ಕಾಳಿ ನದಿಯಲ್ಲಿ ಮರಳುಗಾರಿಕೆಗೆ ಸದ್ಯಕ್ಕಿಲ್ಲ ಅನುಮತಿ
ಕಾರವಾರ, ಮಾರ್ಚ್ 26; ಕಾಳಿ ನದಿಯಲ್ಲಿ ಮರಳುಗಾರಿಕೆ ಪ್ರಾರಂಭಿಸಲು ಸದ್ಯಕ್ಕೆ ಅನುಮತಿ ಸಿಕ್ಕಿಲ್ಲ. ಜಿಲ್ಲಾ ಸಿಆರ್ಝೆಡ್ ಸಮಿತಿ ಕಳುಹಿಸಿದ ಪ್ರಸ್ತಾವನೆ ಅಪೂರ್ಣವಾಗಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸಲು ಜಿಲ್ಲಾಡಳಿತಕ್ಕೆ ಅರಣ್ಯ, ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಪರಿಸರ ಸೂಕ್ಷ್ಮ ವಲಯ ಎನ್ನುವ ಕಾರಣಕ್ಕೆ ಕಾಳಿ ನದಿಯಲ್ಲಿ ಮರಳುಗಾರಿಕೆ ಬಂದ್ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ಹುಟ್ಟಿ ಕಾರವಾರದಲ್ಲಿ ಸಮುದ್ರಕ್ಕೆ ಸೇರುವ ಕಾಳಿ ನದಿಯಲ್ಲಿ ಮರಳುಗಾರಿಕೆ ನಡೆಸುವುದರಿಂದ ಜಲಚರಗಳಿಗೆ ಕಂಟಕವಾಗುದಲ್ಲದೆ, ಪರಿಸರಕ್ಕೂ ಹಾನಿಯಾಗಲಿದೆ ಎಂದು ಮರಳುಗಾರಿಕೆ ಬಂದ್ ಮಾಡಲಾಗಿತ್ತು.
ಕಳೆದ ಐದು ವರ್ಷಗಳಿಂದ ನದಿಯಲ್ಲಿ ಮರಳುಗಾರಿಕೆ ಬಂದ್ ಆಗಿದ್ದು, ಕಾರವಾರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಸಿಗದೇ ಜನರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೇ ನೆರೆಯ ಅಂಕೋಲಾ, ಕುಮಟಾದಿಂದ ಸದ್ಯ ಮರಳನ್ನು ಕಾರವಾರ ತಾಲೂಕಿನಲ್ಲಿ ತರೆಸಿಕೊಳ್ಳಲಾಗುತ್ತಿದೆ.

ಕಳೆದ ಎರಡು ವರ್ಷದ ಹಿಂದೆ ಕಾಳಿ ನದಿಯಲ್ಲಿ ಪ್ರವಾಹ ಉಂಟಾಗಿ ಹಲವೆಡೆ ಮರಳು ದಿಬ್ಬಗಳು ನಿರ್ಮಾಣವಾಗಿದ್ದು, ನದಿ ಅಕ್ಕಪಕ್ಕದ ಪ್ರದೇಶಗಳಿಗೆ ನೀರು ನುಗ್ಗದಂತೆ ತಡೆಯಲು ಮರಳು ದಿಬ್ಬಗಳನ್ನು ತೆರವು ಮಾಡಲು ಅವಕಾಶ ಕೊಡುವಂತೆ ಬೇಡಿಕೆ ಇಡಲಾಗಿತ್ತು.
ಮರಳುಗಾರಿಕೆಗೆ ಅನುಮತಿ ಪಡೆಯಲು ಸಾಕಷ್ಟು ಪ್ರಯತ್ನ ನಡೆದಿದ್ದು, ಜಿಲ್ಲಾ ಮಟ್ಟದ ಸಿಆರ್ಝೆಡ್ ಸಮಿತಿಯು ಅಂತಿಮವಾಗಿ ಹತ್ತು ಬ್ಲಾಕ್ಗಳಲ್ಲಿ ಮರಳುಗಾರಿಕೆಗೆ ಅವಕಾಶವನ್ನ ಕೊಡುವಂತೆ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿತ್ತು.
ಕಳೆದ ಒಂದು ತಿಂಗಳ ಹಿಂದೆ ರಾಜ್ಯ ಮಟ್ಟದ ಸಿಆರ್ಝೆಡ್ ಸಮಿತಿ ಈ ಬಗ್ಗೆ ಸಭೆ ಸಹ ನಡೆಸಿದ್ದು, ಅಂತಿಮವಾಗಿ ಜಿಲ್ಲಾ ಸಿಆರ್ಝೆಡ್ ಸಮಿತಿ ಕಳುಹಿಸಿದ್ದ ಪ್ರಸ್ತಾವನೆಯನ್ನ ತಿರಸ್ಕರಿಸಿ ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸುವಂತೆ ಪತ್ರ ಬರೆದಿದೆ ಎನ್ನಲಾಗಿದೆ.
ಹತ್ತು ಬ್ಲಾಕ್ಗಳಲ್ಲಿ ಮರಳುಗಾರಿಕೆಗೆ ಅವಕಾಶ ಕೊಡಲು ಪ್ರಸ್ತಾವನೆ ಕಳುಹಿಸಿದ್ದು, ಇದರಲ್ಲಿ ಐದು ಬ್ಲಾಕ್ಗಳಲ್ಲಿ ಮೀನುಗಳ ಸಂತಾನೋತ್ಪತ್ತಿಗೆ ಸಮಸ್ಯೆ ಆಗಲಿದೆ ಎಂದು ರಾಜ್ಯ ಸಿಆರ್ಝೆಡ್ ಸಮಿತಿ ಅನುಮತಿ ನಿರಾಕರಿಸಿದೆ.
ಇನ್ನುಳಿದ ಐದು ಬ್ಲಾಕ್ಗಳಲ್ಲಿ ಮರಳುಗಾರಿಕೆ ಮಾಡಲು ಸೂಕ್ತವಾದ ಪ್ರದೇಶವೇ ಎಂದು ಮತ್ತೊಮ್ಮೆ ಪರಿಶೀಲಿಸಿ ಮರು ಪ್ರಸ್ತಾವನೆಯನ್ನು ನಿಯಾಮಾನುಸಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಹಿಯೊಂದಿಗೆ ಕಳುಹಿಸುವಂತೆ ತಿಳಿಸಲಾಗಿದೆ.
ಕಾಳಿ ನದಿಯಲ್ಲಿ ಮರಳುಗಾರಿಕೆ ಪ್ರಾರಂಭಿಸುವಂತೆ ಹಲವು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದು, ಈ ಬಾರಿ ಅಂತಿಮವಾಗಿ ಅವಕಾಶ ಸಿಗುತ್ತದೆ ಎನ್ನುವ ನಿರೀಕ್ಷೆ ಹೊಂದಲಾಗಿತ್ತು. ಇದೀಗ ರಾಜ್ಯ ಸಿಆರ್ಝೆಡ್ ಕಮಿಟಿ ತಿರಸ್ಕಾರ ಮಾಡುವ ಮೂಲಕ ನಿರೀಕ್ಷೆಯನ್ನ ಹುಸಿಯಾಗುವಂತೆ ಮಾಡಿದ್ದು, ಮತ್ತೊಮ್ಮೆ ಉಳಿದ ಐದು ಬ್ಲಾಕ್ಗಳಿಗೆ ಪ್ರಸ್ತಾವನೆ ಕಳುಹಿಸುವ ಕಾರ್ಯ ಜಿಲ್ಲಾ ಸಿಆರ್ಝೆಡ್ ಸಮಿತಿ ಮಾಡಬೇಕಾಗಿದೆ.












Click it and Unblock the Notifications