ಉ. ಕನ್ನಡದಲ್ಲಿ ನ. 9 -10ರವರೆಗೆ ಮೆರವಣಿಗೆ, ಪ್ರತಿಭಟನೆಗೆ ನಿರ್ಬಂಧ
ಕಾರವಾರ, ನವೆಂಬರ್ 8: ನವೆಂಬರ್ 9ರ ಬೆಳಿಗ್ಗೆ 6ರಿಂದ 10ರ ಸಂಜೆ 6ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ ಹಾಗೂ ಬಹಿರಂಗವಾಗಿ ಘೋಷಣೆಗಳನ್ನು ಕೂಗುವುದನ್ನು ನಿಷೇಧಿಸಲಾಗಿದೆ.
ಟಿಪ್ಪು ಜಯಂತಿ: ಬಿಗಿ ಭದ್ರತೆ ಕೈಗೊಳ್ಳುವಂತೆ ರಾಮಲಿಂಗಾ ರೆಡ್ಡಿ ಸೂಚನೆ
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಟಿಪ್ಪು ಜಯಂತಿ ಆಚರಣೆಯ ವೇಳೆ ಈ ನಿರ್ಬಂಧ ಹೇರಲಾಗಿದೆ ಎಂದು ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿಸಿದ್ದಾರೆ.
'ಕಳೆದ ಎರಡು ವರ್ಷದಿಂದ ಟಿಪ್ಪು ಜಯಂತಿ ಆಚರಣೆಯ ವೇಳೆ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಾಗೂ ಈ ಬಾರಿಯೂ ಪರ- ವಿರೋಧ ಚರ್ಚೆಗಳು ಉಂಟಾಗಿವೆ. ಈ ಕಾರಣಕ್ಕೆ ಸೂಕ್ಷ್ಮ ಸಂದರ್ಭಕ್ಕೆ ಅನುಸಾರವಾಗಿ ಶಾಂತಿ ಪಾಲನೆ ಮಾಡಲು 1965ನೇ ಕಾಯ್ದೆಯ ಭಾರತೀಯ ದಂಡ ಸಂಹಿತೆ ಕಲಂ 35 (3)ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.
'ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ನಿಯಮಾನುಸಾರ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು. ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ಅಂದು ಕೇಂದ್ರ ಸ್ಥಾನದಲ್ಲಿದ್ದು, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಜತೆಗೆ ಜಯಂತಿ ನಡೆದ ಬಳಿಕ, ಅಂದರೆ ಇದೇ 10ರ ಸಂಜೆ ಈ ಕುರಿತು ವರದಿ ನೀಡಬೇಕು' ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ವಾರದಲ್ಲಿ 127 ಗೂಂಡಾಗಳಿಂದ ಬಾಂಡ್ ಪಡೆದ ಮಂಗಳೂರು ಪೊಲೀಸರು
ಜತೆಗೆ ಭಟ್ಕಳ ಸೂಕ್ಷ್ಮ ತಾಲೂಕಾಗಿರುವುದರಿಂದ ಅಲ್ಲಿ ಕಾನೂನು ವ್ಯವಸ್ಥೆಗೆ ಭಂಗ ಬಂದರೆ ಜಿಲ್ಲೆಯಾದ್ಯಂತ ಮತೀಯ ಗಲಭೆ ಉಂಟಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿ ನಿರ್ಬಂಧ ಜಾರಿ ಮಾಡಿದ್ದಾರೆ.
'2017ರಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರಾಜಕೀಯ ಹಾಗೂ ವಿವಿಧ ಸಂಘಟನೆಯ ಮುಖಂಡರುಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಕಲಂ 71ರ ಪ್ರಕಾರ ವಶಕ್ಕೆ ಪಡೆದು ಬಿಡುಗಡೆಗೊಳಿಸಲಾಗಿತ್ತು.
ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘನೆ ಮಾಡಿದ್ದ ಕಾರಣಕ್ಕೆ ಕೆಲವರ ಮೇಲೆ ಕಲಂ 144ರ ಸಿಆರ್ಪಿಸಿ ಪ್ರಕಾರ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.