ರೂಪಾಲಿ, ಸೈಲ್ ಬಹಿರಂಗ ವಾಕ್ಸಮರ; ಚುನಾವಣಾ ಬಳಿಕವೂ ಮುಂದುವರಿದ ಜಟಾಪಟಿ
ಕಾರವಾರ, ಫೆಬ್ರವರಿ 28: ಕ್ಷೇತ್ರದಲ್ಲಿ ಕಳೆದ ಕೆಲ ತಿಂಗಳುಗಳಿಂದ ರಾಜಕೀಯ ಚಟುವಟಿಕೆ ಗರಿಗೆದರಿದೆ. ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ರಾಜಕೀಯ ಗುದ್ದಾಟ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಸತೀಶ್ ಸೈಲ್ ಆಯ್ಕೆಗೊಂಡಾಗ, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕ್ಷೇತ್ರದಿಂದ ದೂರ ಸರಿದ ಹಿನ್ನೆಲೆಯಲ್ಲಿ ಅಧಿಕಾರ ಇದ್ದ ಮೂರ್ನಾಲ್ಕು ವರ್ಷ ರಾಜಕೀಯ ಕಿತ್ತಾಟ ಅಷ್ಟಾಗಿ ಇರಲಿಲ್ಲ.
ಜೆಡಿಎಸ್ ನಿಂದ ಆನಂದ್ ಅಸ್ನೋಟಿಕರ್ ದೂರ ದೂರ!
ಈ ಬಾರಿಯ ಚುನಾವಣೆಯಲ್ಲಿ ಶಾಸಕರಾಗಿ ರೂಪಾಲಿ ನಾಯ್ಕ ಆಯ್ಕೆಯಾದ ನಂತರ ಮೊದಲ ಒಂದು ವರ್ಷ ಕೂಡ ಕ್ಷೇತ್ರದಲ್ಲಿ ಅಷ್ಟಾಗಿ ರಾಜಕೀಯ ಗುದ್ದಾಟ ಇರಲಿಲ್ಲ. ಆದರೆ, ಕೈಗಾ ಅಣು ವಿದ್ಯುತ್ ಸ್ಥಾವರ ವಿಸ್ತರಣೆ ವಿರೋಧಿ ಹೋರಾಟದಿಂದ ಸತೀಶ್ ಸೈಲ್ ಹಾಗೂ ರೂಪಾಲಿ ನಾಯ್ಕ ನಡುವೆ ರಾಜಕೀಯ ಗುದ್ದಾಟ ಹೆಚ್ಚಾಗಲಾರಂಭಿಸಿದೆ.
ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ ಸೈಲ್
ಚುನಾವಣೆಯಲ್ಲಿ ಸೋಲು ಕಂಡ ನಂತರ ಮುಂದಿನ ಚುನಾವಣೆಯಲ್ಲಿ ಮತ್ತೆ ನೆಲೆಯೂರಿ ಗೆಲ್ಲಲೇಬೇಕು ಎನ್ನುವ ನಿಟ್ಟಿನಲ್ಲಿ ಸೈಲ್ ಕ್ಷೇತ್ರದಲ್ಲಿ ತನ್ನ ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಸಾಗರಮಾಲಾ, ಟೋಲ್ ಗೇಟ್ ಸೇರಿದಂತೆ ಹಲವು ವಿಚಾರದಲ್ಲಿ ಸೈಲ್ ಶಾಸಕಿ ರೂಪಾಲಿ ನಾಯ್ಕರ ನಡೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರೆ, ಇತ್ತ ಶಾಸಕಿ ರೂಪಾಲಿ ನಾಯ್ಕ ಸಹ ಸೈಲ್ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರುತ್ತಾ ತಿರುಗುತ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಇಬ್ಬರು ನಾಯಕರ ನಡುವಿನ ಗುದ್ದಾಟ ಕ್ಷೇತ್ರದಲ್ಲಿ ಹೆಚ್ಚಾಗಿದ್ದು, ಕ್ಷೇತ್ರದ ಜನರಿಗೆ ಸೈಲ್ ಹಾಗೂ ರೂಪಾಲಿ ನಾಯ್ಕರ ನಡುವಿನ ಸಮರ ಚುನಾವಣೆ ವೇಳೆ ಪ್ರಚಾರ ನಡೆದಂತೆ ಕಂಡುಬರುತ್ತಿದೆ.
ಹೆಚ್ಚಾದ ಇಬ್ಬರ ನಡುವಿನ ಕಿತ್ತಾಟ
ಇಬ್ಬರ ನಡುವಿನ ಕಿತ್ತಾಟ ಗ್ರಾಮ ಮಟ್ಟದಲ್ಲಿ ವಿಸ್ತರಣೆಗೊಂಡಿದ್ದು, ಇಬ್ಬರು ನಾಯಕರ ನಡುವಿನ ಬೆಂಬಲಿಗರ ನಡುವೆ ಸಹ ರಾಜಕೀಯ ದ್ವೇಷ ಹೆಚ್ಚಾಗುತ್ತಲೇ ಇದೆ. ಸದ್ಯ ಪಂಚಾಯತ್ ಚುನಾವಣೆ ಸಮೀಪಿಸುತ್ತಿದ್ದು, ತಮ್ಮ ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಇಬ್ಬರು ನಾಯಕರು ಇನ್ನಷ್ಟು ಗುದ್ದಾಟಕ್ಕೆ ಇಳಿಯುವುದರಲ್ಲಿ ಅನುಮಾನವಿಲ್ಲ ಎನ್ನುವುದು ಕ್ಷೇತ್ರದ ಜನರ ಅಭಿಪ್ರಾಯ.
ಕಾರವಾರ ಬಂದರು ವಿವಾದ: ಸತೀಶ್ ಸೈಲ್ ವಿರುದ್ಧ ಆಕ್ರೋಶ
ಪ್ರತಿಷ್ಠೆಯಾಗಿರುವ ಸ್ಥಳೀಯ ಸಂಸ್ಥೆ ಅಧಿಕಾರ
ಕಾರವಾರ ನಗರಸಭೆ ಹಾಗೂ ಅಂಕೋಲಾ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ಗಾದಿಗೆ ಏರುವುದು ಇದೀಗ ಇಬ್ಬರು ನಾಯಕರ ನಡುವೆ ಪ್ರತಿಷ್ಠೆಯ ಕಣವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ನಡೆದು ವರ್ಷಗಳೇ ಕಳೆದರೂ ಇನ್ನೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿಲ್ಲ. ಕಾರವಾರ ನಗರಸಭೆ ಹಾಗೂ ಅಂಕೋಲಾ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಪ್ರಕಟವಾಗಿದ್ದು, ಅಧಿಕಾರಕ್ಕೆ ತಮ್ಮ ತಮ್ಮ ಬೆಂಬಲಿಗರನ್ನು ತರಲು ಸತೀಶ್ ಸೈಲ್ ಹಾಗೂ ರೂಪಾಲಿ ನಾಯ್ಕ ಸತತ ಪ್ರಯತ್ನ ನಡೆಸಿದ್ದಾರೆ. ಇನ್ನು ಕೆಲ ದಿನದಲ್ಲಿಯೇ ಮೀಸಲಾತಿ ಪ್ರಕಟವಾಗಲಿದ್ದು, ಅಧ್ಯಕ್ಷ ಸ್ಥಾನಕ್ಕೆ ತಮ್ಮವರನ್ನು ಕೂರಿಸಲು ಇಬ್ಬರು ನಾಯಕರು ಇನ್ನಷ್ಟು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳುವುದರಲ್ಲಿ ಅನಮಾನವಿಲ್ಲ.
ತಟಸ್ಥವಾಗಿ ಉಳಿದ ಆನಂದ್?
ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವಿನ ಜಂಗಿ ಕುಸ್ತಿ ದಿನೇ ದಿನೇ ಹೆಚ್ಚಾಗುತ್ತಿದ್ದರೆ, ಇತ್ತ ಕ್ಷೇತ್ರದ ಮತ್ತೋರ್ವ ಪ್ರಬಲ ನಾಯಕ ಆನಂದ್ ಅಸ್ನೋಟಿಕರ್ ಮಾತ್ರ ತಟಸ್ಥವಾಗಿ ಉಳಿದಿದ್ದಾರೆ. ಚುನಾವಣೆಯಲ್ಲಿ ಸೋಲು ಕಂಡ ನಂತರ ಒಂದೆರಡು ಬಾರಿ ರೂಪಾಲಿ ನಾಯ್ಕ ವಿರುದ್ಧ ಆನಂದ್ ಕಿಡಿಕಾರಿದ್ದರು. ಪ್ರವಾಹವಾದ ಸ್ಥಳದಲ್ಲಿ ಸರ್ಕಾರದಿಂದ ಮಂಜೂರಾದ ಕಾಮಗಾರಿಗಳಿಂದ ರೂಪಾಲಿ ನಾಯ್ಕ ಕಮಿಷನ್ ಪಡೆಯುತ್ತಾರೆ ಎನ್ನುವ ಆರೋಪ ಸಹ ಮಾಡಿದ್ದರು. ಇದಾದ ನಂತರ ಆನಂದ್ ಅಸ್ನೋಟಿಕರ್ ಹೆಚ್ಚಾಗಿ ರಾಜಕೀಯ ಅಖಾಡದಲ್ಲಿ ಕಾಣಿಸುತ್ತಿಲ್ಲ. ಕ್ಷೇತ್ರದಲ್ಲಿ ನಡೆಯುವ ಕೆಲ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಾಪಾಸ್ ಆಗುತ್ತಿದ್ದ ಸತೀಶ್ ಸೈಲ್ ಹಾಗೂ ರೂಪಾಲಿ ನಾಯ್ಕ ನಡುವಿನ ಕದನ ಜೋರಾಗಿರುವುದರಿಂದ ಆನಂದ್ ತಟಸ್ಥವಾಗಿ ಉಳಿದಿದ್ದಾರೆನ್ನಲಾಗಿದೆ.