"ಅನರ್ಹ ಶಾಸಕರು ಸಕ್ಕರೆ, ಬಿಜೆಪಿ ಹಾಲು, ಬೆರೆಯುವುದು ಬಲು ಸುಲಭ"
ಕಾರವಾರ, ನವೆಂಬರ್ 19: ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಹೀಗಾಗಿ ಕ್ಷೇತ್ರದ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅವರ ನಾಮಪತ್ರ ಸಲ್ಲಿಕೆಗಾಗಿ ಪಟ್ಟಣಕ್ಕೆ ಬಂದಿದ್ದ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅಸಮಾಧಾನ ಶಮನ ಮಾಡುವ ಪ್ರಯತ್ನ ನಡೆಸಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತೆ ಶಿವರಾಮ್ ಹೆಬ್ಬಾರ್ ಜೊತೆಗೂಡಿ ಯಲ್ಲಾಪುರ ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಬಿಜೆಪಿ ಮುಖಂಡರ ಸಭೆಯನ್ನು ಕಟೀಲ್ ರಹಸ್ಯವಾಗಿ ನಡೆಸಿದ್ದಾರೆ. ಸಭೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ, ಶಾಸಕರಾದ ರೂಪಾಲಿ ನಾಯ್ಕ, ದಿನಕರ್ ಶೆಟ್ಟಿ, ಸುನಿಲ್ ನಾಯ್ಕ, ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಭಾಗಿಯಾಗಿದ್ದರು. ಹೆಬ್ಬಾರ್ ಬೆಂಬಲಿಗರಿಗೆ ಸೂಕ್ತ ಸ್ಥಾನ ನೀಡುವ ಹಾಗೂ ಚುನಾವಣೆ ಎದುರಿಸುವ ಕುರಿತು, ಅಸಮಾಧಾನ ಶಮನ ಮಾಡುವ ಹಿನ್ನೆಲೆಯಲ್ಲಿ ಸಭೆ ನಡೆದಿದೆ.

ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಟೀಲ್, 'ಟಿಕೆಟ್ ವಂಚಿತರಲ್ಲಿ ಅಸಮಾಧಾನ ಇರುವುದು ಸಹಜ. ಮುಂದಿನ ದಿನದಲ್ಲಿ ಎಲ್ಲವನ್ನು ಸರಿಪಡಿಸುವ ಕಾರ್ಯ ಮಾಡುತ್ತೇವೆ. ಹದಿನೈದೂ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ' ಎಂದು ಹೇಳಿದ್ದರು. 'ಶಾಸಕರು ರಾಜೀನಾಮೆ ಕೊಟ್ಟದ್ದು ನಾವು ಹೇಳಿದ್ದರಿಂದಲ್ಲ. ಅವರೇ ಪಾರ್ಟಿಯಿಂದ ಹೊರ ಬಂದಿದ್ದಾರೆ. ಸಮ್ಮಿಶ್ರ ಸರ್ಕಾರದ ಮೇಲೆ ಬೇಸರಗೊಂಡು ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ರಾಜೀನಾಮೆ ನೀಡಿದ್ದರು. ಈಗ ನಮ್ಮ ಪಕ್ಷಕ್ಕೆ ಬಂದವರಿಗೆ ಟಿಕೆಟ್ ಕೊಟ್ಟಿದ್ದೇವೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದರು. 'ಅನರ್ಹ ಶಾಸಕರ ಜೊತೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಸಕ್ಕರೆ ಇದ್ದಂತೆ. ಬಿಜೆಪಿ ಕಾರ್ಯಕರ್ತರು ಹಾಲಿದ್ದಂತೆ. ಇಬ್ಬರು ಬೆರೆಯುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications