ರಾಜಕೀಯ ಪಕ್ಷಗಳಿಂದ ಜನ ದಾರಿ ತಪ್ಪುತ್ತಿದ್ದಾರೆ: ಐಜಿಪಿ ನಿಂಬಾಳ್ಕರ್
ಕಾರವಾರ, ಡಿಸೆಂಬರ್ 11: ಹೊನ್ನಾವರದ ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ರಾಜಕೀಯ ಪಕ್ಷವೊಂದು ಡಿಸೆಂಬರ್ 9ರಂದು ಬಿಡುಗಡೆಗೊಳಿಸಿದ್ದ ಪತ್ರಿಕಾ ಪ್ರಕಟಣೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು ಎಂದು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಪರೇಶ್ ಸಾವು ಎನ್ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ರಾಜಭವನ ಚಲೋ
ಈ ಕುರಿತು ಸೋಮವಾರ ಪ್ರಕಟಣೆ ನೀಡಿರುವ ಅವರು, "ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಧರ್ಮದ ಆಧಾರಲ್ಲಿ ಸಮಾಜವನ್ನು ಒಡೆಯುವ ಹಾಗೂ ಕೋಮುಭಾವನೆಯನ್ನು ಕೆರಳಿಸುವ ಷಡ್ಯಂತ್ರ ಈ ವದಂತಿಗಳ ಹಿಂದಿದೆ," ಎಂದಿದ್ದಾರೆ.
"ಪತ್ರಿಕಾ ಪ್ರಕಟಣೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗಿದ್ದ ಎಲ್ಲಾ ಆರೋಪಗಳನ್ನು ತನಿಖಾಧಿಕಾರಿ ಕಲೆ ಹಾಕಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಇದನ್ನು ಕಳುಹಿಸಿದ್ದರು. ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆ ಲಭಿಸಿದೆ. ಸತ್ಯಾಂಶ ಏನೆಂಬುದನ್ನು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ವರದಿಯು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪತ್ರಿಕಾ ಪ್ರಕಟಣೆಯಲ್ಲಿರುವ ಆರೋಪಗಳನ್ನು ಅಪ್ಪಟ ಸುಳ್ಳು ಎಂದು ಸಾಬೀತುಪಡಿಸಿದೆ. ಪಕ್ಷವೊಂದು ನೀಡಿದ ಪತ್ರಿಕಾ ಪ್ರಕಟಣೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಅಮಾಯಕ ಮನಸ್ಸುಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ತಂತ್ರವಾಗಿದೆ," ಎಂದವರು ಹೇಳಿದ್ದಾರೆ.
ಹಿಂದೂ ಸಂಘಟನೆಗಳ ಪ್ರತಿಭಟನೆ : ಉತ್ತರ ಕನ್ನಡ ಉದ್ವಿಗ್ನ
ಹೊನ್ನಾವರದಲ್ಲಿ ನಡೆದ ಕೋಮು ಗಲಭೆಗೆ ಪ್ರಚೋದನೆ ನೀಡಿದವರು ಹಾಗೂ ಕುಮಟಾದಲ್ಲಿ ಸೋಮವಾರ ಸಿಬ್ಬಂದಿಯೊಬ್ಬರ ಮೇಲೆ ನಡೆಸಿದ ಹಲ್ಲೆಯ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿಂಬಾಳ್ಕರ್ ಹೇಳಿದ್ದಾರೆ.
ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಸಂಸದೆ ಶೋಭಾ ಕರಂದ್ಲಾಜೆ 'ಇದು ಜಿಹಾದಿಗಳ ಕೃತ್ಯ' ಎಂದು ಆರೋಪಿಸಿದ್ದರು. ಅಲ್ಲದೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಹಲವು ಸಂಘ ಪರಿವಾರದ ನಾಯಕರು ಪ್ರಚೋದನಕಾರಿಯಾಗಿ ಮಾತನಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಸಂಘ ಪರಿವಾರದ ಮಂದಿ ಪರೇಶ್ ಮೇಸ್ತಾ ಸಾವಿನ ಬಗ್ಗೆ ಪ್ರಚೋದನಕಾರಿ ಪೋಸ್ಟ್, ಸಂದೇಶಗಳನ್ನು ಹರಡುತ್ತಿದ್ದರು.