ಸೈಕಲ್ನಲ್ಲಿ ದೇಶ ಪರ್ಯಟನೆ: ಪ್ಲಾಸ್ಟಿಕ್ ಬಳಕೆ, ಕೃಷಿ ಜಾಗೃತಿಗೆ ಪಣ!
ಕಾರವಾರ, ಜೂನ್ 23 : ಸೇನೆಗೆ ಸೇರಬೇಕಂಬ ಮಹಾದಾಸೆಯೊಂದಿಗೆ ಆತ ತರಬೇತಿ ಪಡೆಯುತ್ತಿದ್ದ, ದುರಾದೃಷ್ಟವಶಾತ್ ತರಬೇತಿ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಗಿ ಶಾಶ್ವತವಾಗಿ ಸೇನೆ ಸೇರುವ ಆಸೆ ಕಳೆದುಕೊಂಡಿದ್ದಾರೆ. ಇಷ್ಟಾದರೂ ಸುಮ್ಮನೆ ಕೂರದ ಈತ ಇದೀಗ ದೇಶದಾದ್ಯಂತ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿಗೆ ಮುಂದಾಗಿದ್ದು, ಸೈಕಲ್ ಮೂಲಕ ದೇಶ ಪರ್ಯಟನೆ ಮಾಡತೊಡಗಿದ್ದಾನೆ.
ಮಧ್ಯಪ್ರದೇಶದ ಮುರೆನಾ ಜಿಲ್ಲೆಯ ಸಿಕ್ರೋದಾ ಗ್ರಾಮದ ಬ್ರಿಜೇಶ್ ಶರ್ಮಾ ಸೈಕಲ್ ಮೂಲಕ ದೇಶಸುತ್ತುತ್ತಿದ್ದು, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮತ್ತು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುವುದರಿಂದಾಗುವ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
2019ರ ಸೆಪ್ಟೆಂಬರ್ 17ರಂದು ಗುಜರಾತ್ನ ಗಾಂಧಿನಗರದಿಂದ ಈ ಮಹತ್ವದ ಸೈಕಲ್ ಜಾಥಾ ಆರಂಭಿಸಿರುವ ಬ್ರಿಜೇಶ್ ಈಗಾಗಲೇ 8 ರಾಜ್ಯಗಳನ್ನು ಸುತ್ತಿ ಏಕಬಳಕೆಯ ಪ್ಲಾಸ್ಟಿಕ್ನಿಂದ ಪರಿಸರದ ಮೇಲಾಗುತ್ತಿರುವ ಅಡ್ಡಪರಿಣಾಮ ಹಾಗೂ ಸಾವಯವ ಕೃಷಿ ಮಹತ್ವದ ಕುರಿತು ಜಾಗೃತಿ ಮೂಡಿಸಿದ್ದಾರೆ.

ಬುಡಕಟ್ಟು ಜನರ ಜೊತೆ 6 ತಿಂಗಳ ವಾಸ
ಸೈಕಲ್ ಜಾಥಾ ಆರಂಭಿಸಿದ ಕೆಲ ತಿಂಗಳ ಬಳಿಕ ಎರಡು ವರ್ಷಗಳ ಹಿಂದೆ ಕೊರೊನಾ ಲಾಕ್ಡೌನ್ ಆಗಿದ್ದರಿಂದ ಬ್ರಿಜೇಶ್ ಮಹಾರಾಷ್ಟ್ರದ ಶಹಾಪುರದಲ್ಲಿ ಸಿಲುಕಿಕೊಂಡಿದ್ದರು. ಬೇರೆ ದಾರಿಯಿಲ್ಲದೆ ಅಲ್ಲಿಯ ಬುಡಕಟ್ಟು ಸಮುದಾಯದವರೊಂದಿಗೆ 6 ತಿಂಗಳು ಅಲ್ಲೇ ನೆಲೆಸುವಂತಾಯಿತು. ನಂತರ ಮತ್ತೆರಡು ಲಾಕ್ಡೌನ್ನಲ್ಲೂ ಮಹಾರಾಷ್ಟ್ರದಲ್ಲೇ ಜಾಥಾ ನಡೆಸಿದ್ದ ಅವರು ಕೊರೊನಾ ಕಡಿಮೆಯಾದ ಬಳಿಕ ಗುಜರಾತ್, ರಾಜಸ್ಥಾನ, ಹರಿಯಾಣ, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಇದೀಗ ಗೋವಾ ದಾಟಿ ಇದೀಗ ಕರ್ನಾಟಕಕ್ಕೆ ಆಗಮಿಸಿದ್ದ, ಅವರು ಕಾರವಾರದಲ್ಲೂ ತಮ್ಮ ಜಾಗೃತಿ ಸಂದೇಶವನ್ನು ಸಾರಿ ಮುಂದಕ್ಕೆ ಸಾಗಿದ್ದಾರೆ.

ಶಾಲೆ, ಹಳ್ಳಿಗಳಿಗೆ ಭೇಟಿ
ಬ್ರಿಜೇಶ್ ಹೀಗೆ ಸೈಕಲ್ನಲ್ಲಿ ದೇಶ ಪರ್ಯಟನೆ ಮಾಡುವ ಅವರು, ಮಾರ್ಗ ಮಧ್ಯದಲ್ಲಿ ಸಿಗುವವವರಿಗೆ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಏಕಬಳಕೆಯ ಪ್ಲಾಸ್ಟಿಕ್ನಿಂದ ಆಗುವ ವ್ಯತಿರಿಕ್ತ ಪರಿಣಾಮದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಹಳ್ಳಿಗಳಿಗೂ ಭೇಟಿ ನೀಡುವ ಅವರು ರೈತರಿಗೂ ಸಾವಯವ ಕೃಷಿಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

9 ಲಕ್ಷಕ್ಕೂ ಹೆಚ್ಚು ಹೆಚ್ಚು ರೈತರಿಗೆ ಮಾಹಿತಿ
2019 ರಲ್ಲಿ ಜಾಥಾ ಆರಂಭಿಸಿದ ಬ್ರಿಜೇಶ್ "ಈಗಾಗಲೇ 8 ರಾಜ್ಯಗಳನ್ನು ಸುತ್ತಾಡಿ, ಏಳೂವರೆ ಸಾವಿರಕ್ಕೂ ಅಧಿಕ ಗ್ರಾಮಗಳು ಹಾಗೂ 205ಕ್ಕೂ ಅಧಿಕ ನಗರಗಳಿಗೆ ಭೇಟಿ ನೀಡಿದ್ದೇನೆ. ಇದುವರೆಗೆ 36 ಸಾವಿರ ಕಿಲೋ ಮೀಟರ್ ದೂರವನ್ನು ಕೇವಲ ಸೈಕಲ್ ಮೂಲಕವೇ ಕ್ರಮಿಸಿ ಈವರೆಗೂ 30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, 9 ಲಕ್ಷಕ್ಕೂ ಅಧಿಕ ರೈತರಿಗೆ ಮಾಹಿತಿ ನೀಡಿದ್ದೇನೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಊಟ, ವಸತಿ ನೀಡುತ್ತಿರುವ ಜನರು
ಯುವಕ ಭೇಟಿ ನೀಡಿದ ಕೆಲವು ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೆಲವೊಂದು ಗ್ರಾಮಗಳ ಶಾಲೆ, ದೇವಸ್ಥಾನಗಳಲ್ಲಿ ನನ್ನ ಮಾಹಿತಿಯಿಂದ ಏಕಬಳಕೆಯ ಪ್ಲಾಸ್ಟಿಕ್ ಮೇಲೆ ನಿರ್ಭಂದ ಸಹ ವಿಧಿಸಿದ್ದಾರೆ. ಇದರ ಜೊತೆಗೆ ನನಗೆ ಊಟ ತಿಂಡಿ ಕೂಡ ಜನರೇ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಬ್ರಿಜೇಶ್ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ.
ಕಾರವಾರಕ್ಕೆ ಭೇಟಿ ನೀಡಿದ ಬ್ರಿಜೇಶ್ ಕಾರವಾರದಲ್ಲಿಯೂ ಜಾಗೃತಿ ಮೂಡಿಸಿದ್ದಾನೆ. ಇದೀಗ ಅಂಕೋಲಾ, ಕುಮಟಾ, ಭಟ್ಕಳ ಮೂಲಕ ಮುಂದೆ ಪ್ರಯಾಣ ಬೆಳಸಿರುವ ಬಿಜೇಶ್ ಉಡುಪಿ, ದಕ್ಷಿಣ ಕನ್ನಡ ಮಾರ್ಗವಾಗಿ ಕೇರಳ, ಆಂಧ್ರ ಪ್ರದೇಶ ರಾಜ್ಯಗಳತ್ತ ಹೊರಟಿದ್ದು ಭಾರತ ಸುತ್ತಲು ಇನ್ನೂ ಐದಾರು ವರ್ಷಗಳೇ ಬೇಕಾಗಬಹುದು ಎಂದು ಬ್ರಿಜೇಶ್ ಶರ್ಮಾ ಹೇಳಿದ್ದಾರೆ.












Click it and Unblock the Notifications