ಕರ್ನಾಟಕದ ಏಕೈಕ ನೌಕಾನೆಲೆ ಐಎನ್ಎಸ್ ಕದಂಬದಲ್ಲಿ ಸ್ಟೇಟ್-1 ಅಲರ್ಟ್ ಘೋಷಣೆ
ಕಾರವಾರ, ಫೆಬ್ರವರಿ 26: ಭಾರತೀಯ ವಾಯುಸೇನೆಯು ಅಂತರರಾಷ್ಟ್ರೀಯ ಗಡಿರೇಖೆ ದಾಟಿ, ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಯ ಮೇಲೆ 1000 ಕೆಜಿ ಬಾಂಬ್ ಅನ್ನು ಎಸೆದಿದೆ. ಇದರ ಬೆನ್ನಲ್ಲೇ, ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿಯೂ ಕೂಡ ಅಲರ್ಟ್ ಘೋಷಣೆ ಮಾಡಲಾಗಿದೆ.
12 ಮೀರಜ್ 2000 ಜೆಟ್ ವಿಮಾನವು ಬೆಳಗ್ಗೆ 3:30 ರ ಸುಮಾರಿಗೆ ಉಗ್ರರ ನೆಲೆಯ ಮೇಲೆ ಬಾಂಬಿನ ಸುರಿಮಳೆಗರೆದಿದೆ ಎಂದು ಈ ವರದಿ ತಿಳಿಸಿದೆ.
ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?
ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಭಾರತ ಈಗ ಉಗ್ರನೆಲೆ ಮೇಲೆ ದಾಳಿ ನಡೆಸಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಏಕೈಕ ನೌಕಾನೆಲೆ, ಕಾರವಾರದ ಐಎನ್ಎಸ್ ಕದಂಬದಲ್ಲಿ ಸ್ಟೇಟ್-1 ಅಲರ್ಟ್ ಘೋಷಣೆ ಮಾಡಲಾಗಿದೆ. ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ ದಿನದಾಗಿನಿಂದ ಇಲ್ಲಿ ಅಲರ್ಟ್ ಘೋಷಣೆ ಮಾಡಲಾಗಿತ್ತು. ಆದರೆ, ಇಂದು ನೌಕಾನೆಲೆಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂಬ ಮಾಹಿತಿ ಬಂದಿದೆ.
ಸ್ಟೇಟ್ 1 ಅಲರ್ಟ್ ಎಂದರೇನು?
ಈ ಅಲರ್ಟ್ ಪ್ರಕಾರ, ಯಾವುದೇ ಕ್ಷಣದಲ್ಲಿ ಯುದ್ಧ ನಡೆಯಬಹುದು ಅಥವಾ ಎದುರಾಳಿಗಳು ಯಾವಾಗಲಾದರೂ ದೇಶದ ಮೇಲೆ ಆಕ್ರಮಣ ಮಾಡಬಹುದು. ಈ ಹಿನ್ನೆಲೆಯಲ್ಲಿ ಯುದ್ಧ ವಿಮಾನಗಳು, ವೈಮಾನಿಕ ಬಾಂಬರ್ ಗಳು, ಹಡಗುಗಳು ಸಜ್ಜಾಗಿರಬೇಕು. ಯಾವುದೇ ಸೈನಿಕ ರಜೆಯಲ್ಲಿರಬಾರದು. ರಜೆಗೆ ತೆರಳಿದವರು ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗಿರಬೇಕು ಎನ್ನುವುದನ್ನು ಈ ಸ್ಟೇಟ್ 1 ಅಲರ್ಟ್ ಹೇಳುತ್ತದೆ.
ನೌಕಾಪಡೆಯ ಪ್ರಮುಖ ನೆಲೆ
ಭಾರತ-ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ಸನ್ನಿವೇಶವಿದೆ. ಒಂದೊಮ್ಮೆ ಯುದ್ಧ ನಡೆದಲ್ಲಿ ಭಾರತೀಯ ನೌಕಾಸೇನೆಯ ಹಡಗುಗಳನ್ನು ರಿಪೇರಿ ಮಾಡುವ, ಇಂಧನ, ಶಸ್ತ್ರಾಸ್ತ್ರ ಪೂರೈಸುವ ನೌಕಾಪಡೆಯ ಪ್ರಮುಖ ನೆಲೆಯಾಗಿ ಇದು ಕಾರ್ಯನಿರ್ವಹಿಸಲಿದೆ.
ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ
ಏಷ್ಯಾದಲ್ಲೇ ಅತಿ ದೊಡ್ಡ ನೆಲೆ
ನೌಕಾನೆಲೆಯಲ್ಲಿ ಐಎನ್ಎಸ್ ವಿಕ್ರಮಾದಿತ್ಯ ಸೇರಿ 10ಕ್ಕೂ ಹೆಚ್ಚು ಹಡಗುಗಳು ಕಾರ್ಯನಿರ್ವಹಿಸುತ್ತಿವೆ. ಪ್ರತ್ಯೇಕ ಶಸ್ತ್ರಾಗಾರ ಹಾಗೂ ಹಡಗುಗಳನ್ನು ಮೇಲೆತ್ತಿ ರಿಪೇರಿ ಮಾಡುವ ಕಾರ್ಯಾಗಾರ ಕೂಡ ಇದೆ. ಎರಡನೇ ಹಂತದ ಕಾಮಗಾರಿ ಮುಗಿದಾಗ ಕಾರವಾರದ ನೌಕಾನೆಲೆ ಏಷ್ಯಾದಲ್ಲೇ ಅತಿ ದೊಡ್ಡ ನೆಲೆಯಾಗಲಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.
ಉಗ್ರರ ಮೂರು ನೆಲೆಗಳ ಮೇಲೆ ಕರಾರುವಾಕ್ ದಾಳಿ ನಡೆದಿದ್ದು ಹೇಗೆ?
ಅಲರ್ಟ್ ಘೋಷಣೆ
ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ ದಿನದಾಗಿನಿಂದ ಅಲರ್ಟ್ ಘೋಷಣೆ ಮಾಡಲಾಗಿತ್ತು.ಇಂದಿನಿಂದ ನೌಕಾನೆಲೆಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.