವಾರ್ಡ್ ಮಟ್ಟದಲ್ಲಿ ಜಾಗೃತಿ ಸಮಿತಿಯನ್ನು ರಚಿಸಲಿದ್ದೇವೆ. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದವರ ಸಹಯೋಗದಲ್ಲಿ ಈ ಸಮಿತಿಯನ್ನು ರಚಿಸಲಾಗುತ್ತಿದೆ. ಇದನ್ನು ಮೇಲುಸ್ತಾವರಿ ಮಾಡಲು ಗ್ರಾಮ ಪಂಚಾಯತಿ ಪಿಡಿಒ, ಕಾರ್ಯದರ್ಶಿ, ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರ ಸಮಿತಿ ಇರಲಿದೆ ಎಂದು ಮಾಹಿತಿ ನೀಡಿದರು.
ಬಾಲಮಂದಿರದಲ್ಲಿ ಪುನರ್ವಸತಿ ವ್ಯವಸ್ಥೆ
ಕಳೆದ 2022ರ ಏಪ್ರಿಲ್ನಿಂದ ಡಿಸೆಂಬರ್ವರೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ 12 ಭಿಕ್ಷಾಟನೆ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 9 ಮಕ್ಕಳನ್ನು ಪಾಲಕರಿಗೆ ಒಪ್ಪಿಸಿದ್ದು, ಉಳಿದ ಮಕ್ಕಳಿಗೆ ಬಾಲಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. 4 ಬೀದಿಬದಿ ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಅವರನ್ನು ಮಕ್ಕಳ ಅಭಿವೃದ್ಧಿ ಕೇಂದ್ರದಲ್ಲಿ ಇರಿಸಲಾಗಿದೆ. 3 ಕಿಶೋರ ಕಾರ್ಮಿಕರ ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಕಾರ್ಮಿಕ ಇಲಾಖೆಯು ಕ್ರಮ ಕೈಗೊಂಡಿದೆ. 26 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅದರಲ್ಲಿ ಒಂದು ವಿವಾಹವನ್ನು ತಡೆಯಲಾಗಿದೆ. 45 ಪೋಕ್ಸೋ ಪ್ರಕರಣಗಳು ಹಾಗೂ 10 ಕಾನೂನು ಬಾಹೀರ ದತ್ತು ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದರು.
ಸಮಾಜ ಸೇವಕರ ನೇಮಕಕ್ಕೆ ಯೋಜನೆ
ಮಕ್ಕಳ ಸಹಾಯವಾಣಿ 1098 ಈವರೆಗೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ರಾಷ್ಟ್ರ ಮಟ್ಟದಲ್ಲಿ ನಿಯಮಾವಳಿ ರಚನೆಯಾಗುತ್ತಿದ್ದು, 112 ಜೊತೆಗೆ ಈ ಸಹಾಯವಾಣಿಯನ್ನು ಸಂಯೋಜಿಸಲು ಚರ್ಚೆ ನಡೆದಿದೆ. ಅದಕ್ಕೆ ಹಿರಿಯ ನಾಗರಿಕರು, ಸಮಾಜ ಸೇವಕರನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಏಪ್ರಿಲ್ ನಂತರ ಇದು ಚಾಲ್ತಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.