ಭಟ್ಕಳ- ಹೊನ್ನಾವರ ಶಾಸಕರ ಮೇಲೆ ಬಾಂಬ್ ದಾಳಿ ಯತ್ನ?
ಕಾರವಾರ, ಫೆಬ್ರವರಿ 26: ಭಟ್ಕಳ- ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯರ ಮೇಲೆ ಬಾಂಬ್ ದಾಳಿ ಯತ್ನ ನಡೆದಿದೆ ಎಂದ ಸ್ಫೋಟಕ ಸುದ್ದಿ ಇದೀಗ ಉತ್ತರಕನ್ನಡ ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದೆ.
ಹೊನ್ನಾವರದ ಹೊಸಾಡದಲ್ಲಿ ದುಷ್ಕರ್ಮಿಯ ಕೈಯಲ್ಲೇ ವಸ್ತುವೊಂದು ಸ್ಫೋಟವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಸ್ಫೋಟವಾಗಿರುವ ವಸ್ತು ಯಾವುದು ಎಂಬುದು ಇನ್ನೂ ಖಚಿತ ಪಟ್ಟಿಲ್ಲ. ಆದರೆ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ. ಸ್ಫೋಟಿಸಲು ಬಂದು ಗಾಯಗೊಂಡಿರುವ ವ್ಯಕ್ತಿಯನ್ನು ಉಡುಪಿ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಂಬಳಬೆಟ್ಟು ಸಿಡಿಮದ್ದು ಸ್ಫೋಟ: ಮಾಲೀಕನ ಮೇಲೆ ದೂರು ದಾಖಲು
ಇನ್ನೊಂದು ಮೂಲಗಳ ಪ್ರಕಾರ ಹೊನ್ನಾವರದ ಹೊಸಾಡಿನಲ್ಲಿ ಭಾನುವಾರ ರಾತ್ರಿ ವಾಲಿಬಾಲ್ ಪಂದ್ಯಾವಳಿಯೊಂದು ನಡೆಯುತ್ತಿತ್ತು. ಅಲ್ಲಿ ಉದ್ಘಾಟನೆಗೆ ಶಾಸಕ ಮಂಕಾಳ ವೈದ್ಯ ಹೋಗಿದ್ದರು. ಅದೇ ಸ್ಥಳದ ಐವತ್ತೇ ಅಡಿ ಅಂತರದಲ್ಲಿ ಬಾಂಬ್ ಸಿಡಿದಂತೆ ಶಬ್ದವಾಗಿದೆ. ಈ ವೇಳೆ ಅಲ್ಲಿದ್ದವರು ಹೋಗಿ ನೋಡಿದಾಗ ಯುವಕನೋರ್ವನ ಕೈಗೆ ಗಾಯವಾಗಿತ್ತು.
ಉಡುಪಿಯ ಆಸ್ಪತ್ರೆಗೆ ಆತನನ್ನು ಸಾಗಿಸಲಾಗಿತ್ತು. ಆದರೆ ಅಲ್ಲಿದ್ದ ಕೆಲವರು, ಇದು ಶಾಸಕರ ಹತ್ಯೆಗೆ ನಡೆಸಿದ ಸಂಚು ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಅಂತಲೂ ಸುದ್ದಿ ಹರಡಿದೆ. ಗಾಯಗೊಂಡವನನ್ನು ರೊನಾಲ್ಡ್ ಮಿರಾಂಡ ಎಂದು ಗುರುತಿಸಲಾಗಿದ್ದು, ಆತನ ಕೈಗೆ ಗಂಭೀರವಾಗಿ ಗಾಯವಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ 'ಒನ್ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ್ದು, 'ಘಟನೆಗೆ ಮೂಲ ಕಾರಣ ಇನ್ನೂ ತಿಳಿದು ಬಂದಿಲ್ಲ. ಗಾಯಗೊಂಡವನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ, ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಆದರೆ ಈ ಘಟನೆ ಸಂಭವಿಸಿರುವುದು ಪಂದ್ಯಾವಳಿ ನಡೆಯುತ್ತಿದ್ದ ಸ್ಥಳದ ಐವತ್ತು ಅಡಿ ಅಂತರದಲ್ಲಿ. ತನಿಖೆಯಿಂದಲೇ ಎಲ್ಲವೂ ತಿಳಿದು ಬರಬೇಕಿದೆ' ಎಂದಷ್ಟೇ ಹೇಳಿದ್ದಾರೆ.